Belur : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಯಾವಾಗ 17 ಜನ ಶಾಸಕರನ್ನು ಬಿಜೆಪಿ ಖರೀದಿ ಮಾಡಿತ್ತು ಎಂಬ ಹೇಳಿಕೆ ನೀಡಿದರೋ, ಅವತ್ತೇ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಕಥೆ ಮುಗಿಯಿತು ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪನವರು ಇತ್ತೀಚೆಗೆ ಬಹಳಷ್ಟು ಚಿಗುರಿಕೊಂಡಿದ್ದಾರೆ. ಎಸ್ಐಆರ್ (SIR) ವಿಚಾರವಾಗಿ ಹಿಂದೂ-ಮುಸ್ಲಿಂ ಎಂಬ ಧೋರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸರ ಉಳಿವಿಗಾಗಿ ಅವರು ಹೋರಾಟ ನಡೆಸುವುದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ, ಕೇಂದ್ರ ಸರ್ಕಾರ ರಸ್ತೆ ನಿರ್ಮಾಣ ಮಾಡುವಾಗ ಸಾವಿರಾರು ಮರಗಳನ್ನು ಕಡೆದಾಗ ಇವರು ಏಕೆ ಬಾಯಿ ಮುಚ್ಚಿಕೊಂಡು ಇರುತ್ತಾರೆ? ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲದೆ, ಈಶ್ವರಪ್ಪನವರನ್ನು ಬಿಜೆಪಿ ಸಂಪೂರ್ಣವಾಗಿ ಕಡೆಗಣಿಸಿದೆ. ಯಾವ ಯಾವ ಕಟ್ಟಾ ಹಿಂದುತ್ವ ನಾಯಕರು ಬಿಜೆಪಿಯಲ್ಲಿದ್ದಾರೋ, ಅವರನ್ನೆಲ್ಲ ಬಿಜೆಪಿ ಕಡೆಗಣಿಸುತ್ತಾ ಬಂದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಈಶ್ವರಪ್ಪನವರೇ ಅದಕ್ಕೆ ಉತ್ತಮ ಉದಾಹರಣೆ ಎಂದರು. ಬಿಜೆಪಿಗೆ ಈಶ್ವರಪ್ಪ ಅವರು ಮತ್ತೆ ಮರಳಲು ಸಾಧ್ಯವೇ ಇಲ್ಲ, ಒಂದು ವೇಳೆ ಹೋದರೂ ಅವರಿಗೆ ಇನ್ನು ಮುಂದೆ ಟಿಕೆಟ್ ಸಿಗುವುದಿಲ್ಲ. 17 ಶಾಸಕರ ಆಪರೇಷನ್ ಕಮಲದ ಸತ್ಯವನ್ನು ಸ್ವತಃ ಬಿಚ್ಚಿಟ್ಟ ಮೇಲಂತೂ ಅವರ ರಾಜಕೀಯ ಕಥೆ ಮುಗಿದ ಅಧ್ಯಾಯ ಎಂದು ವ್ಯಂಗ್ಯವಾಡಿದರು.
