ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಲು ಹರಸಾಹಸ!

ಹಂಚಿಕೊಳ್ಳಿ
WhatsApp Facebook X Telegram
Stories of Sakrebail Elephant Camp

Stories of Sakrebail Elephant Camp ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಎರಡು ಮಕ್ಕಳನ್ನು ಪೊರೆದರೂ, ಅವು ಬದುಕುಳಿಯಲಿಲ್ಲ. ಮೂರನೇ ಮಗು ಹುಟ್ಟಿದಾಗಲೂ ಆಕೆ, ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನು ಕ್ಷಣಾರ್ದದಲ್ಲಿಯೇ ಕಾಲಿನಿಂದ ಒದ್ದು ದೂರವಾದಳು. ಈಗ ಮೂರನೇ ಮಗುವೂ ಕೂಡ ಹೊಸಜೀವನಕ್ಕಾಗಿ ಹಂಬಲಿಸುತ್ತಿದೆ.ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ನೋಡಿ.

ಸಕ್ರೆಬೈಲು ಆನೆ ಬಿಡಾರ ದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು ತಕ್ಷಣಕ್ಕೆ ಹೇಳುತ್ತಾರೆ. ಸೌಮ್ಯ ಸ್ವಭಾವದ ಭಾನುಮತಿ 2014 ರಲ್ಲಿ ಮರಿಯಾನೆಯೊಂದಿಗೆ ಸೆರೆಹಿಡಿಯಲ್ಪಟ್ಟ ಆನೆ. ಆನೆಯನ್ನು ಸಕ್ರೆಬೈಲು ಕ್ರಾಲ್ ನಲ್ಲಿ ಪಳಗಿಸಿ,

ಕೆಲವೇ ದಿನಗಳಲ್ಲಿ ಮಾವುತರು ಬಾನುಮತಿ ಹೆಗಲೇರಿದ್ದು ಒಂದು ದಾಖಲೆಯೇ ಸೈ. ಇಂತಹ ಸೌಮ್ಯ ಸ್ವಭಾವದ ಭಾನುಮತಿಗೆ ತಾನು ತಾಯ್ತನವನ್ನು ಪೂರೈಸಬೇಕೆಂಬ ಹಂಬಲವಿದ್ದರೂ, ಅದ್ಯಾಕೋ ಆಕೆಯ ಆರೋಗ್ಯ ಕೈಕೊಡುತ್ತಿದೆ. ತಾನು ಪೊರೆದ ಮಗುವಿಗೆ ಹಾಲುಣಿಸಲು ಭಾನುಮತಿಗೆ ಸಾಧ್ಯವಾಗುತ್ತಿಲ್ಲ. ದೇಹದೊಳಗೆ ಹಾಲು ಉತ್ಪತ್ತಿಯಾಗುತ್ತಿಲ್ಲ. ಹೀಗಾಗಿ ತಾನು ಜನ್ಮ ನೀಡಿದ ಮರಿಯಾನೆಗೆ ಹಾಲುಣಿಸಲು ಸಾದ್ಯವಾಗದೇ,ಭಾನುಮತಿ ಮಗುವಿಂದ ದೂರವಾಗಿದ್ದಾಳೆ.

ಮೊನ್ನೆ ಸಕ್ರೆಬೈಲಿನ ಕ್ರಾಲ್ ಬಳಿ ಭಾನುಮತಿ ಹೆಣ್ಣುಮರಿಗೆ ಜನ್ಮ ನೀಡಿದ ತಕ್ಷಣವೇ ಕಾಲಿನಿಂದ ಒದ್ದು ದೂರವಾಗಿದ್ದಾಳೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್, ಮತ್ತೆ ಮರಿಯನ್ನು ತಾಯಿಯ ಬಳಿ ಕರೆತಂದಿದ್ದಾರೆ. ಆದರೆ ಭಾನುಮತಿ ಮಾತ್ರ ತನ್ನ ಮಗುವಿನ ಜೊತೆ ದಿನದೂಕಲು ಇಷ್ಟವಿಲ್ಲದೆ ದೂರವಾದಳು. ಆದರೂ ವೈದ್ಯರು ಬಿಡದೆ ಮರಿಯಾನೆಗೆ ತಾಯಿಯಿಂದ ಹಾಲುಣಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಭಾನುಮತಿ ಮಾತ್ರ ಸ್ಪಂಧಿಸಲೇ ಇಲ್ಲ.

