ಬಿಜೆಪಿ ಟೈಂನಲ್ಲಿ ಬಂದ ಎಸ್​ಪಿ ಮಿಥುನ್​ ಕುಮಾರ್​ ಕಾಂಗ್ರೆಸ್​ ಅವಧಿಯಲ್ಲಿಯು ಮುಂದುವರಿಯಲು ಕಾರಣವೇನು ಗೊತ್ತಾ? JP ಬರೆಯುತ್ತಾರೆ!

This Article Written by / Malenadu Today / ಆಗಷ್ಟ್ 21, 2023

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS 

ಶಿವಮೊಗ್ಗದ ಎಸ್ಪಿಗಳ ಸಾಲಿನಲ್ಲಿ ಮಿಥುನ್ ಕುಮಾರ್ ಕೊಂಚ ಭಿನ್ನ ಬಿಜೆಪಿ ಸರ್ಕಾರದಲ್ಲಿ ಬಂದವರು ಕಾಂಗ್ರೇಸ್ ಅಧಿಕಾರವಧಿಯಲ್ಲಿ ಮುಂದುವರೆಯಲು ಕಾರಣವೇನು ಗೊತ್ತಾ.? ಜೆಪಿ ಬರೆಯುತ್ತಾರೆ

ಶಿವಮೊಗ್ಗ ಜಿಲ್ಲೆಯಲ್ಲಿ ಸಾಂಗ್ಲಿಯಾನ ಕೆಂಪಯ್ಯ ನಂತ ಹಲವು ಮಂದಿ ಅಧಿಕಾರಿಗಳು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲಾ ಎಸ್ಪಿಗಳು ಕರ್ತವ್ಯ ಮತ್ತು ಕಾನೂನು ಪಾಲನೆಗೆ ತಮ್ಮದೇ ಆದ ಓರೆನೋಟವನ್ನು ಒರೆಗೆ ಹಚ್ಚಿ ಕೆಲಸ ಮಾಡಿದ್ದಾರೆ. ಅವರುಗಳ ಸಾಲಿನಲ್ಲಿ ಎಸ್ಪಿ ಮಿಥುನ್ ಕುಮಾರ್ ಕೊಂಚ ಭಿನ್ನರಾಗಿ ಕಾಣುತ್ತಾರೆ. 

ಶಿವಮೊಗ್ಗಕ್ಕೆ ಎಸ್ಪಿಯಾಗಿ ಬಂದಾಗಿನಿಂದ ಮಿಥುನ್ ಕುಮಾರ್ ತಮ್ಮ ಸಹೋದ್ಯೋಗಿಗಳ ಕೆಲಸವನ್ನು ಗುರುತಿಸುವ ಕೆಲಸ ಮಾಡಿದರು. ಯಾವುದೇ ಅಧಿಕಾರಿ ಸಿಬ್ಬಂದಿ ಪ್ರಕರಣ ಭೇದಿಸಿದಾಗ, ಕೋರ್ಟ್ ನಲ್ಲಿ ಆರೋಪಿಗಳಿಗೆ ಶಿಕ್ಷೆಯಾದಾಗ, ಅಂತಹ ಅಧಿಕಾರಿ ಸಿಬ್ಬಂದಿಗಳ ಕೆಲಸವನ್ನು ಪ್ರಶಂಸಿಸುವ ಕೆಲಸ ಮಾಡಿದರು. ಮಾತ್ರವಲ್ಲದೆ ತಮ್ಮ ಕಛೇರಿಗೆ ಅವರುಗಳನ್ನು ಕರೆಸಿ,ಸನ್ಮಾನಿಸುವ ಕೆಲಸ ಮಾಡಿದರು. ಇದು ಕೆಳ ಹಂತದ ಅಧಿಕಾರಿ ಸಿಬ್ಬಂದಿಗಳಲ್ಲಿ ಕೆಲಸ ಮಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಸದಾ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುವ ಮಿಥುನ್ ಕುಮಾರ್, ತಮ್ಮ ಸಹೋದ್ಯೋಗಿಗಳ ಮೇಲೆ ಅಪಾರ ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡೇ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಇನ್ನು ನಿವೃತ್ತಿಯಾಗುವ ಅಧಿಕಾರಿ ಸಿಬ್ಬಂದಿಗಳಿಗೂ ಮಿಥುನ್ ಕುಮಾರ್ ತಮ್ಮ ಕಛೇರಿಯಲ್ಲಿಯೇ ಆತ್ಮೀಯವಾಗಿ ಬೀಳ್ಕೊಡುಗೆ ಮಾಡುತ್ತಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ರೋಲ್ ಕಾಲ್

