ತೀರ್ಥಹಳ್ಳಿ : ಮನೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದ್ದ ವೇಳೆ ಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು ಬರೋಬ್ಬರಿ 182 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಆಗುಂಬೆ ವ್ಯಾಪ್ತಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಗಾರೆ ಕೆಲಸ ನಡೆಯುತ್ತಿತ್ತು. ಭದ್ರತೆಯ ದೃಷ್ಟಿಯಿಂದ ಮನೆಯ ಮೇಲಿನ ಅಂತಸ್ತಿನ ಬೀರುವಿನಲ್ಲಿ ಒಡವೆಗಳನ್ನು ಇರಿಸಲಾಗಿತ್ತು. ದೂರುದಾರರ ಮಗಳು ಏಪ್ರಿಲ್ 4 ರಂದು ಶಿವಮೊಗ್ಗದಿಂದ ತವರು ಮನೆಗೆ ಬಂದಾಗ, ಶುಭ ಕಾರ್ಯವೊಂದರಲ್ಲಿ ಧರಿಸಲು ತಮ್ಮ ಒಡವೆಗಳನ್ನು ತಂದಿದ್ದರು. ಅವುಗಳನ್ನು ಕೂಡ ಅದೇ ಬೀರುವಿನಲ್ಲಿ ಇರಿಸಲಾಗಿತ್ತು.
ಮೇ 7 ರಂದು ರಾತ್ರಿ ಬೀರು ಪರಿಶೀಲಿಸಿದಾಗ ಮಗಳಿಗೆ ಸೇರಿದ ಬಂಗಾರದ ಆಭರಣಗಳಿದ್ದ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಒಡವೆಗಳ ಒಟ್ಟು ತೂಕ 182 ಗ್ರಾಂ ಆಗಿದ್ದು, ಇದರ ಬೆಲೆ 23,66,000 ರೂಪಾಯಿ. ಎಂದು ಅಂದಾಜಿಸಲಾಗಿದೆ.
ಮನೆಯ ಬಾಗಿಲು ಅಥವಾ ಬೀಗ ಮುರಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ಮನೆಯಲ್ಲಿ ಗಾರೆಚಕೆಲಸ ಮಾಡುತ್ತಿದ್ದ ಮೇಲೆ ಸಂಶಯ ವ್ಯಕ್ತಪಡಿಸಿ ದೂರುದಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
