SHIVAMOGGA | Jan 27, 2024 | ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಟಾಪನೆ ನಿರ್ವಿಘ್ನವಾಗಿ ನಡೆದಿದೆ. ಲಕ್ಷಾಂತರ ಭಕ್ತರು ಬಾಲಕರಾಮನ ದರ್ಶನಕ್ಕೆ ತೆರಳುತ್ತಿದ್ದಾರೆ. ಇದರ ನಡುವೆ ಪ್ರತಿಷ್ಟಾಪನೆಯಾಗದೇ ಇರುವ ಬಾಲಕರಾಮನ ಮೂರ್ತಿಗಳ ಬಗ್ಗೆ ಚರ್ಚೆ ನಡೆದಿದ್ದು ಆ ಪೈಕಿ ಕರ್ನಾಟಕದವರೇ ಆದ ಗಣೇಶ್ ಭಟ್ ಕೆತ್ತಿರುವ ಬಾಲಕರಾಮನ ಮೂರ್ತಿಯನ್ನು ರಾಜ್ಯದಲ್ಲಿಯೇ ಪ್ರತಿಷ್ಟಾಪಿಸಿ ರಾಮಮಂದಿರ ನಿರ್ಮಿಸುವ ಅಪೇಕ್ಷೆಯನ್ನು ಪಕ್ಷಾತೀತವಾಗಿ ವ್ಯಕ್ತಪಡಿಸಲಾಗುತ್ತಿದೆ.

ರಾಮನಗರ ಹಾಗೂ ಮೈಸೂರು ಭಾಗದ ಜನಪ್ರತಿನಿಧಿಗಳು ರಾಮನ ವಿಗ್ರಹ ಅಯೋದ್ಯೆಯಿಂದ ನೀಡುವುದಾದರೆ ವಿಶೇಷ ಮಂದಿರ ನಿರ್ಮಿಸಿ ಪ್ರತಿಷ್ಟಾಪನೆ ಮಾಡಲಾಗುವುದು ಎನ್ನುತ್ತಿದ್ದಾರೆ.
ಇದರ ನಡುವೆ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಯವರು ಸಹ ಗಣೇಶ್ ಭಟ್ರವರು ಕೆತ್ತಿದ ರಾಮನ ವಿಗ್ರಹವನ್ನು ತಮಗೆ ನೀಡುವುದಾದರೆ ರಾಜ್ಯಕ್ಕೆ ತಂದು ಪ್ರತಿಷ್ಟಾಪಿಸುವುದಾಗಿ ಹೇಳಿದ್ದಾರೆ.

ಈ ಸಂಬಂಧ ರಾಜ್ಯಮಟ್ಟದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು ಅಯೋಧ್ಯೆಗೆ ತೆರಳಿದ್ದ ಸಂದರ್ಭದಲ್ಲಿ ಗಣೇಶ್ ಭಟ್ರವರು ಕೆತ್ತಿರುವ ಬಾಲಕರಾಮ ವಿಗ್ರಹವನ್ನು ನೋಡಿದ್ದೇವೆ. ವಿಗ್ರಹವೂ ದೈವಿಕವಾಗಿದ್ದು, ಅದನ್ನ ಕೊಂಡೊಯ್ಯು ಮನಸ್ಸಾಗುತ್ತಿದೆ ಎಂದು ಅವರಿಗೆ ಹೇಳಿದ್ದೆ. ಅಲ್ಲದೆ ಈ ಸಂ ಬಂಧ ರಾಮಜನ್ಮಭೂಮಿ ಟ್ರಸ್ಟ್ ನವರು ಅನುಮತಿ ನೀಡಿದರೆ ವಿಗ್ರಹವನ್ನು ತರುತ್ತೇವೆ ಎಂದಿದ್ದಾರೆ.
ಈ ಸಂಬಂಧ ಅಧಿಕೃತವಾಗಿ ಕೋರಿಕೆ ಸಲ್ಲಿಸುವುದಾಗಿಯು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನೂ ಗಣೇಶ್ ಭಟ್ ಕೂಡ ಮಠದ ಶಿಷ್ಯಕೋಟಿಯಲ್ಲಿ ಒಬ್ಬರಾಗಿದ್ದು, ಅವರು ಸಹ ಅಯೋಧ್ಯೆ ರಾಮನ ಪ್ರತಿಷ್ಟಾಪನೆಯ ಭಾಗವಾಗಿದ್ದು ವಿಶೇಷವಾಗಿದೆ. ಉಳಿದಂತೆ ಹಾಗೊಂದು ವೇಳೆ ಗಣೇಶ್ ಭಟ್ರವರ ವಿಗ್ರಹ ರಾಜ್ಯಕ್ಕೆ ತಲುಪಿದರೇ ಆ ಬಾಲಕ ರಾಮನನ್ನು ಎಲ್ಲಿ ಪ್ರತಿಷ್ಟಾಪನೆ ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆಯಷ್ಟೆ ಅಲ್ಲದೆ ಕುತೂಹಲವನ್ನು ಮೂಡಿಸುತ್ತಿದೆ.