SHIVAMOGGA | Jan 27, 2024 | ಸಂಸತ್ ಚುನಾವಣೆ ಸಮೀಪಿಸುತ್ತಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳು ಪೂರ್ತಿಯಾಗಿ ಜನರಸೇವೆಗೆ ಲಭ್ಯವಾಗುತ್ತಿದೆ. ಕಾಮಗಾರಿಗಳ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಇದ್ದರೂ ಸಹ ಜನರ ಸೇವೆಗೆ ಕಾಮಗಾರಿಗಳು ಲಭ್ಯವಾಗುತ್ತಿರುವುದು ವಿಶೇಷ.
ಇತ್ತೀಚೆಗೆ ಮಂಡ್ಲಿ ಸಮೀಪದ ತುಂಗಾ ಹೊಸ ಸೇತುವೆ ಪೂಜೆ, ಪುನಸ್ಕಾರದೊಂದಿಗೆ ಚಾಲನೆಗೊಂಡಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರ, ನಮ್ಮ ಮಂತ್ರಿ, ನಮ್ಮ ಕೊಡುಗೆ ಎಂದಿದ್ದರು. ಇದರ ಬೆನ್ನಲ್ಲೆ ಇದೀಗ ಸವಳಂಗ ರಸ್ತೆಯಲ್ಲಿರುವ ಮೇಲ್ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಂಡಿದೆ. ಇದು ಉದ್ಘಾಟನೆಯಂತು ಅಲ್ಲ, ಆದಾಗ್ಯು ರಾಜಕಾರಣ ಇಲ್ಲದೆ ಇಲ್ಲ.

ಇನ್ನೂ ವಿಷಯಕ್ಕೆ ಬರುವುದಾದರೆ, ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಒದಗಿಸಲಾಗಿದೆ. ನಿನ್ನೆ ಈ ಸಂಬಂಧ ಸೇತುವೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ತಂಡ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದ್ರು.
ಸದ್ಯ ಲಘು ವಾಹನಗಳಿಗೆ ಮಾತ್ರ ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿದೆ. ಮೂಲಗಳ ಪ್ರಕಾರ ಮುಂದಿನ ವಾರದಿಂದ ಹೆವಿ ವೆಹಿಕಲ್ಗಳು ಸಹ ಸೇತುವೆ ಮೇಲೆ ಸಂಚಾರ ಮಾಡಬಹುದು. ಇನ್ನೂ ಶಿವಮೊಗ್ಗದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೇ ಮೇಲ್ಸೇತುವೆ ಸಹ ಸದ್ಯದಲ್ಲಿಯೇ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.