CS Shadakshari / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರ ಕಾರ್ಯಸ್ಥಾನ ಶಿವಮೊಗ್ಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಳೆದ ಎರಡುವರೆ ವರ್ಷಗಳಲ್ಲಿ ಅವರ ಕಾರ್ಯಸ್ಥಾನವನ್ನು ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಶಿವಮೊಗ್ಗ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವರ್ಗಾವಣೆಯ ಹಿಂದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಧು ಬಂಗಾರಪ್ಪರವರನ ಶಿಫಾರಸ್ಸು ಇತ್ತು ಎಂದೇ ಹೇಳಲಾಗಿತ್ತು. ಅಲ್ಲದೆ ಈ ಸಂಬಂಧ ಅಂದು ನೀಡಿದ ಪ್ರತಿಕ್ರಿಯೆಯಲ್ಲಿ ಷಡಾಕ್ಷರಿಯವರ ವಿರುದ್ಧ ಆರೋಪವಿತ್ತು. ಸರ್ಕಾರಕ್ಕೆ ಉಸ್ತುವಾರಿ ಸಚಿವನಾಗಿ ತಿಳಿಸಿದ್ದೆ. ಇದು ಸರ್ಕಾರ ಕೈಗೊಂಡ ತೀರ್ಮಾನ ಎಂದಿದ್ದರು. ಸಚಿವರ ಹೇಳಿಕೆಗೆ ಸಂಸದ ಬಿ.ವೈ. ರಾಘವೇಂದ್ರರವರು ಟೀಕೆಯನ್ನು ವ್ಯಕ್ತಪಡಿಸಿದ್ದರು. ಇನ್ನೂ ಈ ವರ್ಗಾವಣೆ ಕುರಿತಾಗಿ ಕಾನೂನಾತ್ಮಕ ಹೋರಾಟವನ್ನು ಸಹ ನಡೆಸಿದ್ದರು ಸಿಎಸ್ ಷಡಾಕ್ಷರಿ. ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ಸಿಎಸ್ ಷಡಾಕ್ಷರಿ ಮತ್ತ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ಲೆಕ್ಕಾದೀಕ್ಷಕರಾಗಿದ್ದ ಅವರು ಇದೀಗ ಉಪ ನಿರ್ದೇಶಕರಾಗಿ ಶಿವಮೊಗ್ಗಕ್ಕೆ ವಾಪಸ್ ಆಗಿದ್ದಾರೆ.
ಸಾಮಾನ್ಯವಾಗಿ ವರ್ಗಾವಣೆ ಆಡಳಿತಾತ್ಮಕ ವಿಚಾರವಾಗಿಯೇ ನಡೆದರೂ ಸಹ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ವರ್ಗಾವಣೆಗೆ ಸರ್ಕಾರಗಳು ಮುಂದಾಗುವುದಿಲ್ಲ. ಆದರೆ ಈ ಹಿಂದಿನ ಸರ್ಕಾರದಲ್ಲಿ ಷಡಾಕ್ಷರಿಯವರನ್ನ 2023 ರ ನವೆಂಬರ್ನಲ್ಲಿ ವರ್ಗಾವಣೆ ಮಾಡಲಾಗಿತ್ತು . ಶಿವಮೊಗ್ಗದ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕರ ಕಚೇರಿಯ ಲೆಕ್ಕಾಧೀಕ್ಷಕರಾಗಿದ್ದ ಸಿ.ಎಸ್.ಷಡಾಕ್ಷರಿ (CS Shadakshari) ಅವರನ್ನು ಕೋಲಾರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರಾಗಿ ವರ್ಗಾಯಿಸಲಾಗಿತ್ತು.. ಆನಂತರ ನಡೆದ ಸರ್ಕಾರ ನೌಕರರ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಸಿಎಸ್ ಷಡಾಕ್ಷರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ವರ್ಗಾವಣೆಯ ಹಿಂದೆ ಹಾಗೂ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪದ ಮಾತುಗಳು ಶಿವಮೊಗ್ಗದ ವಲಯದಲ್ಲಿ ದಟ್ಟವಾಗಿ ಕೇಳಿಬಂದಿತ್ತಷ್ಟೆ ಅಲ್ಲದೆ ಈ ವಿಚಾರದಲ್ಲಿ ಉಸ್ತುವಾರಿ ಸಚಿವರ ಕೈ ಮೇಲಾಗಿತ್ತು ಎಂದೇ ಚರ್ಚೆಯಾಗಿತ್ತು. ಇನ್ನೂ ಸರ್ಕಾರ ಬದಲಾದ ಬೆನ್ನಲ್ಲೆ ಸಿಎಸ್ ಷಡಾಕ್ಷರಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ.
