Minister Madhu Bangarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಎರಡು ದಿನಗಳಿಂದ ಸಚಿವ ಮಧು ಬಂಗಾರಪ್ಪ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಅವರ ಪ್ರವಾಸದ ನಡುವೆ ಸಾಕಷ್ಟು ವಿಚಾರಗಳು ಚರ್ಚೆಯಾಗಿದ್ದು, ಬರ ಪ್ರವಾಹ ಪರಿಸ್ಥಿತಿ ಸೇರಿದಂತೆ ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಹೀಗೆ ಹಲವು ವಿಚಾರಗಳು ಚರ್ಚೆಯಾದವು. ಈ ನಡುವೆ ಅವರ ಭೇಟಿಯ ವೇಳೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು ಸಹ ವರದಿಯಾಗಿದೆ.
ಮೊನ್ನೆ ದಿನ ಸೊರಬಕ್ಕೆ ಭೇಟಿ ನೀಡಿದ್ದ ವೇಳೆ, ಸಚಿವರ ಜೊತೆಗೆ ಬರುತ್ತಿದ್ದವರ ಮೊಬೈಲ್ ಒಂದು ಕಳವಾಗಿತ್ತು. ಜನಜಂಗುಳಿಯ ನಡುವೆ ಕಳ್ಳರು ಕೈ ಚಳಕ ತೋರಿದ್ದು, ಇದೇ ರೀತಿಯಲ್ಲಿ ನಿನ್ನೆ ಶಿವಮೊಗ್ಗದಲ್ಲಿಯು ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಚಿವ ಮಧು ಬಂಗಾರಪ್ಪ ಅವರ ಸನ್ಮಾನ ಕಾರ್ಯಕ್ರಮದಲ್ಲಿಯೇ ಮೊಬೈಲ್ ಮತ್ತು ಹಣ ಕಳುವಾಗಿರುವ ಘಟನೆಗಳು ವರದಿಯಾಗಿವೆ. ಸನ್ಮಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ಶನಿವಾರ ಮಧ್ಯಾಹ್ನ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು. ಪಕ್ಷದ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮದ ವೇಳೆ ಮುಖಂಡರೊಬ್ಬರು ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಿದರು. ಈ ವೇಳೆ ನೂಕು ನುಗ್ಗಲು ಉಂಟಾಗಿತ್ತು. ಅದೇ ಸಂದರ್ಭದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ. ಹನುಮಂತು ಎಂಬುವರ 60 ಸಾವಿರ, ಉಮೇಶ್ ಎಂಬುವರ 50 ಸಾವಿರ, ಹಾಗೂ ಮತ್ತೊಬ್ಬರ ಜೇಬಿನಿಂದ 20 ಸಾವಿರ ಹಣವನ್ನು ಕಳ್ಳರು ಗುಂಪಿನಲ್ಲಿ ಎಗರಿಸಿದ್ದಾರೆ. ಇದೇ ನಾಲೈದು ಜನರ ಮೊಬೈಲ್ಗಳನ್ನು ಸಹ ನಾಪತ್ತೆಯಾಗಿದೆ ಎನ್ನಲಾಗಿದೆ.
ಜನ ಗುಂಪುಗೂಡುವಾಗಲೇ ಹಿರಿಯ ಕ್ರೈಂ ಸಿಬ್ಬಂದಿ ಅಧಿಕಾರಿಗಳಿಗೆ ಫೋನ್ ಕಳ್ತನ , ಪಿಕ್ ಪ್ಯಾಕೆಟ್ ನಡೆಯುವ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹಳೆ ಕಳ್ಳರ ಮುಖಗಳನ್ನು ಪತ್ತೆ ಮಾಡಿ, ಅವರನ್ನ ವಶಕ್ಕೆ ಪಡೆಯುವ ಕೆಲಸ ಮಾಡುತ್ತಾರೆ. ಮಾಬ್ ಸೇರಿದಾಗ ಪೊಲೀಸರು ಈ ಕಾರಣಕ್ಕೆ ಹೆಚ್ಚು ಅಲರ್ಟ್ ಆಗಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಮಾಬ್ ಸೇರಲು ಬಿಡುವುದಿಲ್ಲ. ಹೀಗಿದ್ದರೂ ಕಳ್ಳತನ ನಡೆದಿದೆ ಎಂಬುದು ಇಲಾಖೆಯ ಅಲರ್ಟ್ನೆಸ್ ಕಡಿಮೆಯಾಯಿತೆ? ಎಂಬ ಪ್ರಶ್ನೆ ಮುಂದಿಟ್ಟಿದೆ.