ನಗರದಲ್ಲಿ ಪೊಲೀಸ್ ವ್ಯವಸ್ಥೆ ಹೇಗಿದೆ ಎಂಬುದನ್ನು ಸಾರ್ವಜನಿಕರಿಗೂ ತಿಳಿಯಬೇಕು ಎಂಬ ಉದ್ದೇಶದಿಂದಲೇ ಠಾಣೆ ಆವರಣದಲ್ಲಿ ನಡೆಯುತ್ತಿದ್ದ ರೋಲ್  ಕಾಲ್ ವ್ಯವಸ್ಥೆಯನ್ನು ಪಬ್ಲಿಕ್ ಪ್ಲೇಸ್ ಗಳಿಗೆ ಸ್ಥಳಾಂತರಿಸಿದರು. ಜನನಿಬಿಡ ಸ್ಥಳದಲ್ಲಿಯೇ ಪೊಲೀಸ್ ರೋಲ್ ಕಾಲ್ ನಡೆಯುವಾಗ ಕ್ರೈಂ ಎಸಗುವ ಕ್ರಿಮಿನಲ್ ಗಳಿಗೆ ಭಯ ಎಂಬುದು ಇದ್ದೇ ಇರುತ್ತದೆ. ಆಗ ಕ್ರೈಂ ರೇಟ್ ಗಳು ಕೂಡ ಕಡಿಮೆಯಾಗುತ್ತದೆ.

ನೈಟ್ ರೌಂಡ್ಸ್ ಗೆ ಹೆಚ್ಚಿನ ಆಧ್ಯತೆ

ಶಿವಮೊಗ್ಗ ನಗರದಲ್ಲಿ ರಾತ್ರಿ ಸಂದರ್ಭದಲ್ಲಿ ಪೊಲೀಸ್ ಬೀಟ್ ಕಡಿಮೆಯಾಗಿದೆ ಎಂಬ ದೂರುಗಳು ಸಾರ್ವಜನಿಕವಾಗಿ ಕೇಳಿಬರುತ್ತಿತ್ತು. ಆದರೆ ಮಿಥುನ್ ಕುಮಾರ್ ನೈಟ್ ಪೊಲೀಸ್ ಬೀಟ್ ಗೆ ಹೆಚ್ಚಿನ ಆಧ್ಯತೆ ನೀಡಿದರು. ರಾತ್ರಿ ವೇಳೆಯಲ್ಲಿ ಸಂಚರಿಸುವ ಅನುಮಾನಾಸ್ಪದ ವ್ಯಕ್ತಿಗಳು ಹಾಗು ಯುವಕರ ಗುಂಪಿನ  ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ವ್ಯವಸ್ಥೆ ರಾತ್ರಿ ಸಂದರ್ಭದಲ್ಲಿ ಗಟ್ಟಿಯಾಗಿರುವುದರಿಂಮದಲೇ ನಗರದಲ್ಲಿ ಮನೆಗಳ್ಳತನ ಸರಗಳ್ಳತನ ಪ್ರಕರಣಗಳು ಕಡಿಮೆಯಾಗಿದೆ.

ಗಾಂಜಾ ಮಾಫಿಯಾದ ಮೇಲೆ ಕಣ್ಣು

ಇನ್ನು ಗಾಂಜಾ ಮಾಫೀಯದ ಮೇಲೂ ಕಣ್ಣಿಟ್ಟಿರುವ ಮಿಥುನ್ ಕುಮಾರ್ ಒಂದೆಡೆ ಆರೋಪಿಗಳಿಗೆ ಹೆಡೆಮುರಿ ಕಟ್ಟುತ್ತಿದ್ದರೆ, ಮತ್ತೊಂದೆಡೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಶಿವಮೊಗ್ಗದಲ್ಲಿ ಈ ಹಿಂದೆ ಎಸ್ಪಿ ಲಕ್ಷ್ಮಿ ಪ್ರಸಾದ್ ಗಾಂಜಾ ಮಾಫೀಯದ ಆಳಕ್ಕೆ ಕೈಹಾಕಿದ್ದಾಗಲೇ ಅವರ ವರ್ಗಾವಣೆಯಾಯ್ತು. ಆದರೆ ಮಿಥುನ್ ಕುಮಾರ್ ಅದರ ಮುಂದುವರೆದ ಭಾಗವಾಗಿ ಗಾಂಜಾ ಮೇಲೆ ಕಣ್ಣು ನೆಟ್ಟಿದ್ದಾರೆ.

ಟ್ರಾಫಿಕ್​ ವ್ಯವಸ್ಥೆ ಸುವ್ಯವಸ್ಥೆ

ಟ್ರಾಫಿಕ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲೂ ಅಗತ್ಯ ಕ್ರಮ ಕೈಗೊಂಡಿರುವ ಮಿಥುನ್ ಕುಮಾರ್, ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸುತ್ತಿದ್ದಾರೆ. ಐಎಸ್ಐ ಮಾರ್ಕ್ ಇರುವ ಹೆಲ್ಮೇಟ್ ಗಳನ್ನು ಧರಿಸಿ ಜೀವ ಉಳಿಸಿ ಎನ್ನುವ ಅವರ ಪರಿಕಲ್ಪನೆಯಲ್ಲಿ ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. 

