Shivamogga | Feb 7, 2024 | ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸ್ತಿರುವುದರಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿಯು ಎರಡು ಕಡೆ ಕಾಂಗ್ರೆಸ್ ಪ್ರತಿಭಟನೆಗಳು ನಡೆದವು. ರಾಜ್ಯಕ್ಕೆ ನೀಡಬೇಕಾದ187000 ಕೋಟಿ ತೆರಿಗೆ ಹಣವನ್ನು ಕೇಂದ್ರ ಬಿಜೆಪಿ ಸರ್ಕಾರ ನೀಡಿಲ್ಲವೆಂದು ಆರೋಪಿಸಿದ ಎನ್ಎಸ್ಯುಐ ಕಾರ್ಯಕರ್ತರು ಶಿವಮೊಗ್ಗದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿದ್ರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲಿನಿಂದಲೂ ಮಲತಾಯಿಧೋರಣೆ ತೋರುತ್ತಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಆರ್ಥಿಕ ದೌರ್ಜನ್ಯ ಎಸಗುತ್ತಿದ್ದು, ಇದನ್ನು ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ರು
ಎನ್ಎಸ್ಯುಐ ನ ಆರೋಪ
ಕೇಂದ್ರ ಸರ್ಕಾರ ರಾಜ್ಯಕ್ಕೆ ೨೦೧೭-೧೮ರಿಂದ ಜಿ.ಎಸ್.ಟಿ. ತೆರಿಗೆ ಹಣ ಕೊಡದೇ ದೌರ್ಜನ್ಯ ಎಸಗುತ್ತಿದೆ. ಈ ವರೆಗೂ ರಾಜ್ಯಕ್ಕೆ ೧ ಲಕ್ಷದ ೮೭ ಸಾವಿರ ಕೋಟಿ ಜಿ.ಎಸ್.ಟಿ. ತೆರಿಗೆ ಹಣ ಕೊಡಬೇಕಿದ್ದು, ಇದನ್ನು ಕೊಟ್ಟಿರುವುದಿಲ್ಲ.

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ೧೮,೧೭೭ ಕೋಟಿ ರೂ. ಬೇಡಿಕೆ ಸಲ್ಲಿಸಿದ್ದರೂ ಈ ವರೆಗೂ ಬಿಡಿಗಾಸು ಸಹ ನೀಡಿಲ್ಲ. ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ.೪.೭೭ರಿಂದ ಶೇ. ೩.೬೪ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ೬೨,೦೯೮ ಕೋಟಿ ನಷ್ಟವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ ೨೦೨೩-೨೪ನೇ ಸಾಲಿನಲ್ಲಿ ಘೋಷಿಸಿದ್ದು, ಯೋಜನೆಗೆ ೫,೩೦೦ ಕೋಟಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಒಂದು ರೂಪಾಯಿಯ ಅನುದಾವನ್ನೂ ನೀಡಿರುವುದಿಲ್ಲ.
೧೫ನೇ ಹಣಕಾಸು ಆಯೋಗವು ರಾಜ್ಯಕ್ಕೆ ೫,೪೯೫ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಈ ವರೆಗೂ ಬಿಡಿಗಾಸು ಸಹ ಕೊಟ್ಟಿರುವುದಿಲ್ಲ.

ಸಹಭಾಗಿತ್ವ ಯೋಜನೆಗೆ ೨೦೨೧-೨೧ನೇ ಸಾಲಿನಲ್ಲಿ ೨೦ ಸಾವಿರ ಕೋಟಿ ಇದ್ದದ್ದನ್ನು ೨೦೨೨-೨೩ನೇ ಸಾಲಿನಲ್ಲಿ ೧೩ ಸಾವಿರ ಕೋಟಿ ರೂ.ಗಳಿಗೆ ಕಡಿತಗೊಳಿಸಿದೆ. ಏಮ್ಸ್ ಮಹದಾಯಿ ಯೋಜನೆಗೆ ಮನ್ನಣೆ ನೀಡದೇ ಕನಸಾಗೇ ಉಳಿಯುವಂತೆ ಮಾಡಿದೆ ಎಂದು ಎನ್ಎಸ್ಯುಐ ಆರೋಪಿಸಿದೆ.
ರಾಜ್ಯಕ್ಕೆ ಬರಬೇಕಾದ ೧ ಲಕ್ಷದ ೮೭ ಸಾವಿರ ಕೋಟಿ ತೆರಿಗೆ ಹಣವನ್ನು ಕೂಡಲೇ ನೀಡಬೇಕು. ಇಲ್ಲವಾದಲ್ಲಿ ಇಂದು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ.
ರಮೇಶ್ ಹೆಗ್ಡೆ ಆಕ್ರೋಶ

ಇನ್ನೂ ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಎ.ರಮೇಶ್ ಹೆಗ್ಡೆ, ಯವರು ಕೇಂದ್ರದಲ್ಲಿ ಮೋದಿ ಆಡಳಿತ ಬಂದಾಗಿನಿಂದ ರಾಜ್ಯದ ವಿರುದ್ಧ ಮಸಲತ್ತು ಮಾಡಲಗುತ್ತಿದೆ. ರಾಜ್ಯದ 25 ಬಿಜೆಪಿ ಸಂಸದರಿಗೆ ರಾಜ್ಯದ ಪಾಲಿನ ತೆರಿಗೆ ಹಣ ಕೇಳಲು ದಮ್ಮು ಇಲ್ಲ. ತಾಕತ್ತು ಇಲ್ಲ. ಕೇವಲ ಮೋದಿ ಮನ್ ಕಿ ಬಾತ್ ಕೇಳಿ ಸುಮ್ಮನೆ ಕೂತಿದ್ದಾರೆ. 223 ತಾಲೂಕಿನಲ್ಲಿ ಬರ ಇದೆ. ಆದರೂ ಮೋದಿ ಸರ್ಕಾರ ಪರಿಹಾರದ ಪಾಲಿನ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರು ಪೊಲೀಸ್ ವಶಕ್ಕೆ
ಇನ್ನೂ ಇದೇ ವೇಳೆ ಪೊಲೀಸ್ ಇಲಾಖೆ ವಿಜಯೇಂದ್ರರವರ ಮನೆಯ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿತ್ತು. ಬ್ಯಾರಿಕೇಡ್ಗಳನ್ನು ಅಳವಡಿಸಿದ್ದ ಪೊಲೀಸರು ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗುತ್ತಲೇ ಎಲ್ಲರನ್ನ ವಶಕ್ಕೆ ಪಡೆದರು.
