Shivamogga Mar 20, 2024 Sri Chowdeshwari Temple in Sigandur ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಸಂಸದ ಬಿ.ವೈ.ರಾಘವೇಂದ್ರರವರು ಪ್ರಧಾನಿ ನರೇಂದ್ರ ಮೋದಿಯವರು ಬಂದು ಸಮಾವೇಶ ಯಶಸ್ವಿ ಮಾಡಿಕೊಟ್ಟ ಕ್ಷಣವನ್ನು ಮತಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಇದರ ನಡುವೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪನವರ ಸ್ಪರ್ಧೆ ಕೂಡ ಬಹುತೇಕ ನಿಕ್ಕಿಯಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಮಠ, ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ಜೊತೆಯಲ್ಲಿಯೇ ಹೋದಲ್ಲಿ ತಮ್ಮ ಅಭಿಮಾನಿಗಳ ಸಭೆ ನಡೆಸ್ತಿದ್ದಾರಷ್ಟೆ ಅಲ್ಲದೆ ಮಠಗಳ ಸ್ವಾಮೀಜಿಗಳು, ಅವದೂತರು, ಧಾರ್ಮಿಕ ಮುಖಂಡರನ್ನ ಭೇಟಿ ಮಾಡಿ ತಮ್ಮ ಸ್ಪರ್ಧೆಯ ಅವಶ್ಯಕತೆಯನ್ನು ತಿಳಿಸುತ್ತಿದ್ದಾರೆ.
ವಿಶೇಷ ಅಂದರೆ, ಈ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿಯ ಆಶೀರ್ವಾದ ತಮಗೆ ಸಿಕ್ಕಿದೆ ಎಂಬ ಅಭಿಪ್ರಾಯವನ್ನು ಕೆಎಸ್ಇ ತಮ್ಮ ಕಾರ್ಯಕರ್ತರ ಬಳಿ ಹಂಚಿಕೊಂಡಿದ್ದಾರೆ. ಇವತ್ತು ಗುಂಡಪ್ಪ ಶೆಡ್ ನಲ್ಲಿರುವ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕೆಎಸ್ ಈಶ್ವರಪ್ಪ ಹೇಳಿದ್ದೇನು?
ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ರಿಯು ಆದ ರಾಮಪ್ಪನವರನ್ನು ಸಂರ್ಪಕಿಸಿದ್ದ ಕೆಎಸ್ ಈಶ್ವರಪ್ಪ ಅವರ ಬೆಂಬಲವನ್ನು ಕೋರಿದ್ದಾರೆ. ಈ ವೇಳೆ ನಿಜವಾಗಲು ಚುನಾವಣೆಗೆ ನಿಲ್ಲುತ್ತೀರಾ ಎಂದು ರಾಮಪ್ಪನವರು ಪ್ರಶ್ನಿಸಿದ್ದರಂತೆ.. ಈ ಬಗ್ಗೆ ಮಾತನಾಡಿದ ಕೆಎಸ್ ಈಶ್ವರಪ್ಪ, ಇಂತಹದ್ದೊಂದು ಪ್ರಶ್ನೆ ಈಗಲೂ ಸಹ ಇದೆ ಎಂದರಷ್ಟೆ ಅಲ್ಲದೆ ರಾಮಪ್ಪನವರಿಗೆ ನಾನು ಎಲೆಕ್ಷನ್ಗೆ ಸ್ಪರ್ಧೆ ಮಾಡುತ್ತಿರುವುದು ನೂರಕ್ಕೆ ನೂರು ನಿಜ ಎಂದಿದ್ದಾರೆ.
ಅಲ್ಲದೆ ತಮ್ಮ ಸ್ಪರ್ಧೆಯನ್ನು ಸ್ಪಷ್ಟಗೊಳಿಸಿದ ಬಳಿಕ ರಾಮಪ್ಪನವರು ಇವತ್ತು ಯಾರಿಗೂ ತಿಳಿಸದೇ ಬೆಳಗಿನ ಜಾವ ಐದಕ್ಕೆ ಸಿಗಂದೂರು ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ರು, ನಾನು ನನ್ನ ಮಗ ಮತ್ತು ಸೊಸೆ ಮೂವರು ಸಿಗಂದೂರಿಗೆ ಹೋಗಿದ್ದೇವು. ಯಾರಿಗೂ ವಿಷಯ ತಿಳಿಸಿರಲಿಲ್ಲ. ಹೋಗಿ ಬಂದು ಈಗ ವಿಚಾರ ಹೇಳುತ್ತಿದ್ದೇನೆ. ಹಾಗೆ ಸಿಗಂದೂರಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲೊಬ್ಬರು ವಿಧ್ವಾಂಸರನ್ನು ಕರೆಸಿದ್ದರು. ಅವರ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯ್ತು. ಆ ವೇಳೆಯಲ್ಲಿ ಸಿಗಂದೂರು ದೇವಿಯ ತಲೆಯ ಮೇಲಿಂದ ಹೂವಿನ ಪ್ರಸಾಧವಾಯ್ತು ಎಂದು ಕೆಎಸ್ಇ ಈಶ್ವರಪ್ಪನವರು ಹೇಳಿದ್ರು. ಇಷ್ಟೆ ಅಲ್ಲದೆ ಅಲ್ಲಿಗೆ ಬಂದಿದ್ದ ವಿಧ್ವಾಂಸರೊಬ್ಬರು ಕೆಲವೊಂದು ಹೋಮ ಮಾಡಲು ತಿಳಿಸಿದ್ದು ಗೆಲುವಿನ ವಿಶ್ವಾಸ ನೀಡಿರುವುದಾಗಿ ತಿಳಿಸಿದ್ದಾರೆ.