ಮಲೆನಾಡುಟುಡೆ ಸುದ್ದಿ ಶಿವಮೊಗ್ಗ: ಹಿರಿಯರು ಪ್ರತಿಯೊಂದು ಕುಟುಂಬದ ಶಾಂತಿ-ಸಾಮರಸ್ಯ, ಭದ್ರತೆಗೆ ಅಡಿಪಾಯವಾಗಿರುತ್ತಾರೆ. ಹಿರಿಯರ ಜೀವನಾನುಭವ ಧಾರೆಯಿಂದ ಕಿರಿಯರ ಬದುಕು ರೂಪುಗೊಳ್ಳುತ್ತದೆ. ಪ್ರತಿಯೊಬ್ಬರೂ ಹಿರಿಯರನ್ನು ಅರಿತು ಗೌರವಿಸುವುದೇ ಸಮಾಜ ಪರಿವರ್ತನೆಗೆ ಮೂಲವಾಗಿದೆ ಎಂದು ಶಿವಮೊಗ್ಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ನ್ಯಾ. ಸಂತೋಷ್ ಎಂ. ಎಸ್. ರವರು ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಕೇಂದ್ರ ಕಾರಾಗೃಹ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 18 -08-2026 ರಂದು ಬೆ. 11 ಗಂಟೆಗೆ ಕೇಂದ್ರ ಕಾರಾಗೃಹದ ಗ್ರಂಥಾಲಯ ವಿಭಾಗದಲ್ಲಿ ಜರುಗಿದ ಹಿರಿಯ ನಾಗರಿಕರ ಹಬ್ಬ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮತನಾಡಿದರು.
ಹಿರಿಯರನ್ನು ಕಡೆಗಣನೆ ಮಾಡುವ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಸಮಾಜವು ಉದ್ಧಾರಗೊಂಡ ಯಾವುದೇ ಉದಾಹರಣೆಗಳಿಲ್ಲ. ಹಿರಿಯರ ಬದುಕಿನ ಮೌಲ್ಯಾದರ್ಶ, ಜ್ಞಾನ ಹಾಗೂ ಅನುಭವದ ಮಾರ್ಗದರ್ಶನವನ್ನು ಪಡೆದವರಿಗೆ ಮಾತ್ರ ಜೀವನದಲ್ಲಿ ಮುನ್ನಡೆ ಲಭಿಸಬಲ್ಲುದು. ಆದುದರಿಂದ ಪ್ರತಿಯೊಬ್ಬರೂ ಹಿರಿಯರನ್ನು ಎಂದೂ ಗೌರವಾದರ ಭಾವನೆಯಿಂದ ಕಾಣುವುದು ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಶಿವಮೊಗ್ಗ ಇದರ ಕಾರ್ಯದರ್ಶಿಯವರಾದ ಅನುರಾಧ ರವರು ಮಾತನಾಡಿ, ಹಿರಿಯರು ಕುಟುಂಬ ಎಂಬ ಹೆಮ್ಮರಕ್ಕೆ ಬೇರು ಇದ್ದಂತೆ. ಹಿರಿಯರನ್ನು ಹೊರೆ ಎಂದು ಭಾವಿಸದೇ ಹಿರಿಯರ ತ್ಯಾಗ, ಜೀವನದ ಅನುಭವ ಹಾಗೂ ಮಾರ್ಗದರ್ಶನದಲ್ಲಿ ಕಿರಿಯರ ಬದುಕು ಹಸನಾಗಲು ಸಾಧ್ಯ. ಹಿರಿಯರ ನಗು, ಸಂತೋಷವೇ ಕಿರಿಯರ ಬದುಕಿನ ಸುಸಂಸ್ಕೃತಿಯ ಸಂಕೇತ ಎಂದರು.
ಪ್ರಾಂಶುಪಾಲರು ಮತ್ತು ರಂಗಕರ್ಮಿಗಳಾದ ಡಾ. ಚಿದಾನಂದ ರವರು ಮಾತನಾಡಿ, ಒಂದು ದೇಶದ ಸಮೃದ್ಧಿಯನ್ನು ತಿಳಿಯಬೇಕಾದರೆ ಅಲ್ಲಿನ ಹಿರಿಯರ ಆರೋಗ್ಯವನ್ನು ನೋಡಬೇಕು ಎಂಬ ಮಾತು ಇದೆ. ಒಂದು ಮನೆಯಲ್ಲಿ ಹಿರಿಯರು ಇದ್ದಾರೆಂದರೆ ಆ ಮನೆಯಲ್ಲಿ ಸುಸ್ಥಿತಿ ಮತ್ತು ಅಭ್ಯುದಯ ಇದೆ ಎಂದು ಅರ್ಥ. ಮನೆಯ ಆರೋಗ್ಯಪೂರ್ಣ ವಾತಾವರಣಕ್ಕೆ ಆಧಾರ. &ಜೀವನದ ಉನ್ನತಿಯು ಕಿರಿಯರಿಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಸುವರ್ಣ ವಿ. ನಾಯ್ಕ ಅವರು ಮಾತನಾಡಿ, ನಡತೆಯನ್ನು ಬದಲಾಯಿಸಿಕೊಂಡು ಸನ್ನಡತೆಯನ್ನು ರೂಢಿಸಿಕೊಳ್ಳುವ ಮೂಲಕ ಹಿರಿಯರನ್ನು ಗೌರವಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಕಾರಾಗೃಹದಲ್ಲಿ ಹಿರಿಯ ನಾಗರಿಕರ ಕಲಾ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಅತ್ಯಂತ ವಿಶೇಷ. ಕಾರಾಗೃಹದ ಹಿರಿಯ ನಾಗರಿಕರು ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ತಮ್ಮ ಇಲಾಖೆ ಬದ್ಧ ಎಂದರು.
ಶಿವಮೊಗ್ಗ ಖಜಾನೆ ಇಲಾಖೆ ಉಪನಿರ್ದೇಶಕರಾದ ಸಾವಿತ್ರಿ ಅವರು ಮಾತನಾಡಿ, ಹಿರಿಯರ ಬದುಕು ಕಿರಿಯರಿಗೆ ಪಾಠ ಇದ್ದಂತೆ. ಜೀವನದಲ್ಲಿ ಮಾಡಿದ ತಪ್ಪುಗಳ ಅಧ್ಯಾಯವನ್ನು ಕಳೆದು ಹೊಸ ಅಧ್ಯಾಯವನ್ನು ಬರೆಯಲು ಹಿರಿಯರ ಜೀವನ ಚಿಂತನೆಗಳು ನೆರವಾಗುತ್ತವೆ ಎಂದರು.
