ಶಿವಮೊಗ್ಗ / ನಗರದ ಪಾರ್ಕ್ ಬಡಾವಣೆಯ ರಸ್ತೆ ಬದಿಯಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ನಿನ್ನೆ ದಿನ ಅಂದರೆ ಏಪ್ರಿಲ್ 12, 2026 ರಂದು ಮಧ್ಯಾಹ್ನ ಈ ವಿಚಾರ ಗೊತ್ತಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಲಭ್ಯವಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ಸ್ವಾಮಿ ಮಠದ ಸಮೀಪ ಘಟನೆ
ಮೃತ ಯುವಕನನ್ನು ಹರಮಘಟ್ಟ ಮೂಲದ ದೇವರಾಜ್ (34) ಎಂದು ಗುರುತಿಸಲಾಗಿದೆ. ಮಥುರಾ ಪ್ಯಾರಡೈಸ್ ರಸ್ತೆಯ ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ಯುವಕ ನೇಣಿಗೆ ಶರಣಾಗಿದ್ದಾನೆ. ಮರದ ಎಲೆಗಳು ದಟ್ಟವಾಗಿದ್ದರಿಂದ ವಿಚಾರ ತಡವಾಗಿ ಗೊತ್ತಾಗಿದೆ. ಪುಟ್ ಪಾತ್ ಮೇಲೆ ತೆರಳುತ್ತಿದ್ದವರು ಶವ ನೇತಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ. ಪಂಚನಾಮೆ ಮುಗಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಈ ಪರಿಶೀಲನೆ ವೇಳೆ ಯುವಕ ಬರೆದಿದ್ದಾನೆನ್ನಲಾದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸಾವು ಮಹಾಪಾಪ ಆದರೂ ಸಾಯ್ತಾಯಿದ್ದೀನಿ ಅಮ್ಮ ಮಿಸ್ ಯು ಎಂದು ಬರೆಯಲಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
