SHIVAMOGGA | Jan 11, 2024 | 112 ಇಆರ್ವಿ ಸಿಸ್ಟಮ್ ಅಳವಡಿಸಿದ ಬಳಿಕ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಕೆಲಸ ಸಾಮಾನ್ಯರಿಗೆ ತುಸು ಕಡಿಮೆಯಾಗಿದೆ. ಆದಾಗ್ಯು ಸಣ್ಣ ಸಮಸ್ಯೆಗೂ ಪೊಲೀಸರನ್ನ ಆಶ್ರಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೆಲವೊಂದು ಪ್ರಕರಣಗಳು ವಿಶೇಷವಾಗಿ ಕಾಣ ಸಿಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮ್ಮ ಮಗ ಅಪಘಾತ ಮಾಡಿಕೊಂಡು ಬಂದಿದ್ದಾನೆ ಎಂದು ತಂದೆಯೊಬ್ಬರು ಪೊಲೀಸರಿಗೆ ದೂರು ಕೊಟ್ಟ ಪ್ರಸಂಗ ನಡೆದಿತ್ತು.
ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿ ಇನ್ನೊಂದು ಪ್ರಕರಣ ನಡೆದಿದೆ. ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗುತ್ತಿಲ್ಲ ಎಂದು ಪೊಲೀಸ್ 112 ನಂಬರ್ ಗೆ ಕರೆ ಮಾಡಿ ಹೇಳಿದ್ದಾರೆ. ತಮಗೆ ಬಂದ ದೂರನ್ನು ಅಟೆಂಡ್ ಮಾಡುವುದು ಪೊಲೀಸರ ಕರ್ತವ್ಯ. ಹೀಗಾಗಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ವಿದ್ಯಾರ್ಥಿಯನ್ನು ಯಾಕೆ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎಂದು ವಿಚಾರಿಸಿದ್ದಾರೆ.
ಓದು, ಬರಹ, ವಿದ್ಯೆಯ ಮಹತ್ವವನ್ನು ಬಾಲಕನಿಗೆ ಅರಿವಿಗೆ ಬರುವಂತೆ ವಿದ್ಯಾರ್ಥಿಗೆ ತಿಳಿ ಹೇಳಿದ್ದಾರೆ. ಅಷ್ಟರಲ್ಲಿ ಆತನಿಗೆ ಹುಷಾರಿಲ್ಲದೇ ಶಾಲೆಗೆ ಹೋಗಲಾಗಿಲ್ಲ ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ದೂರನ್ನ ಇತ್ಯರ್ಥಗೊಳಿಸಿ ಪೊಲೀಸರು ವಾಪಸ್ ಆಗಿದ್ದಾರೆ.
ಈ ಮಧ್ಯೆ 2 ದಿನಗಳಿಂದ ವಿದ್ಯಾರ್ಥಿ ಶಾಲೆಗೆ ಬರುತ್ತಿಲ್ಲ ಅಂತಾ ಪೊಲೀಸರಿಗೆ ಹೇಳಿದ್ದು ಯಾರು ಎಂಬುದು ಗೊತ್ತಾಗಿಲ್ಲ . ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಿ ನಡೆದಿದ್ದು ಎಂಬುದು ಸಹ ಕೇಳುವ ಹಾಗಿಲ್ಲ. ವಿದ್ಯಾರ್ಥಿ ಶಾಲೆಗೆ ಕಳುಹಿಸಲು ಪೊಲೀಸರು ದೂರಿನ ಮೂಲದವರೆಗೂ ತಲುಪಿ ವಿಚಾರಿಸಿದರಲ್ಲ..ಅದೇ ಇಲ್ಲಿ ವಿಶೇಷ..