ಸಾಮಾನ್ಯವಾಗಿ ಪ್ರಾಣಿಗಳಲ್ಲಿ ತಾಯಿ ಜನ್ಮ ನೀಡಿದಾಗ,ಮರಿಯನ್ನೇ ತಿನ್ನುವ, ಇಲ್ಲವೇ ದೂರ ಮಾಡುವ ಹಾಗು ಕೊಲ್ಲುವ ಪ್ರವೃತ್ತಿ ಪ್ರಕೃತಿದತ್ತವಾಗಿ ಬಂದಿದೆ. ಇದು ಆನೆಗಳಿಗೂ ಅನ್ವಯಿಸುತ್ತದೆ ಎನ್ನುತ್ತಾರೆ ಡಾಕ್ಟರ್ ವಿನಯ್.ಭಾನುಮತಿ ತಾಯಿಯಾಗಲು ಯೋಗ್ಯಳಾಗಿದ್ದಳೂ,ಈ ಹಿಂದೆ ಜನ್ಮ ನೀಡಿದ ಎರಡು ಮರಿಗಳು ಬದುಳಿದಿಲ್ಲ. ತಾಯಿಯ ಹಾಲಿನ ಪೌಷ್ಠಿಕತೆ ಮಗುವಿಗೆ ದಕ್ಕದಿದ್ದರೆ, ಅದು ಆರೋಗ್ಯಪೂರ್ಣವಾಗಿ ಬೆಳೆಯಲು ಸಾಧ್ಯವಿಲ್ಲ. ಅದೇ ರೀತಿ ಭಾನುಮತಿ ದೇಹದಲ್ಲಿ ಹಾಲಿನ ಉತ್ಪಾದನೆಯಾಗುತ್ತಿಲ್ಲ.ಹೀಗಾಗಿ ಅದು ಸಹಜವಾಗಿ ಮರಿಯನ್ನು ದೂರ ಮಾಡಿದೆ.

ಹುಟ್ಟಿದ ಮರಿ ಕೇವಲ 50 ಕೇಜಿ

ಸಾಮಾನ್ಯವಾಗಿ ಆಗ ತಾನೆ ಜನ್ಮ ತಾಳಿದ ಮರಿಯಾನೆ 90 ರಿಂದ 100 ಕೇಜಿ ತೂಗುತ್ತದೆ .ಆದರೆ ಭಾನುಮತಿ ಜನ್ಮ ನೀಡಿರುವ ಮರಿಯಾನೆ ಕೇವಲ 50 ಕೇಜಿ ತೂಗಿದರೆ ಹೆಚ್ಚು. ಇದಲ್ಲದೆ ಮರಿಯಾನೆಗೆ ತಾಯಿಯ ಹಾಲು ಸಿಗುತ್ತಿಲ್ಲ. ಹೀಗಾಗಿ ವೈದ್ಯರು ಹಾಲಿನ ಪುಡಿಯ ಹಾಲನ್ನು ನಿಪ್ಪಲ್ ಮೂಲಕ ಮರಿಯಾನೆಗೆ ಹಾಲು ನೀಡುತ್ತಿದ್ದಾರೆ. ತಾಯಿಯ ಬಳಿಯೇ ಹಾಲನ್ನು ನೀಡಲಾಗುತ್ತಿದೆ. ಹುಟ್ಟಿದ ಮಗುವಿಗೆ ತಾಯಿ ಹಾಲಿನ ಭಾಗ್ಯ ಸಿಗದಿದ್ದರೆ, ಆರೋಗ್ಯಪೂರ್ಣವಾಗಿ ಬೆಳೆಯುವುದು ಕಷ್ಟ. ಇದರ ಹಿನ್ನೆಲೆಯಲ್ಲಿ ಈ ಮೊದಲು ಹುಟ್ಟಿದ್ದ ಮರಿಗಳು ಸಾವನ್ನಪ್ಪಿದ್ದವು. ಇದೀಗ ಮೂರನೇ ಮರಿಯಾನೆಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಬಿಡಾರದ ವೈದ್ಯರು ಹಾಗು ಸಿಬ್ಬಂದಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಬಾನುಮತಿ ಮಾತ್ರ ನನಗೂ ಮಗುವಿಗೂ ಸಂಬಂಧವೇ ಇಲ್ಲದಂತೆ ಹಾಯಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor