ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಗೌರಿ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಸೆಕ್ಯುರಿಟಿ ಟೈಟ್ ಮಾಡಿದ್ದಾರೆ, ಅಲ್ಲದೆ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತಾಗಿ ಎಸ್ಪಿ ನಿಖಿಲ್ ಬಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ನೀಡಿರುವ ಮಾಹಿತಿಯನ್ನು ಗಮನಿಸುವುದಾದರೆ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿವಿಲ್ ಪೊಲೀಸ್ ಪಡೆ ಹಾಗೂ SAF ತಂಡದೊಂದಿಗೆ ಏರಿಯಾ ಡಾಮಿನೇಷನ್ ನಡೆಸಲಾಗಿದ್ದು, ಪ್ರಮುಖ ಹಾಗೂ ಒಳರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ.
ಇದೇ ವೇಳೇ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಿ, ಸಂಬಂಧಪಟ್ಟವರಿಗೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಶಿವಮೊಗ್ಗ ನಗರದ ವಿವಿಧ ಠಾಣೆಯಲ್ಲಿನ ಇನ್ಸ್ಪೆಕ್ಟರ್ಗಳು ತಮ್ಮ ವ್ಯಾಪ್ತಿಯ ರೌಡಿಶೀಟರ್ಗಳನ್ನ ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ್ದಾರೆ.
ಇದರ ಜೊತೆಗೆ ಗೌರಿ ಹಾಗೂ ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಪರೇಡ್ ಕೂಡ ನಡೆಸಲಾಗಿದೆ. ಸಂಬಂಧಪಟ್ಟವರನ್ನು ಕರೆಸಿ ಸೂಕ್ತ ಎಚ್ಚರಿಕೆ ನೀಡಲಾಗಿದ್ದು, ಅವರ ಚಲನವಲನಗಳ ಮೇಲೂ ನಿಗಾ ಇರಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಹಬ್ಬದ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು, ಅಂತಹ ಚಟುವಟಿಕೆಯ ಮಾಹಿತಿ ಸಿಕ್ಕರೆ, ಪೊಲೀಸರಿಗೆ ನೀಡಬೇಕು, ಶಾಂತಿ ಸುವ್ಯವಸ್ಥೆ ದಕ್ಕೆಯಾಗುವ ಯಾವ ಕೆಲಸಕ್ಕೂ ಕೈ ಹಾಕಬಾರದು ಎಂದು ರೌಡಿಶೀಟರ್ಗಳಿಗೆ ಪೊಲೀಸರು ಎಚ್ಚರಿಸಿದ್ದಾರೆ.
