Shivamogga Feb 20, 2024 ತನ್ನ ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪತಿಯೊಬ್ಬ ಮಾರಣಾಂತಿಕವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ನಡೆದಿದೆ
ಇವತ್ತು ಬೆಳಗ್ಗೆ ಈ ಘಟನೆ ನಡೆದಿದೆ. ಇಲ್ಲಿನ ಬೆಳಲಮಕ್ಕಿಯಲ್ಲಿ ಘಟನೆ ನಡೆದಿದೆ. ನೀರಿನ ಘಟಕದಲ್ಲಿ ಗುತ್ತಿಗೆ ಆದರದಲ್ಲಿ ಕೆಲಸ ಮಾಡುತ್ತಿದ್ದ ಯಲಕುಂದ್ಲಿಯ ಯುವಕ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆದಿದೆ.
ತನ್ನ ಪತ್ನಿ ಜೊತೆ ಎದುರು ಮನೆಯಾತ ಮಾತನಾಡುತ್ತಿದ್ದ ಎಂಬ ವಿಚಾರಕ್ಕೆ ಪತಿ ರೊಚ್ಚಿಗೆದ್ದು ಕತ್ತಿ ಹಾಗೂ ರಾಡ್ನಿಂದ ಆತನ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಕಾರಿನ ಗಾಜು ಒಡೆಯುತ್ತಿರುವ ಶಬ್ದ ಕೇಳಿ ಯುವಕ ಮನೆಯಿಂದ ಹೊರಗೆ ಬಂದಿದ್ದಾನೆ.
ಅಲ್ಲದೆ ತನ್ನ ಕಾರಿನ ಗಾಜು ಏಕೆ ಒಡೆಯುತ್ತಿರುವೆ ಎಂದು ಕೋಪದಿಂದ ಹಲ್ಲೆ ಮಾಡುತ್ತಿದ್ದವನ ಬಳಿ ಕೇಳಿದ್ದಾನೆ. ಆಗ ಪತಿರಾಯ ಕತ್ತಿಯಿಂದ ಎದುರುಮನೆಯ ಯುವಕನ ಮೇಲೆ ದಾಳಿ ಮಾಡಿದ್ದಾನೆ. ಬಿಡಿಸಲು ಬಂದ ಆತನ ಸ್ನೇಹಿತನ ಮೇಲೂ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಯುವಕ ಬೆರಳು ಕಟ್ ಆಗಿದ್ದು ಎದೆಭಾಗಕ್ಕೆ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯುವಕನ ಸ್ನೇಹಿತನಿಗೂ ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಪೇಟೆ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.