Whatsapp / https://chat.whatsapp.com/JrsZ8He4nN600n0r3tJItz
ಸದ್ಯ ಸಿಎಸ್ ಷಡಾಕ್ಷರಿಯ ಘರ್ ವಾಪಸಿ, ಶಿವಮೊಗ್ಗ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಚರ್ಚೆಯಲ್ಲಿರುವ ಮಾತುಗಳ ಪ್ರಕಾರ, ಸಿಎಸ್ ಷಡಾಕ್ಷರಿ ಭವಿಷ್ಯದಲ್ಲಿ ಶಿವಮೊಗ್ಗದ ರಾಜಕಾರಣ ಪ್ರವೇಶ ಮಾಡಬಹುದಾದ ಭಾವಿ ರಾಜಕಾರಣಿ, ಅಧಿಕೃತ ಮಾತ್ರ ಆಗಿಲ್ಲ. ಆದರೆ ಮಾತಿಗೆ ಪೂರಕವಾಗಿ ನೋಡಿದರೆ, ಷಡಾಕ್ಷರಿಯವರ ಮರು ಎಂಟ್ರಿ ಮಹತ್ವದ್ದಾಗಿದೆ. ಇನ್ನೂ ಪ್ರತಿಷ್ಟೆಯ ಗ್ರೌಂಡ್ಸ್ನಲ್ಲಿಯು ಈ ವರ್ಗಾವಣೆ ಸಿಎಸ್ ಷಡಾಕ್ಷರಿಗೆ ಇದು ದೊಡ್ಡಗೆಲುವು. ಕಾನೂನು ಹೋರಾಟವಿಲ್ಲದೆ ಸರ್ಕಾರದಿಂದಲೇ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿರುವ ಅವರು ಇಂದು ಜಂಟಿ ನಿರ್ದೇಶಕರ ಕಚೇರಿ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ, ಶಿವಮೊಗ್ಗ ಕಚೇರಿಯ ಉಪ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಈ ವೇಳೆ ಜಿಲ್ಲಾಧ್ಯಕ್ಷರಾದ ಆರ್.ಮೋಹನ್ ಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದ್ದಾರೆ.
ಒಟ್ಟಾರೆ, ಸದ್ಯದ ಮಟ್ಟಿಗೆ ಚರ್ಚೆಗಳ ಜೊತೆಜೊತೆಗೆ ರಾಜಕಾರಣದ ಸಂಚಲನಕ್ಕೆ ಕಾರಣವಾಗಿರುವ ಸಿಎಸ್ ಷಡಾಕ್ಷರಿ ಮತ್ತವರ ವರ್ಗಾವಣೆ, ಇಲ್ಲಿವರೆಗಿನ ಪ್ರತಿಷ್ಟಾ ರಾಜಕಾರಣದ ಪರೋಕ್ಷ ಸಮರಕ್ಕೆ ತಾರ್ಕಿಕ ಅಂತ್ಯ ಕೊಟ್ಟಿದೆಯಾದರೂ ಅಂತಿಮವಾಗಿ ಒಳರಾಜಕೀಯದ ಅಂಗಳದಲ್ಲಿ ಹಲ್ಚಲ್ ಸೃಷ್ಟಿಸುವ ಸಾಧ್ಯತೆ ಇದೆ.
