ರಾಹುಲ್​ ಗಾಂಧಿಯ ಆ ಮಾತಿಗೆ ಸಂಸದರ ಆಕ್ರೋಶ! ಬಿವೈ ರಾಘವೇಂದ್ರರ ಮಹತ್ವದ ಸ್ಟೇಟ್ಮೆಂಟ್​

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / 140 ಕೋಟಿ ಭಾರತೀಯರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ದೇಶದ ನಾಯಕತ್ವವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ್ರೋಹಿಗಳು ಎಂದು ಕರೆದಿರುವುದು ರಾಜಕೀಯ ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ಟೀಕಿಸಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ರೀತಿ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಹುಲ್​ ಗಾಂಧಿಯ ಆ ಮಾತಿಗೆ ಸಂಸದರ ಆಕ್ರೋಶ!

ವಿದೇಶಿ ನೆಲದಲ್ಲಿ ದೇಶವನ್ನು ನಿರಂತರವಾಗಿ ಅವಮಾನಿಸುವ ರಾಹುಲ್ ಗಾಂಧಿ ಅವರಿಗೆ ದೇಶಭಕ್ತಿ ಅಥವಾ ಪ್ರಜಾಪ್ರಭುತ್ವದ ಕುರಿತು ಉಪನ್ಯಾಸ ನೀಡುವ ಯಾವುದೇ ನೈತಿಕ ಅಧಿಕಾರ ಉಳಿದಿಲ್ಲ ಎಂದು ಸಂಸದ ಬಿವೈ ರಾಘವೇಂದ್ರ, ಕಳೆದ ಹಲವು ದಶಕಗಳಿಂದ ದೇಶದ ಸಂವಿಧಾನವನ್ನು ಯಾರು ದುರ್ಬಲಗೊಳಿಸಿದ್ದಾರೆ ಎನ್ನುವುದು ಜನರಿಗೆ ಸ್ಪಷ್ಟವಾಗಿ ತಿಳಿದಿದೆ.

ಆದರೆ, ಕಳೆದ 10 ವರ್ಷಗಳಿಂದ ಸಂವಿಧಾನದ ಪಾವಿತ್ರ್ಯವನ್ನು ಮರುಸ್ಥಾಪಿಸಲು, ಬಡವರ ಸಬಲೀಕರಣಕ್ಕಾಗಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ನಾಯಕತ್ವವನ್ನು ಜನರು ಗುರುತಿಸಿದ್ದಾರೆ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಸತತ 3 ನೇ ಬಾರಿಗೆ ಜನಾದೇಶ ಲಭಿಸಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಸ್ತುತ ಜಗತ್ತು ಗಂಭೀರವಾದ ಜಾಗತಿಕ ಅಸ್ಥಿರತೆ ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುವ ಈ ಸೂಕ್ಷ್ಮ ಸನ್ನಿವೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಷ್ಟ್ರೀಯ ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದೆ ನಿಂತು ದೇಶವನ್ನು ಮುನ್ನಡೆಸುತ್ತಿದ್ದಾರೆ. ಇಡೀ ದೇಶವೇ ಅವರ ನಿರ್ಣಾಯಕ ನಾಯಕತ್ವದ ಬೆನ್ನಿಗೆ ಒಗ್ಗಟ್ಟಾಗಿ ನಿಂತಿದೆ. ಇಂತಹ ಸಂದರ್ಭದಲ್ಲಿ ಕೆಲವು ಸಂಕುಚಿತ ಮನಸ್ಸಿನ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ದೇಶದ ಜನರು ಇವೆಲ್ಲವನ್ನೂ ಗಮನಿಸುತ್ತಿದ್ದು, ಇಂತಹ ಕೀಳು ಮಟ್ಟದ ರಾಜಕೀಯಕ್ಕೆ ಅವರೇ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw