SHIVAMOGGA | Jan 11, 2024 | ಸಾವು ಯಾವಾಗ ಹೇಗೆ ಬರುತ್ತದೆ ಯಾರಿಗೂ ತಿಳಿಯದು. ಆದರೆ ಕೆಲವೊಂದು ಸಾವುಗಳು ಭಾವುಕತೆಯಲ್ಲಿ ಬೆಸೆದುಕೊಂಡು ಬಿಡುತ್ತವೆ. ಅಂತಹದ್ದೊಂದು ಭಾವುಕ ಘಟನೆ ಶಿವಮೊಗ್ಗ ಜಿಲ್ಲೆ ಯ ಹೊಸನಗರ ತಾಲ್ಲೂಕು ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಮುಂಬಾರು ಗ್ರಾಮ ಪಂಚಾಯಿತಿ
ಇಲ್ಲಿನ ಸಾವಂತೂರು ಗ್ರಾಮದ ಸಾಲತೋಡೆಯ ನಿವಾಸಿಯೊಬ್ಬರು ಇವತ್ತು ಬೆಳಗ್ಗಿನ ಜಾವ ನಿಧನರಾಗಿದ್ದರು. ಅದರ ಬೆನ್ನಲ್ಲೆ ಅವರ ಪತ್ನಿ ಕೂಡ ಸಾವನ್ನಪ್ಪಿದ್ದಾರೆ. ನಿವಾಸಿ ಹೊಳೆಯಪ್ಪರವರಿಗೆ 90 ವರ್ಷ ವಯಸ್ಸಾಗಿತ್ತು ಅವರ ಪತ್ನಿಗೆ ಗಂಗಮ್ಮರಿಗೆ 84 ವರ್ಷ ವಯಸ್ಸಾಗಿತ್ತು.
ಇವತ್ತು ಬೆಳಗ್ಗೆ ಹೊಳೆಯಪ್ಪರವರು ವಯೋಸಹಜ ಅನಾರೋಗ್ಯ ದಿಂದ ನಿಧನರಾಗಿದ್ದರು. ಈ ವಿಚಾರ ತಿಳಿದ ಗಂಗಮ್ಮರಿಗೆ ಹೃದಯಾಘಾತವಾಗಿದೆ. ಅವರು ಸಹ ಸಾವನ್ನಪ್ಪಿದ್ದಾರೆ. ತುಂಬು ಜೀವನದ ಸಂಸಾರದಲ್ಲಿ ಜೊತೆಗಿದ್ದ ಪತಿಯ ಜೊತೆಗೆ ಸಾವಿನಲ್ಲೂ ಗಂಗಮ್ಮ ಜೊತೆಯಾಗಿದ್ದಾರೆ.
ಈ ದಂಪತಿಗೆ ಇಬ್ಬರು ಗಂಡು ಹಾಗೂ ಐವರು ಹೆಣ್ಣುಮಕ್ಕಳಿದ್ದಾರೆ. ಇವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಊರಿನವರು ಸಂತಾಪ ಸೂಚಿಸುತ್ತಾ ಇಬ್ಬರು ದಂಪತಿಗಳು ಸಾವಿನಲ್ಲಿಯು ಒಂದಾದುರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.