Save Malnad ತೀರ್ಥಹಳ್ಳಿ: ಮಲೆನಾಡಿನ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ನದಿಗಳ ಮೂಲಗಳನ್ನು ಉಳಿಸಲು ನೈಸರ್ಗಿಕ ಕಾಡುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಯೋಧ ಹಾಗೂ ಪರಿಸರ ಕಾಳಜಿಯುಳ್ಳ ಚಿದಾನಂದ ಗುರೂಜಿ ಮನವಿ ಮಾಡಿದ್ದಾರೆ.
ಶಿವಮೊಗ್ಗ : ಆನ್ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ 39 ಲಕ್ಷ ಕಳೆದುಕೊಂಡ ಉದ್ಯಮಿ
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಪ್ರಕೃತಿ ಮತ್ತು ಆತ್ಮಗಳ ಸಂಬಂಧ ಅತ್ಯಂತ ಹತ್ತಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಆದಿಯಲ್ಲಿ ಈ ಭೂಮಿಯಲ್ಲಿ ದೇವತೆಗಳು ವಾಸಿಸುತ್ತಿದ್ದರು ಎಂಬ ನಂಬಿಕೆಯನ್ನು ಉಲ್ಲೇಖಿಸಿದ್ದಾರೆ. ಸತ್ಯಯುಗದಿಂದ ಕಲಿಯುಗದವರೆಗೆ ಪ್ರಕೃತಿಯ ಗುಣಗಳಲ್ಲಿ ಬದಲಾವಣೆ ಉಂಟಾಗಿದ್ದು, ಪ್ರಸ್ತುತ ಕಲಿಯುಗದಲ್ಲಿ ತಮೋಗುಣದ ಪ್ರಭಾವ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕಾಡುಗಳ ಬದಲಿಗೆ ಅಕೇಶಿಯಾ, ನೀಲಗಿರಿ ಸೇರಿದಂತೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ವಿದೇಶಿ ಹಾಗೂ ಹೈಬ್ರಿಡ್ ಜಾತಿಯ ಮರಗಳ ನೆಡುವಿಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಮರಗಳು ಅಂತರ್ಜಲದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ನೈಸರ್ಗಿಕ ಕಾಡುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಪೂರ್ವಜರು ಪ್ರಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಿದ್ದರು. ಆದರೆ ಇಂದು ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಮಾಲಿನ್ಯ, ಮಳೆ ಪ್ರಮಾಣದ ಕುಸಿತ ಹಾಗೂ ಅಂತರ್ಜಲ ಮಟ್ಟ ಇಳಿಕೆಯಿಂದ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನ ಪರಿಸರವನ್ನು ಉಳಿಸಲು ನದಿಗಳ ಉಗಮ ಸ್ಥಳಗಳನ್ನು ಸಂರಕ್ಷಿಸುವುದು, ಆಮ್ಲಜನಕವನ್ನು ಸಮೃದ್ಧವಾಗಿ ಬಿಡುಗಡೆ ಮಾಡುವ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವುದು ಹಾಗೂ ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗುವ ಅಕೇಶಿಯಾ, ನೀಲಗಿರಿ, ರಬ್ಬರ್ ಸೇರಿದಂತೆ ಕೆಲವು ವಿದೇಶಿ ಹಾಗೂ ಹೈಬ್ರಿಡ್ ಮರಗಳ ವಿಸ್ತರಣೆಗೆ ನಿಯಂತ್ರಣ ಹೇರಬೇಕೆಂದು ಅವರು ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ನೈಸರ್ಗಿಕ ಕಾಡುಗಳನ್ನು ಬೆಳೆಸಿ, ಮುಂದಿನ ಪೀಳಿಗೆಗೆ ಹಸಿರು ಮಲೆನಾಡನ್ನು ಉಳಿಸೋಣ” ಎಂದು ಚಿದಾನಂದ ಗುರೂಜಿ ಸಾರ್ವಜನಿಕರಲ್ಲಿ ಕರೆ ನೀಡಿದ್ದಾರೆ.
ಬರಹ ಚಿದಾನಂದ ಗುರೂಜಿ (ಮಾಜಿ ಯೋಧ)



