ರಿಪ್ಪನ್ಪೇಟೆ: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಗರ್ತಿಕೆರೆ ಸಮೀಪದ ಅವುಕ ಸರ್ಕಲ್ ಬಳಿ ನಡೆದಿದೆ.
ಶಿವಮೊಗ್ಗ ಉದ್ಯಮಿಗೆ ಮಹಾರಾಷ್ಟ್ರದಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ, 3 ದಿನ ಕೂಡಿಟ್ಟು 2.17 ಕೋಟಿ ಲೂಟಿ
ಹುಂಚ ಸಮೀಪದ ಶಂಕ್ರಹಳ್ಳಿ ಗ್ರಾಮದ ನಿವಾಸಿ ಭಾಸ್ಕರ್ ಶೆಟ್ಟಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ. ಮಂಗಳವಾರ ರಾತ್ರಿ ಅವರು ತಮ್ಮ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಾಗ ಅವುಕ ಸರ್ಕಲ್ ತಲುಪುತ್ತಿದ್ದಂತೆ ರಸ್ತೆಗೆ ಅಡ್ಡ ಬಂದ ಎಮ್ಮೆಗೆ ಸ್ಕೂಟಿ ರಭಸವಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಸ್ಕೂಟಿ ಪಲ್ಟಿಯಾಗಿದ್ದು, ಭಾಸ್ಕರ್ ಶೆಟ್ಟಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತ ನಡೆದ ತಕ್ಷಣ ಸ್ಥಳೀಯರು ಆಂಬುಲೆನ್ಸ್ಗೆ ಕರೆ ಮಾಡಿದರೂ, ಅದು ಬರುವುದು ವಿಳಂಬವಾಗುವ ಸಾಧ್ಯತೆ ಕಂಡುಬಂದಿತು. ಈ ಸಂದರ್ಭದಲ್ಲಿ ಗರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್ ಗೌಡ ಹಾಗೂ ಅವರ ಸ್ನೇಹಿತರು ತಕ್ಷಣವೇ ಗಾಯಾಳುವನ್ನು ಖಾಸಗಿ ವಾಹನದಲ್ಲಿ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ. ಭಾಸ್ಕರ್ ಶೆಟ್ಟಿ ಅವರಿಗೆ ಮೊದಲು ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Road Accident Scooterist Injured After Hitting Buffalo
