ಹಣ ಮರುಪಾವತಿಸಲು ಬ್ಯಾಂಕ್​ ವಿಫಲ : ಗ್ರಾಹಕ ನ್ಯಾಯಾಲಯ ವಿಧಿಸಿದ ದಂಡವೆಷ್ಟು..? 

ಶಿವಮೊಗ್ಗ | ತನ್ನ ಖಾತೆದಾರರ ಉಳಿತಾಯ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಹಣವನ್ನು ಮರುಪಾವತಿಸಲು ವಿಫಲವಾದ ಕೆನರಾ ಬ್ಯಾಂಕಿಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರೀ ದಂಡ ವಿಧಿಸಿದೆ. ತನಿಖೆ ನಡೆಸುವಲ್ಲಿ ನಿರ್ಲಕ್ಷ್ಯ ತೋರಿದ ಬ್ಯಾಂಕಿನ ನಡವಳಿಕೆಯನ್ನು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಆಯೋಗವು ಈ ಮಹತ್ವದ ತೀರ್ಪು ನೀಡಿದೆ. 

 ಶಿವಮೊಗ್ಗದ ಪ್ರಸಿದ್ದ ರೆಸಾರ್ಟ್​ಮಾಲೀಕರ ಕಾರು ಡ್ರೈವರ್​​ನ್ನು ಅಡ್ಡಗಟ್ಟಿ ದರೋಡೆ, ಹಲ್ಲೆ!

ಏನಿದು ಪ್ರಕರಣ? 

ಶಿವಮೊಗ್ಗದ ಬಾಲರಾಜ್ ರಸ್ತೆಯ ನಿವಾಸಿ ಆದೇಶ ಕೆ.ಎನ್. ಎಂಬುವವರು ಕೆನರಾ ಬ್ಯಾಂಕಿನ  ಶಾಖೆಯೊಂದರಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರು. ಕಳೆದ 2024ರ ಮೇ 04ರಂದು ಅವರ ಮೊಬೈಲ್‌ಗೆ ಬಂದ ಎರಡು ಎಸ್‌ಎಂಎಸ್‌ಗಳು ಅವರನ್ನು ಆತಂಕಕ್ಕೀಡುಮಾಡಿದ್ದವು. ಮೊದಲು ಬಂದ ಮೆಸೇಜ್​ನಲ್ಲಿ  5 ಲಕ್ಷ ರೂಪಾಯಿ ಹಾಗೂ ಎರಡನೇ ಮೆಸೇಜ್​ನಲ್ಲಿ  50 ಸಾವಿರ ರೂಪಾಯಿ ಕಡಿತವಾಗಿರುವುದು ಕಂಡುಬಂದಿತ್ತು. ತಕ್ಷಣ ಅವರು ಬ್ಯಾಂಕ್ ಮ್ಯಾನೇಜರ್ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರೂ, ಬ್ಯಾಂಕ್ ಹಣವನ್ನು ವಾಪಸ್ ಮಾಡುವಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

ದೂರುದಾರರು ಮತ್ತು ಬ್ಯಾಂಕ್ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠವು ಬ್ಯಾಂಕಿನ ತಪ್ಪಿರುವುದು ಕಂಡುಬಂದಿದೆ. ಆರ್‌ಬಿಐ (RBI) ನಿಯಮಗಳ ಪ್ರಕಾರ ಬ್ಯಾಂಕ್ ತನಿಖೆ ನಡೆಸಿ ಹಣವನ್ನು ಜಮೆ ಮಾಡಬೇಕಿತ್ತು. ಆದರೆ ಬ್ಯಾಂಕ್ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಕಡಿತಗೊಂಡ 5,50,000 ರೂಪಾಯಿಗಳನ್ನು ಅನ್ವಯಿತ ಬಡ್ಡಿಯೊಂದಿಗೆ 45 ದಿನಗಳೊಳಗೆ ಗ್ರಾಹಕರಿಗೆ ಮರಳಿಸಬೇಕು ಎಂದು ಆದೇಶಿಸಿದೆ. 

ಒಂದು ವೇಳೆ ನಿಗದಿತ 45 ದಿನಗಳಲ್ಲಿ ಹಣ ಪಾವತಿಸದಿದ್ದರೆ, ಬ್ಯಾಂಕ್ ವಾರ್ಷಿಕ ಶೇ. 10ರ ಬಡ್ಡಿಯನ್ನು ಸೇರಿಸಿ ಹಣ ನೀಡಬೇಕಾಗುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆ ಮತ್ತು ದೂರಿನ ಖರ್ಚು-ವೆಚ್ಚಕ್ಕಾಗಿ ಪ್ರತ್ಯೇಕವಾಗಿ 30,000 ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯವು ಬ್ಯಾಂಕಿಗೆ ನಿರ್ದೇಶನ ನೀಡಿದೆ.

Shimoga Consumer Court Consumer Court fined a bank in Shivamogga
Shimoga Consumer Court Consumer Court fined a bank in Shivamogga

Shimoga Consumer Court Fines Canara Bank