ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ದುಬೈ ಉದ್ಯೋಗಿ ಸಾವು! ಕಾರಣವಾಯ್ತು ಈ ಘಟನೆ

ಮಲೆನಾಡು ಟುಡೆ ಸುದ್ದಿ / ಶೃಂಗೇರಿ / ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ಹೊನಗೋಡು ಬಳಿ ನಿನ್ನೆ ಮಂಗಳವಾರ ಮುಂಜಾನೆ ಸಂಭವಿಸಿದ ‘ಹಿಟ್ ಅಂಡ್ ರನ್’ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಶೃಂಗೇರಿ ತಾಲೂಕಿನ ಮೆಣಸೆ ಪಂಚಾಯಿತಿ ವ್ಯಾಪ್ತಿಯ ಕಲ್ಕಟ್ಟೆ ಮೂಲದ ರಫಿಕ್ (31) ಮೃತಪಟ್ಟ ದುರ್ದೈವಿ. ಇವರು ದುಬೈನಲ್ಲಿ ಉದ್ಯೋಗದಲ್ಲಿದ್ದು, ಕೆಲವು ದಿನಗಳ ಹಿಂದೆಯಷ್ಟೇ ರಜೆಯ ಮೇರೆಗೆ ಊರಿಗೆ ಆಗಮಿಸಿದ್ದರು.

ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ

ರಫಿಕ್ ಅವರು ಮಂಗಳವಾರ ಮುಂಜಾನೆ ಹರಿಹರಪುರದಿಂದ ಶೃಂಗೇರಿ ಕಡೆಗೆ ತಮ್ಮ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅಡ್ಡಗೆದ್ದೆ ಸಮೀಪದ ಹೊನಗೋಡು ಎಂಬಲ್ಲಿ ಅಪರಿಚಿತ ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದ ರಫಿಕ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಘಟನಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅಪಘಾತವೆಸಗಿದ ವಾಹನವು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ.

ಮೃತ ರಫಿಕ್ ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇದೇ ವಾರದಲ್ಲಿ ಮರಳಿ ತಮ್ಮ ಉದ್ಯೋಗಕ್ಕೆ ತೆರಳುವವರಿದ್ದರು. ಹಿಂದಿರುಗುವ ಪ್ರಯಾಣಕ್ಕಾಗಿ ಅವರು ರಿಟರ್ನ್ ಟಿಕೆಟ್ ಕೂಡ ಕಾಯ್ದಿರಿಸಿದ್ದರು ಎಂದು ತಿಳಿದುಬಂದಿದೆ.

ಈ ದುರಂತ ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ಅಪರಿಚಿತ ವಾಹನ ಹಾಗೂ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw