ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ , ನಗರದ ದುರ್ಗಿಗುಡಿ ಬಳಿ ಇರುವ ಜ್ಯೂಸ್ ಸೆಂಟರ್ ಒಂದರ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ಜ್ಯೂಸ್ ತಯಾರಿಕೆಗೆ ಕೊಳೆತ ಹಣ್ಣುಗಳನ್ನು ಬಳಸುತ್ತಿದ್ದ ಕಾರಣಕ್ಕಾಗಿ ಅಂಗಡಿಯನ್ನು ಬಂದ್ ಮಾಡಿಸಿ ಸೀಜ್ ಮಾಡಿದ್ದಾರೆ.ಎಸಿ ಡಾ. ಮೈತ್ರಿ ಅವರ ನೇತ್ರುತ್ವದಲ್ಲಿ ಜ್ಯೂಸ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ
ದುರ್ಗಿಗುಡಿಯ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ಪ್ರಮುಖ ಭಾಗಗಳಲ್ಲಿನ ಸುಮಾರು 15ಕ್ಕೂ ಹೆಚ್ಚು ಹೋಟೆಲ್ ಮತ್ತು ಆಹಾರ ಕೇಂದ್ರಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಬಹುತೇಕ ಮಳಿಗೆಗಳಲ್ಲಿ ಅಡುಗೆ ಕೋಣೆ, ಪಾತ್ರೆ ತೊಳೆಯುವ ಪ್ರದೇಶಗಳು ಅತ್ಯಂತ ಗಲೀಜಿನಿಂದ ಕೂಡಿದ್ದು, ಕೆಲವು ಹೋಟೆಲ್ಗಳಲ್ಲಿ ಜಿರಳೆಗಳ ಕಾಟವೂ ಕಂಡುಬಂದಿದೆ. ಹಾಗೆಯೇ ಜ್ಯೂಸ್ ಸೆಂಟರ್ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾಗಿದ್ದು,ಆ ಹಣ್ಣುಗಳನ್ನು ಕಸದ ತೊಟ್ಟಿಗೆ ಹಾಕಿ ಜ್ಯೂಸ್ ಸೆಂಟರ್ನ್ನ ಸೀಜ್ ಮಾಡಿದ್ದಾರೆ .ನ್ಯೂನತೆ ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಿದ್ದಾರೆ.

ತಪಾಸಣೆಯ ವೇಳೆ ರೆಸ್ಟೋರೆಂಟ್ ಒಂದರಲ್ಲಿ ಅವಧಿ ಮುಗಿದಿದ್ದ ತಂಪಾದ ಪಾನೀಯಗಳು ಪತ್ತೆಯಾಗಿದ್ದು, ತಕ್ಷಣವೇ ಅವುಗಳನ್ನು ಜಪ್ತಿ ಮಾಡಲಾಗಿದೆ. ಇದಷ್ಟೇ ಅಲ್ಲದೆ ಕತ್ತರಿಸಿದ ಈರುಳ್ಳಿ, ತರಕಾರಿಗಳನ್ನು ದಿನಗಟ್ಟಲೆ ಫ್ರಿಡ್ಜ್ನಲ್ಲಿಡುವ ಪದ್ಧತಿ ಹಾಗೂ ಬೋಂಡಾ, ಬಜ್ಜಿಗಳನ್ನು ಹಾಳೆಗಳಲ್ಲಿ ಸುತ್ತಿ ನೀಡುವುದನ್ನು ಗಮನಿಸಿದ ಅಧಿಕಾರಿಗಳು, ಇವುಗಳನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ನಗರದ ರಸ್ತೆ ಬದಿಯ ಸ್ಟ್ರೀಟ್ ಫುಡ್ ಸೆಂಟರ್ಗಳು, ಚಾಟ್ಸ್ ಹಾಗೂ ಪಾನಿಪುರಿ ಮಳಿಗೆಗಳ ಮೇಲೆಯೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ತಂಡ ನಿರಂತರ ನಿಗಾ ವಹಿಸಿದೆ. ಆಹಾರದಲ್ಲಿ ಕೃತಕ ಬಣ್ಣಗಳು, ಟೇಸ್ಟಿಂಗ್ ಪೌಡರ್ಗಳ ಅತಿಯಾದ ಬಳಕೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ತಪಾಸಣೆ ಇಲ್ಲಿಗೆ ಮುಗಿಯುವುದಿಲ್ಲ, 15 ದಿನಗಳ ನಂತರ ಮತ್ತೆ ಫಾಲೋಅಪ್ ಕಾರ್ಯಾಚರಣೆ ನಡೆಯಲಿದ್ದು, ಲೋಪ ಸರಿಪಡಿಸದಿದ್ದರೆ ಪರವಾನಗಿರದ್ದುಪಡಿಸಲಾಗುವುದು ಎಂದು ಎಸಿ ಡಾ. ಮೈತ್ರಿ ತಿಳಿಸಿದ್ದಾರೆ.
