ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿಯೊಬ್ಬರನ್ನು ಆಟೋದಲ್ಲಿ ಕರೆದೊಯ್ದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಕೇವಲ 12 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆ ಮಂಡ್ಲಿ ನಿವಾಸಿಯಾದ 27 ವರ್ಷದ ದೇವರಾಜ ಬಂಧಿತ ಆರೋಪಿಯಾಗಿದ್ದಾನೆ.
ಮಂಗಳಮುಖಿಯನ್ನು ಆಟೋದಲ್ಲಿ ಕರೆದೊಯ್ದು ಸುಲಿಗೆ
ಏಪ್ರಿಲ್ 24 ರಂದು ರಾತ್ರಿ ಈ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಮಂಗಳಮುಖಿಯನ್ನು ಆಟೋದಲ್ಲಿ ನಗರದ ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯಿಂದ 4,000 ರೂಪಾಯಿ ನಗದು, ಒಂದು ಮೊಬೈಲ್ ಫೋನ್, ಕೊರಳಲ್ಲಿದ್ದ ಚಿನ್ನದ ಚೈನ್ ಹಾಗೂ ಬಂಗಾರದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ. ಈ ಸಂಬಂಧ ಏಪ್ರಿಲ್ 25 ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಿಎನ್ಎಸ್ ಕಲಂ 309(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.
12 ಗಂಟೆಯಲ್ಲಿ ಮಂಡ್ಲಿ ನಿವಾಸಿ ಅರೆಸ್ಟ್!
ವಿಶೇಷ ಅಂದರೆ, ಕೇಸ್ ದಾಖಲಾದ 12 ಗಂಟೆಯೊಳಗೆ ಆರೋಪಿ ದೇವರಾಜನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ 20,000 ರೂಪಾಯಿ ಮೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ್ದ 3,00,000 ರೂಪಾಯಿ ಬೆಲೆಬಾಳುವ ಆಟೋರಿಕ್ಷಾ ಹಾಗೂ 1 ಚಾಕು ಸೇರಿದಂತೆ ಒಟ್ಟು 3,20,000 ರೂಪಾಯಿ ಅಂದಾಜು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿನೋಬನಗರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್, ಸುರೇಶ್ ಉಸ್ತುವಾರಿಯಲ್ಲಿ, ಪಿಎಸ್ಐ ತಿರುಮಲೇಶ್ ಜಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜು ಕೆ.ಆರ್ ,, ಚಂದ್ರಾನಾಯ್ಕ ಬಿ , ವಿಜಯಕುಮಾರ್ ಹಾಗೂ ಮನುಶಂಕರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw