MLA Channabasappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಮ್ಮ ಕ್ಷೇತ್ರದ ಎರಡು ಪ್ರಮುಖ ಮನವಿಯನ್ನು ಇಟ್ಟುಕೊಂಡು, ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ ಡಿಸಿಎಂ ಡಾ. ಜಿ. ಪರಮೇಶ್ವರ್ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಭೇಟಿಯ ವಿವರ ಹೀಗಿದೆ
ಶಿವಮೊಗ್ಗ ನಗರದಲ್ಲಿರುವ ಕುಸ್ತಿ ಕ್ರೀಡಾ ಶಾಲೆಯನ್ನು ಮುಂದುವರಿಸಬೇಕು ಹಾಗೂ ಮಿಳಘಟ್ಟ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.
ಕುಸ್ತಿ ಕ್ರೀಡೆಯಲ್ಲಿ ಜಿಲ್ಲೆಯ ನೂರಾರು ಕ್ರೀಡಾಪಟುಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಹೀಗಾಗಿ ಈ ಕ್ರೀಡೆಯನ್ನು ಜೀವಂತವಾಗಿರಿಸಲು ಮತ್ತು ಭವಿಷ್ಯದ ಯುವ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಕ್ರೀಡಾ ಶಾಲೆಗೆ ಅಗತ್ಯ ಅನುದಾನ ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕರು ಸಚಿವರಿಗೆ ಮನವರಿಕೆ ಮಾಡಿದರು
ಇದೇ ವೇಳೆ, ಶಿವಮೊಗ್ಗ ತಾಲೂಕು ಕಸಬಾ-1 ಹೋಬಳಿಯ ಮಿಳಘಟ್ಟ ಗ್ರಾಮದ ಸರ್ವೆ ನಂಬರ್ 92ರ ಸರ್ಕಾರಿ ಖರಾಬು ಗುಂಡುತೋಪು ಜಾಗದಲ್ಲಿ ದಶಕಗಳಿಂದ ನೆಲೆಸಿರುವ ನೂರಾರು ಬಡ ಕುಟುಂಬಗಳಿಗೆ ಈವರೆಗೂ ಹಕ್ಕುಪತ್ರ ದೊರೆತಿಲ್ಲ ಎಂಬ ವಿಷಯವನ್ನು ಶಾಸಕರು ಡಿಸಿಎಂರ ಗಮನಕ್ಕೆ ತಂದರು.
ಕಂದಾಯ ಇಲಾಖೆಯ ನಿಯಮಾವಳಿಗಳ ಅನ್ವಯ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು. ಶಾಸಕರ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಉಪಮುಖ್ಯಮಂತ್ರಿಗಳು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
