Akka Pade Police ಶಿವಮೊಗ್ಗ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಕ ಪಡೆ ತಂಡದವರು ಸಂಕಷ್ಟದಲ್ಲಿದ್ದ ವೃದ್ಧೆಯೊಬ್ಬರಿಗೆ ನೆರವಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಗುರುತಿಸಿ ಅವರಿಗೆ ಸುರಕ್ಷಿತವಾಗಿ ಊರು ತಲುಪಲು ವ್ಯವಸ್ಥೆ ಮಾಡಿದ್ದಾರೆ.
ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಎಂದಿನಂತೆ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ, ಸುಮಾರು 55 ವರ್ಷ ಪ್ರಾಯದ ಮಹಿಳೆಯೊಬ್ಬರು ಮಾನಸಿಕ ಹಾಗೂ ದೈಹಿಕ ನೋವಿನಿಂದ ಬಳಲುತ್ತಿರುವುದು ತಂಡದ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಕ್ಕ ಪಡೆಯ ಸದಸ್ಯರು, ಮಹಿಳೆಯ ಬಳಿ ತೆರಳಿ ಸಾಂತ್ವನ ಹೇಳಿ ಅವರ ಮಾಹಿತಿ ಪಡೆದಿದ್ದಾರೆ. ಈ ವೇಳೆ ಅವರು ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಬಂದಿದ್ದು, ಆಕಸ್ಮಿಕವಾಗಿ ತಮ್ಮ ಬ್ಯಾಗ್ ಕಳೆದುಕೊಂಡು ದಿಕ್ಕುತೋಚದೆ ನಿಂತಿರುವುದು ಬೆಳಕಿಗೆ ಬಂದಿದೆ.
ಮಹಿಳೆಗೆ ತನ್ನೂರಿಗೆ ಮರಳಲು ಹಣವಿಲ್ಲದೆ ಪರದಾಡುತ್ತಿದ್ದ ಸಂದರ್ಭವನ್ನು ಅರಿತ ಪೊಲೀಸ್ ತಂಡ, ಸ್ಥಳದಲ್ಲೇ ಅವರಿಗೆ ಬಸ್ ಟಿಕೆಟ್ ದರವನ್ನು ಭರಿಸಿದ್ದಾರೆ. ಬಳಿಕ ಶಿವಮೊಗ್ಗದಿಂದ ಹೊನ್ನಾಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಹತ್ತಿಸಿ, ಅವರು ಸುರಕ್ಷಿತವಾಗಿ ಪ್ರಯಾಣ ಬೆಳೆಸುವಂತೆ ನೋಡಿಕೊಂಡಿದ್ದಾರೆ.
Akka Pade Police Helps Helpless Woman


