Gruha Lakshmi Scheme Reverification / ಮಲೆನಾಡು ಟುಡೆ ಸುದ್ದಿ | ಬೆಂಗಳೂರು | ಗೃಹಜ್ಯೋತಿಯಂತೆ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆಗೆ ರಾಜ್ಯ ಸಂಪುಟ ನಿರ್ಧರಿಸಿದೆ. ಇದಕ್ಕಾಗಿ ₹20 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಿದೆ.
ಬಯೋಮೆಟ್ರಿಕ್ ಅಥವಾ ಮುಖಚಹರೆ (ಫೇಷಿಯಲ್ ಅಥೆಂಟಿಕೇಷನ್) ದೃಢೀಕರಣದ ಮೂಲಕ ಗೃಹಲಕ್ಷ್ಮೀಯ ಯೋಜನೆಯ ಫಲಾನುಭವಿಗಳ ಪರಿಶೀಲನೆ ನಡೆಯಲಿದೆ. ನಿನ್ನೆದಿನ ಭಾನುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯೋಜನೆಯ ನೈಜ ಅರ್ಹರಿಗೆ ಮಾತ್ರ ಸೌಲಭ್ಯ ತಲುಪುವ ಉದ್ದೇಶದಿಂದ ಫಲಾನುಭವಿಗಳ ಪರಿಶೀಲನೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
- ಪರಿಶೀಲನೆ ವೇಳೆ ಬಯೋಮೆಟ್ರಿಕ್ ಅಥವಾ ಫೇಷಿಯಲ್ ಅಥೆಂಟಿಕೇಷನ್ ಮೂಲಕ ಫಲಾನುಭವಿಗಳ ವಿವರಗಳನ್ನು ದೃಢೀಕರಿಸಲಾಗುತ್ತದೆ.
- ಯಾವ ನಮೂನೆಯಲ್ಲಿ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು ಎಂಬುದನ್ನು ಸಂಬಂಧಿತ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು. ಯೋಜನೆಯ ಲಾಭ ಪಡೆಯಲು ಫಲಾನುಭವಿಯ ಬಯೋಮೆಟ್ರಿಕ್ ವಿವರ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸರಿಯಾಗಿರಬೇಕು.
- ಮತ್ತೊಬ್ಬರ ಬ್ಯಾಂಕ್ ಖಾತೆ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಲು ಅವಕಾಶ ಇರುವುದಿಲ್ಲ. ಪತಿ ಅಥವಾ ಮಕ್ಕಳ ಬ್ಯಾಂಕ್ ಖಾತೆಯನ್ನೂ ಪರಿಗಣಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪರಿಶೀಲನೆಯ ಉದ್ದೇಶ ಅರ್ಹ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಯಾರನ್ನೂ ಯೋಜನೆಯಿಂದ ಕೈಬಿಡುವ ಉದ್ದೇಶ ಸರ್ಕಾರಕ್ಕಿಲ್ಲ. ಸ್ವಯಂಪ್ರೇರಿತವಾಗಿ ಯೋಜನೆಯ ಲಾಭ ತ್ಯಜಿಸಲು ಇಚ್ಛಿಸುವವರು ಮಾತ್ರ ಅದನ್ನು ಬಿಟ್ಟುಕೊಡಬಹುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
