“ರೈತರ ಮನೆ ಒಡೆಯಲು ಹೇಳಿದ್ಯಾರು?” ಫಾರೆಸ್ಟ್​ನೋರಿಗೆ ಎಂಎಲ್​ಎ ಕ್ಲಾಸ್!

“ರೈತರ ಮನೆ ಒಡೆಯಲು ಹೇಳಿದ್ಯಾರು?” ಫಾರೆಸ್ಟ್​ನೋರಿಗೆ ಎಂಎಲ್​ಎ ಕ್ಲಾಸ್!

ಮಲೆನಾಡು ಟುಡೆ ಸುದ್ದಿ / ಸಾಗರ / ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿರುವ ವಿಡಿಯೋವೊಂದು ಲಭ್ಯವಾಗಿದೆ.. ಸಾಗರ ಭಾಗದಲ್ಲಿ ಒತ್ತುವರಿ ತೆರವುಗೊಳಿಸ್ತಿರುವ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಶಾಸಕರು ಅರಣ್ಯಾಧಿಕಾರಿಗಳಿಗೆ ರೈತರ ಮೇಲಿನ ದೌರ್ಜನ್ಯದ ಬಗ್ಗೆ ಖಡಕ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ರೈತರ ಮನೆಗಳನ್ನು ಒಡೆದು ಹಾಕಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, “ಸರ್ಕಾರ ಇರೋದು ನಮಗೆ, ನಮಗೇನು ಬುದ್ಧಿ ಇಲ್ವಾ? ಏನಾದರೂ ಬೇಕಿದ್ದರೆ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳಿ, ರಾತ್ರೋರಾತ್ರಿ ಹೋಗಿ ರೈತರ ಮನೆ ಒಡೆಯೋಕೆ ನಿಮಗೆ ಅಧಿಕಾರ ಕೊಟ್ಟಿದ್ದ್ಯಾರು?” ಅಂಥಾ ಪ್ರಶ್ನಿಸಿದ್ರು.

“ಕಾಡು ಬೆಳೆಸಬೇಕು, ಪರಿಸರ ಉಳಿಸಬೇಕು ನಿಜ, ಆದರೆ ನೀವು ರೈತರನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ?” ಎಂದು ಪ್ರಶ್ನಿಸಿದ ಶಾಸಕರು, “ನಾವು ಎಂದಿಗೂ ರೈತರ ವಿರುದ್ಧ ಹೋಗಿಲ್ಲ, ರೈತರಿಗೆ ತೊಂದರೆ ಕೊಡಲು ಹೇಳಿಲ್ಲ. ಹೊಸ ಮನೆಗಳನ್ನು ಕಟ್ಟದಂತೆ ತಡೆಯಿರಿ, ಆದರೆ ಹಳೆಯ ಮನೆಗಳಿದ್ದರೆ ಇರಲಿ ಬಿಡಿ. ಯಾರಾದರೂ ಮದುವೆಗೆ ಟೆಂಟ್ ಹಾಕಿದ್ರೆ ಅದನ್ನೂ ಕಿತ್ತೆಸೆದು ಬರೋದರಲ್ಲಿ ಯಾವ ಮನುಷ್ಯತ್ವ ಇದೆ?” ಎಂದು ಕಟುವಾಗಿ ಟೀಕಿಸಿದರು.

ಜನಪ್ರತಿನಿಧಿಗಳಾದ ನಮ್ಮನ್ನೇ ಕತ್ತಲಲ್ಲಿಟ್ಟು ಈ ರೀತಿ ದೌರ್ಜನ್ಯ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, “ಯಾರೋ ಬಂದು ಸ್ಟ್ರೈಕ್ ಮಾಡಿದ ತಕ್ಷಣ, ನೀವು ನಮಗೆ ಕೆಟ್ಟ ಹೆಸರು ತರೋ ಕೆಲಸ ಮಾಡ್ತೀರಾ?” ಎಂದು ಅಸಮಾಧಾನ ಹೊರಹಾಕಿದರು. ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಶಾಸಕರು, “ಎಲ್ಲರೂ ಸೇರಿ ಒಂದು ಮೀಟಿಂಗ್ ಮಾಡೋಣ, ಅಲ್ಲಿಯವರೆಗೆ ರೈತರ ತಂಟೆಗೆ ಹೋಗಬೇಡಿ” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ರೈತರ ಹಿತರಕ್ಷಣೆಗಾಗಿ ಬೇಳೂರು ಗೋಪಾಲಕೃಷ್ಣ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ಈ ವಿಡಿಯೋ ಈಗ ವೈರಲ್ ಆಗಿದೆ.

#BelurGopalakrishna #Sagara #ForestDepartment #FarmersIssue #MalenaduToday #KarnatakaPolitics #ShivamoggaNews #CongressMLA