ಎಸ್ಪಿ ಮಿಥುನ್ ಅಧಿಕಾರ ಸ್ವೀಕರಿಸಿದಾಗಿನಿಂದ ಶಿವಮೊಗ್ಗದಲ್ಲಿ ಕೋಮುಗಲಭೆಗಳು ನಡೆದಿಲ್ಲ. ಅದಕ್ಕೆ ಅವಕಾಶವನ್ನು ಅವರು ನೀಡಲಿಲ್ಲ. ಶಿವಮೊಗ್ಗದ ಡಿಎಸ್ಪಿ ಬಾಲರಾಜ್, ದೊಡ್ಡಪೇಟೆ ಠಾಣೆ ಅಂಜನ್ ಕುಮಾರ್, ತುಂಗಾನಗರ ಠಾಣೆ ಮಂಜುನಾಥ್, ಸಿಇಎನ್ ಠಾಣೆ ದೀಪಕ್ ವಿನೋಬ ನಗರ ಠಾಣೆ ರವಿ ಕುಮಾರ್ ಅವರಿದ್ದ ತಂಡ ನಗರದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದೆ. ಬಹುತೇಕ ಅಧಿಕಾರಿಗಳು  ಪ್ರತಿಕೂಲದ ಸನ್ನಿವೇಶಗಳಲ್ಲಿ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದರೂ, ತಮ್ಮ ಕರ್ತವ್ಯ ನಿಷ್ಠೆಯಲ್ಲಿ ಎಂದೂ ರಾಜಿಯಾಗಿಲ್ಲ.

ಸರ್ಕಾರ ಬದಲಾದಾಗ ಎಸ್ಪಿ ಬದಲಾಗುವರೇ ಎಂಬ ಅನುಮಾನ ಹಲವರಲ್ಲಿತ್ತು. 

ಬಿಜೆಪಿ ಆಡಳಿತಾವಧಿಯಲ್ಲಿ ಬಂದ ಪೊಲೀಸ್ ಅಧಿಕಾರಿಗಳು ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಬದಲಾಗುವರು ಎಂಬ ನಿರೀಕ್ಷೆ ಹಲವರಲ್ಲಿತ್ತು. ಅದರಲ್ಲೂ ಶಿವಮೊಗ್ಗದ ಎಸ್ಪಿ ವರ್ಗಾವಣೆ ಖಚಿತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ಮಧು ಬಂಗಾರಪ್ಪ ಎಲ್ಲಾ ಪೊಲೀಸ್ ಅಥಿಕಾರಿಗಳ ಪೀಡ್ ಬ್ಯಾಕ್ ತೆಗೆದುಕೊಂಡೇ ಸಮಯ ಪ್ರಜ್ಞೆ ಮೆರೆದಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಈ ಅಧಿಕಾರಿಗಳೇ ಮುಂದುವರೆದರೆ, ನಗರದಲ್ಲಿ  ಶಾಂತಿ ನೆಲೆಸಿರುತ್ತೆ ಎಂಬ ಅಭಿಪ್ರಾಯ ಅವರಲ್ಲಿದೆ. ಅದರಲ್ಲೂ ಈ ಬಾರಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ ಹಾಗು ಈದ್ ಮಿಲಾದ್ ಉರುಸ್ ಒಂದೇ ದಿನ ಬಂದಿರುವುದು ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ ಹೀಗಾಗಿ ಈ ಹಿಂದೆ ಇರುವಂತ ಅಧಿಕಾರಿಗಳೇ ಹಬ್ಬದವರೆಗೂ ಮುಂದುವರೆದರೆ ಅನುಕೂಲ ಎಂಬ ಅಭಿಪ್ರಾಯ ಮೂಡಿರುವುದರಿಂದ ಮಧು ಬಂಗಾರಪ್ಪ ಹುತ್ತಕ್ಕೆ ಕೈ ಹಾಕುಲು ಮುಂದಾಗಿಲ್ಲ. ಇದು ನಿಜಕ್ಕೂ ಸ್ವಾಗತಾರ್ಹ ವಿಚಾರ. ಕೋಮುಗಲಭೆಗಳಿಂದ ತತ್ತರಿಸಿ ಹೋಗಿರುವ ಶಿವಮೊಗ್ಗ ಜನತೆಗೆ ಬೇಕಿರುವುದು ಶಾಂತಿ ನೆಮ್ಮದಿ. ಆ ಶಾಂತಿ ನೆಮ್ಮದಿಯನ್ನು ಕಾಪಾಡುವ ವಿಚಾರದಲ್ಲಿ ಮಿಥುನ್ ಕುಮಾರ್ ಕೈಗೊಂಡಿರುವ ಕೆಲಸಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿ ಎಸ್ಪಿಯವರು ಮತೀಯ ಗುಂಡಾಗಳಿಗೆ ಖಡಕ್ ವಾರ್ನಿಂಗ್ ನೀಡಿದರೆ, ಶಿವಮೊಗ್ಗ ಇನ್ನಷ್ಟು ಕೂಲ್ ಆಗುತ್ತೆ.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Shivamogga Police

ಮುಂದಿನ ಸುದ್ದಿ ಒದಿ

Leave a Comment