SHIVAMOGGA| MALENADUTODAY NEWS | ಮಲೆನಾಡು ಟುಡೆ Apr 9, 2025

ಶಿವಮೊಗ್ಗದ ಮಟ್ಟಿಗೆ ದೊಡ್ಡದೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗ ನಗರದ ಡಿಸಿ ಆಪೀಸ್ ಎದುರಿನ ಖಾಲಿ ಜಾಗದ ವಿವಾದ ಸುಖಾಂತ್ಯ ಕಂಡಿದೆ. ಜಾಗದಲ್ಲಿ ಈ ಹಿಂದಿನಂತೆ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಕರಣ ಸುಖಾಂತ್ಯ ಕಂಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನೆ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈದ್ಗಾ ಮೈದಾನ ಎಂದು ಕರೆದುಕೊಳ್ಳುವ ಜಾಗದ ವಿಚಾರವಾಗಿ ಸಾಕಷ್ಟು ವಿವಾದ ಏರ್ಪಟ್ಟಿದ್ದವು. ಈ ಸಂಬಂಧ ದಿಢೀರ್ ಎಂಬಂತೆ ಜಾಗಕ್ಕೆ ಬೇಲಿ ಬಿದ್ದಿದ್ದು ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ಈ ಸಂಬಂಧ ಹಿಂದೂ ಪರ ಸಂಘಟನೆಗಳು ರಾಷ್ಟ್ರಭಕ್ತ ಬಳಗ, ಬಿಜೆಪಿ ಮುಖಂಡರು ಹಾಗೂ ಶಾಸಕರು ಜಿಲ್ಲಾಡಳಿತಕ್ಕೆ ವಿವಾದ ಬಗೆಹರಿಸುವ ಡೆಡ್ಲೈನ್ ನೀಡಿದ್ದರು. ಇನ್ನೊಂದಡೆ ಜಾಗದ ಮಾಲಿಕತ್ವಕ್ಕಾಗಿ ಮುಸ್ಲಿಮ್ ಸಂಘಟನೆಯ ಮುಖಂಡರು ಪ್ರತಿಭಟಿಸಿದ್ದರು.
ಈ ನಡುವೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಮುಖಂಡರನ್ನು ಕರೆದು ಮಾತನಾಡಿ ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥ ಪಡಿಸಿದೆ. ಎಲ್ಲಾ ಪಕ್ಷದ ಹಾಗೂ ಧರ್ಮದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅಧಿಕಾರಿಗಳು ವಿಚಾರವನ್ನು ಸೌಹಾರ್ಧಯುತವಾಗಿ ಬಗೆ ಹರಿಸಿದ್ದಾರೆ. ಅಲ್ಲದೆ ನಾಳೆಯಿಂದಲೇ ಈದ್ಗಾ ಮೈದಾನದಲ್ಲಿ ಈ ಹಿಂದಿನಂತೆ ವಾಹನಗಳ ಪಾರ್ಕಿಂಗ್ಗೆ ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಎಲ್ಲರಿಗೂ ಶುಭೋದಯ.. ಡಿಸಿ ಕಚೇರಿ ಮುಂಭಾಗದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ. ಈ ಸಂಬಂಧಪ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಲಾಗಿದ್ದು, ವಿಚಾರ ಇತ್ಯರ್ಥಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ.
ಸಿಸಿ ಕ್ಯಾಮೆರಾಗಳು, ದೀಪಗಳು ಮತ್ತು ಸ್ವಚ್ಛತೆಗಾಗಿ ಬೇಡಿಕೆ ವ್ಯಕ್ತವಾಗಿದ್ದು, ಇದನ್ನು ಆಡಳಿತ ವ್ಯವಸ್ಥೆಯಿಂದ ಕೈಗೊಳ್ಳಲು ಸಮ್ಮತಿಸಲಾಗಿದೆ. ನಾಳೆ ಬೆಳಿಗ್ಗೆ 10 ಗಂಟೆಯಿಂದ ಈ ಹಿಂದೆ ಬಳಸಲಾಗುತ್ತಿದ್ದಂತೆ, ಜಾಗವನ್ನು ಪಾರ್ಕಿಂಗ್ಗಾಗಿ ಬಳಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಮತ್ತು ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸಹಾಯ ಮಾಡಿದ ಸಾರ್ವಜನಿಕರು, ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.