Fitness Certificate / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಆಟೋಚಾಲಕರಿಗೆ ಸಾರಿಗೆ ಇಲಾಖೆ ಶಿವವಮೊಗ್ಗ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಡಿಸಿ ಎಸ್ಪಿ ಜೊತೆಗಿನ ಆಟೋ ರಿಕ್ಷಾ ಚಾಲಕರ ಮೀಟಿಂಗ್ ಬೆನ್ನಲ್ಲೆ ಈ ಎಚ್ಚರಿಕೆಯ ತಿಳುವಳಿಕೆ ಸಂದೇಶ ಹೊರಬಿದ್ದಿದೆ.
ವಾರ್ತಾ ಇಲಾಖೆ ಮೂಲಕ ಬಂದಿರುವ ಸಾರಿಗೆ ಇಲಾಖೆಯ ಎಚ್ಚರಿಕೆಯ ಮೆಸೇಜ್ನಲ್ಲಿ ನಗರದಲ್ಲಿ ಅರ್ಹತಾ ಪತ್ರ (ಎಫ್ ಸಿ) ನವೀಕರಿಸದೆ ನಿಯಮಬಾಹಿರವಾಗಿ ಸಂಚರಿಸುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.
ಪ್ರಕಟಣೆಯ ವಿವರ
ಜಿಲ್ಲಾಧಿಕಾರಿಗಳ ಅಧ್ಯ ಕ್ಷತೆಯಲ್ಲಿ ಜರುಗಿದೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ಅರ್ಹತಾ ಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋರಿಕ್ಷಾಗಳ ಚಾಲಕರು ಅಥವಾ ಮಾಲೀಕರು ತಕ್ಷಣವೇ ಸಂಬಂಧಪಟ್ಟ ಸಾರಿಗೆ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿ ವಿನಂತಿಸಲಾಗಿದೆ.
ನಂತರ, ತಮ್ಮ ವಾಹನಗಳನ್ನು ಮಲವಗೊಪ್ಪದ ಡ್ರೈವಿಂಗ್ ಟ್ರ್ಯಾಕ್ನಲ್ಲಿ ಹಾಜರುಪಡಿಸಿ, ಅರ್ಹತಾ ಪತ್ರವನ್ನು ನವೀಕರಿಸಿಕೊಳ್ಳಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
