ವರದಾ ನದಿಯಲ್ಲಿ ಜೀವನ್ಮರಣದ ಹೋರಾಟ: ಎಮ್ಮೆಯ ಕರುವನ್ನು ರಕ್ಷಿಸಿದ ಅಗ್ನಿಶಾಮಕ ದಳ! #shivamogga

ವರದಾ ನದಿಯಲ್ಲಿ ಜೀವನ್ಮರಣದ ಹೋರಾಟ: ಎಮ್ಮೆಯ ಕರುವನ್ನು ರಕ್ಷಿಸಿದ ಅಗ್ನಿಶಾಮಕ ದಳ!

ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ಪಟ್ಟಣದ ಸೊರಬ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಂಬಾ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ವರದಾ ನದಿಗೆ ಆಕಸ್ಮಿಕವಾಗಿ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಎಮ್ಮೆಯ ಕರುವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ನೀರಿನ ಸೆಳೆತ ಹಾಗೂ ನದಿಯ ಆಳವಾದ ಭಾಗದ ಕೆಸರಿನಲ್ಲಿ ಸಿಲುಕಿ ಕರುವು ದೀರ್ಘಕಾಲದವರೆಗೆ ಹೊರಬರಲು ಸಾಧ್ಯವಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣವೇ ಸಾಗರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ವಿನಾಯಕ ಹೆಗ್ಗ ನಾಯಕ ಅವರ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. ಸತತ 1 ಗಂಟೆಯ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯ ನೀರಿನ ಸೆಳೆತದ ನಡುವೆಯೂ ಕರುವನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನದಿಯ ಕೆಸರಿನಲ್ಲಿ ಸಿಲುಕಿದ್ದ ಕರುವನ್ನು ಹೊರತೆಗೆಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಿನಾಯಕ ಹೆಗ್ಗ ನಾಯಕ ಅವರೊಂದಿಗೆ ಸಿಬ್ಬಂದಿಗಳಾದ ಸಂತೋಷ್ ಬಿ., ಗಣೇಶ್ ಆರ್ ಶೇಟ್, ಮಾರುತಿ ಬಡಿಗೇರ, ಚಾಲಕ ಆನಂದ ವಡ್ಡರ್, ರಾಜೇಂದ್ರ ಕುಮಾರ್ ಸಿ.ಜಿ., ವಿಶ್ವನಾಥರೆಡ್ಡಿ ಜಿ., ಮೈನೋದ್ದಿನ್ ನೂರಅಹ್ಮದ್ ಮುಲ್ಲಾ, ಸುನೀಲ ಮೋರೆ ಹೆಚ್.ಟಿ. ಹಾಗೂ ಭೀಮ್ ರಾಜ್ ಅವರು ಪಾಲ್ಗೊಂಡಿದ್ದರು. ಪಾರಾದ ಕರುವನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಸಕಾಲದಲ್ಲಿ ಸ್ಪಂದಿಸಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

#Sagara #VaradaRiver #AnimalRescue #FireDepartment #FireFighters #ShimogaNews #MalenaduToday #KarnatakaNews #LocalNews #Humanity #Shivamogga