ಹೊಸನಗರ ಟೆಂಪಲ್ & ಬೈಕ್​ ಕೇಸ್​, ಭದ್ರಾವತಿ ಕತ್ತೆಮೂರ್ತಿ ಅರೆಸ್ಟ್! ಕಂಪ್ಲೀಟ್ ಸ್ಟೋರಿ

Hosanagara Police / ಮಲೆನಾಡು ಟುಡೆ ಸುದ್ದಿ / ಹೊಸನಗರ / ಟೌನ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್ ಕಳ್ಳತನ ಹಾಗೂ ದೇವಸ್ಥಾನದ ಹುಂಡಿ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಹೊಸನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡೂ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಭದ್ರಾವತಿ ಮೂಲದ ಆರೋಪಿಯನ್ನು ಬಂಧಿಸಿ, ಆತನಿಂದ ದ್ವಿಚಕ್ರ ವಾಹನ ಹಾಗೂ ನಗದನ್ನು ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.

ಹೊಸನಗರ ಟೌನ್‌ನ ನಗರ ರಸ್ತೆಯಲ್ಲಿರುವ ಗುರುಶಕ್ತಿ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಲಾಗಿದ್ದ ಬೈಕ್ ಕಳುವಾಗಿತ್ತು. ಈ ಬಗ್ಗೆ ಹೊಸನಗರ ತಾಲ್ಲೂಕಿನ ದ್ಯಾವರ್ಸ ನಿವಾಸಿ ಪ್ರಕಾಶ್ ಬಿನ್ ಬಸವಪೂಜಾರಿ ಅವರು ನೀಡಿದ ದೂರಿನ ಆಧಾರದ ಮೇಲೆ ಹೊಸನಗರ ಪೊಲೀಸ್ ಠಾಣೆಯಲ್ಲಿ 303(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ನಗರ ರಸ್ತೆಯ ಪಕ್ಕದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲ ಬೀಗವನ್ನು ಒಡೆದು ಹುಂಡಿಯಲ್ಲಿದ್ದ ಹಣವನ್ನು ದುಷ್ಕರ್ಮಿಗಳು ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹೊಸನಗರ ಟೌನ್‌ನ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ ಮಹೇಶ್ ಬಿನ್ ಗಡ್ಲಪ್ಪ ಅವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಕಲಂ 331(4), 305 ಬಿ.ಎನ್.ಎಸ್ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಹೊಸನಗರ ಪೊಲೀಸ್ ಠಾಣೆಯ ಪಿಎಸ್ಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡದಲ್ಲಿದ್ದ ಸಿಬ್ಬಂದಿ ಎಎಸ್ಐ ಸತೀಶ್ ರಾಜ್, ಸಿಪಿಸಿ ಮಾಯಪ್ಪ ಗೋಕಾವಿ ಮತ್ತು ಸಿಪಿಸಿ ಸುನಿಲ್ ಇದೀಗ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 10/06/2026 ರಂದು ಭದ್ರಾವತಿ ತಾಲ್ಲೂಕಿನ ಭದ್ರಾವತಿ ಟೌನ್ ಬೋವಿ ಕಾಲೋನಿಯ ನಿವಾಸಿ, 28 ವರ್ಷದ ಮೂರ್ತಿ.ವಿ ಅಲಿಯಾಸ್ ಕತ್ತೆಮೂರ್ತಿಯನ್ನ ಬಂಧಿಸಿದೆ. ಆತನಿಂದ 60000 ರೂಪಾಯಿ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ 1100 ರೂಪಾಯಿ ನಗದನ್ನ ಅಮಾನತ್ತು ಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

Whatsapp : https://chat.whatsapp.com/JrsZ8He4nN600n0r3tJItz