ಶಂಕರಘಟ್ಟ: ಕುಲಪತಿ ವಜಾ ಆಗುವವರೆಗೂ ಹೋರಾಟ ಮುಂದುವರೆಸುತ್ತೇವೆ
ಕುವೆಂಪು ವಿಶ್ವವಿದ್ಯಾಲಯದ ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಿಸಿ ಎನ್ಎಸ್ಯುಐ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕುಲಪತಿಗಳು, ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರ ಗಮನಕ್ಕೆ ತಂದರೂ ಕೇವಲ ‘ತಾಂತ್ರಿಕ ಸಮಸ್ಯೆ’ ಎಂಬ ಸಬೂಬು ನೀಡಿ ಕಾಲಹರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷಾ ಫಲಿತಾಂಶಗಳಲ್ಲಿನ ಗೊಂದಲಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಮೊದಲು ಪಾಸ್ ಎಂದು ಬಂದಿದ್ದ ಫಲಿತಾಂಶಗಳು ಅಂಕಪಟ್ಟಿ ನೀಡುವ ಸಮಯದಲ್ಲಿ ‘ಫೇಲ್’ ಎಂದು ಬದಲಾಗುತ್ತಿವೆ. ಇದು ವಿಶ್ವವಿದ್ಯಾಲಯದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಆಡಳಿತ ನಡೆಸುವ ಸಾಮರ್ಥ್ಯ ಇಲ್ಲದ ಕುಲಪತಿಗಳು ಮತ್ತು ಕುಲಸಚಿವರನ್ನು ಸರ್ಕಾರ ತಕ್ಷಣವೇ ವಜಾಗೊಳಿಸಬೇಕು. ದಕ್ಷ ಅಧಿಕಾರಿಗಳನ್ನು ಈ ಸ್ಥಾನಗಳಿಗೆ ನೇಮಕ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
#KuvempuUniversity, #NSUIProtest, #Shivamogga, #EducationCrisis, #UniversityResultIssue, #Shankaraghatta, #KarnatakaEducation, #StudentMovement, #VCVaje, #NSUIKarnataka, #VijayKumarNSUI, #KuvempuUniversityNews, #MalnadToday
