Newborn Baby / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ್ದ ನವಜಾತ ಶಿಶುವಿನ ಪ್ರಕರಣದಲ್ಲಿ ಪೊಲೀಸರು ಮಹತ್ವದ ಕೆಲಸ ಮಾಡಿದ್ದಾರೆ. ಮಗುವಿನ ತಾಯಿಯನ್ನ ಪತ್ತೆ ಮಾಡುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ಸು ಕಂಡಿದ್ದಾರೆ.
ಜಿಲ್ಲೆಯ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಸಮೀಪದ ಗವಟೂರಿನ ತಂಗುದಾಣದಲ್ಲಿ ಕಳೆದ ಜುಲೈ 3ರ ರಾತ್ರಿ ಹೆಣ್ಣು ಮಗುವೊಂದನ್ನ ಕೈ ಚೀಲದಲ್ಲಿಟ್ಟು, ಜೊತೆಗೊಂದು ಹಾಲಿನ ಬಾಟಲಿ ಇಟ್ಟು, ಯಾರೋ ಬಿಟ್ಟು ಹೋಗಿದ್ದರು. ಬಳಿಕ ಯಾರೋ ಸ್ಥಳೀಯರು ಮಗು ಅಳುವುದನ್ನ ಕೇಳಿ, ಸ್ಥಳಕ್ಕೆ ಹೋಗಿ, ಆ ಮಗುವನ್ನ ರಕ್ಷಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಮಗುವಿನ ರಕ್ಷಣೆಯ ಹೊಣೆಹೊತ್ತ ಪೊಲೀಸರು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಯ ಸಹಕಾರದೊಂದಿಗೆ ಮಗುವಿಗೆ ಆರಂಭಿಕ ನೆಲೆ ಹಾಗೂ ಚಿಕಿತ್ಸೆಯನ್ನು ಒದಗಿಸಿದ ಪೊಲೀಸರು ಅಂತಿಮವಾಗಿ ಮಗುವನ್ನ ಬಿಟ್ಟುಹೋದವರನ್ನ ಹುಡುಕಿಯೇ ಸಿದ್ದ ಎಂದು ಪಟ್ಟು ಹಿಡಿದು ಕಾರ್ಯಾಚರಣೆ ಆರಂಭಿಸಿದ್ದರು.
ಇಲ್ಲಿನ ಪಿಎಸ್ಐ ರಾಜುರೆಡ್ಡಿ ಆಂಡ್ ಟೀಂ ನಡೆಸಿದ ಕಾರ್ಯಾಚರಣೆ ಜೊತೆಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಸಹ ನೀಡಿತ್ತು. ಅಂತಿಮವಾಗಿ ಟೆಕ್ನಿಕಲ್ ಎವಿಡೆನ್ಸ್ ಮೂಲಕ ಪೊಲೀಸ್ ಟೀಂ ಮಗು ಬಿಟ್ಟುಹೋದವರ ಪೂರ್ತಿ ವಿವರವನ್ನ ಪತ್ತೆ ಮಾಡಿ ವಿಚಾರಣೆ ನಡೆಸಿದೆ.
ಅಸಲಿಗೆ ಘಟನೆಯಲ್ಲಿ ಜಿಲ್ಲೆ ತಾಲ್ಲೂಕು ಒಂದರ ಗ್ರಾಮದ ಯುವಕ ಯುವತಿ ಪ್ರೀತಿಸುತ್ತಿದ್ದರು. ಮದುವೆ ಆಗಿರಲಿಲ್ಲ. ಈ ಮಧ್ಯೆ ಯುವತಿ ಗರ್ಭವತಿಯಾಗಿದ್ದು, ವಿಷಯ ಮುಚ್ಚಿಟ್ಟದ್ದಳಂತೆ. ಅಲ್ಲದೆ ಗರ್ಭ ತ್ಯಜಿಸಲು ಯುವತಿ ಕೆಲವು ಮನೆಮದ್ದುಗಳನ್ನು ಬಳಸಿದ್ದಳಂತೆ. ಆದರೆ ತಿಂಗಳು ತುಂಬಿ ಪ್ರಸವವೇದನೆ ಅನುಭವಿಸತೊಡಗಿದ್ದಾಳೆ. ಈ ವೇಳೆ ಮನೆಯಲ್ಲಿ ವಿಷಯಗೊತ್ತಾಗಿದೆ. ಅಷ್ಟೊತ್ತಿಗೆ ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.
ಇದರಿಂದಾಗಿ ಅವಮಾನ ಆಗಬಹುದು ಎಂದು ಆತಂಕಗೊಂಡು ಸಹೋದರನ ಬೈಕ್ನಲ್ಲಿ ಗವಟೂರು ಬಸ್ಸ್ಟ್ಯಾಂಡ್ಗೆ ಬಂದು ಕೈ ಚೀಲವೊಂದರಲ್ಲಿ ಶಿಶು ಮತ್ತು ಹಾಲಿನ ಬಾಟಲಿ ಇಟ್ಟು ಯುವತಿ ಅಲ್ಲಿಂದ ತೆರಳಿದ್ದಾಳೆ. ಇದೀಗ ಮಗುವನ್ನ ರಕ್ಷಿಸಿ, ಅದರ ಪೋಷಕರನ್ನು ಪತ್ತೆ ಮಾಡಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಷಯ ಸೂಚನೆ : ನಡೆದ ಘಟನೆ ಹಾಗೂ ಪೊಲೀಸರ ಕಾರ್ಯಾಚರಣೆಯನ್ನು ಜನರಿಗೆ ತಿಳಿಸುವ ದೃಷ್ಟಿಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿದ್ದು, ಯಾವುದೇ ವೈಯಕ್ತಿಕ ವಿವರಗಳನ್ನು ಇಲ್ಲಿ ಒದಗಿಸಲಾಗುವುದಿಲ್ಲ.
