SHIVAMOGGA | Dec 29, 2023 | ಪೊಲೀಸರು ಕಳ್ಳರನ್ನ ಹಿಡಿಯುವುದು ಮೂಮೂಲು ಹಾಗೂ ಅನಿವಾರ್ಯದ ಸಂಗತಿ. ಆದರೆ ಜೈಲ್ ಸಿಬ್ಬಂದಿ ಹಾಗೂ ಜೈಲಿನ ಕಾವಲಿಗಿರುವ ಕೆಎಸ್ಐಎಸ್ಎಫ್ ಸಿಬ್ಬಂದಿ ಆರೋಪಿಗಳಿಬ್ಬರನ್ನ ಹಿಡಿದ ಬಗ್ಗೆ ಇದೇ ಮೊದಲ ಸಲ ವರದಿಯಾಗಿದೆ ಅಂದಹಾಗೆ ಈ ಘಟನೆ ನಡೆದಿರೋದು ಶಿವಮೊಗ್ಗ ದ ಸೋಗಾನೆಯಲ್ಲಿ ಇರುವ ಕೇಂದ್ರ ಕಾರಾಗೃಹದಲ್ಲಿ..
ಕೇಂದ್ರ ಕಾರಾಗೃಹ ಶಿವಮೊಗ್ಗ
ಸೆಂಟ್ರಲ್ ಜೈಲ್ನ ಕಾವಲಿಗಾಗಿ ಕೆಎಸ್ಐಎಸ್ಎಫ್ (KSISF) ಸಿಬ್ಬಂದಿಗಳನ್ನ ನೇಮಿಸಲಾಗಿದೆ. ಹಗಲು ರಾತ್ರಿ ಜೈಲ್ನ ಸೇಫ್ಟಿ ಜೊತೆಗೆ ಕಾರಾಗೃಹದೊಳಗೆ ಯಾವುದೇ ಅಕ್ರಮ ವಸ್ತುಗಳು ಹೋಗದಂತೆ ನೋಡುವುದು ಇವರ ಕೆಲಸ. ಈ ಕೆಲಸದ ನಡುವೆಯು ಕೆಲವು ಆರೋಪಿಗಳು ಹೊರಗಡೆಯಿಂದ ಮಾದಕವಸ್ತುಗಳು ಹಾಗೂ ಫೋನ್ ಗಳನ್ನ ಒಳಗೆ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಥೇಟು ಸಿನಿಮಾದಲ್ಲಿ ತೋರಿಸುವ ಹಾಗೆ ಜೈಲ್ ಗೋಡೆಗಳ ಮೂಲಕ ಕಾರಾಗೃಹದ ಒಳಗೆ ಪ್ಯಾಕೆಟ್ ಗಳನ್ನ ಬಿಸಾಡುವ ಮೂಲಕ ಅಕ್ರಮ ವಸ್ತುಗಳನ್ನ ಸಾಗಿಸುವ ಪ್ರಯತ್ನಗಳನ್ನ ದುಷ್ಕರ್ಮಿಗಳು ಮಾಡುತ್ತಿರುತ್ತಾರೆ. ಇಂತಹ ಪ್ರಯತ್ನಗಳ ಮೇಲೆ ಹೆಚ್ಚಿನ ನಿಗಾವಹಿಸುವ ಕಾರಾಗೃಹ ಸಿಬ್ಬಂದಿ ಹಾಗೂ ಕೆಎಸ್ಐಎಸ್ಎಫ್ ಸಿಬ್ಬಂದಿ ಸಿಸಿ ಕ್ಯಾಮರಾದ ರೂಂನಲ್ಲಿ ಪ್ರತಿಯೊಂದನ್ನ ಅಬ್ಸರ್ ಮಾಡುತ್ತಿರುತ್ತಾರೆ.. ಹೀಗೆ ನೋಡುತ್ತಿರುವಾಗ ಇಬ್ಬರು ಯುವಕರು ಜೈಲ್ಗ ಗೋಡೆ ಪಕ್ಕದಲ್ಲಿ ಓಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಕಾಣಿಸಿದೆ. ಆಮೇಲೆ ನಡೆದಿದ್ದು ಅಕ್ಷರಶಃ ಸಹ ಚೇಸಿಂಗ್ …
ದಿನಾಂಕ 27/12/2023 ರಂದು ಸಂಜೆ 4-00 ಗಂಟೆ. ಶಿವಮೊಗ್ಗ, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಪಶ್ಚಿಮ ಗೋಡೆಯ ಸಮೀಪದ ಗೋಡೆಯ ಬಳಿ ಅನುಮಾನಾಸ್ಪದವಾಗಿ ಇಬ್ಬರು ವ್ಯಕ್ತಿಗಳು ನಿಂತಿದ್ದನ್ನು ಕೆಎಸ್ಐಎಸ್ಎಫ್ ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ವಾಕಿಟಾಕಿ ಮೂಲಕ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಿದ್ದಾರೆ. ಮಾಹಿತಿಯನ್ನ ಪಡೆದ ಕೆಎಸ್ಐಎಸ್ಎಫ್ ಎಸ್ಐ ಪುನೀತ್ ಹಾಗೂ ಕೇಂದ್ರ ಕಾರಾಗೃಹದ ಹೆಡ್ ವಾರ್ಡರ್ ಗಜೇಂದ್ರ ಎಸ್ ಆರೋಪಿಗಳನ್ನ ಚಲನವಲನವನ್ನು ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ್ದಾರೆ.
ಆರೋಪಿಗಳ ಮೇಲೆ ಸಂಶಯ ಖಾತರಿಯಾಗುತ್ತಲೇ ಎಸ್ಐ ಪುನೀತ್ ಹಾಗೂ ಮುಖ್ಯ ವೀಕ್ಷಕ ಗಜೇಂದ್ರರವರು ಆರೋಪಿಗಳು ಇರುವ ಕಡೆಗೆ ಓಡಿದ್ದಾರೆ. ಅಲ್ಲದೆ ಜೈಲ್ನ ಹೊರಗೋಡೆಯ ಕಾಂಪೌಂಡ್ನ್ನ ಹಾರಿ ಆರೋಪಿಗಳನ್ನ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಇವರ ಜೊತೆಗೆ ಜೈಲ್ ವಾರ್ಡರ್ ನವೀನ್ ಕುಮಾರ್ ಕೂಡ ಆರೋಪಿಗಳನ್ನ ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಕೈಯಲ್ಲಿದ್ದ ಪ್ಯಾಕೆಟ್ನ್ನ ಬಿಸಾಡಿ ಅಲ್ಲಿಂದ ಆರೋಪಿಗಳು ಸಿದ್ದರಗುಡಿಯ ಕಡೆಗೆ ಓಡಿದ್ದಾರೆ.
ಬಿಟ್ಟರಾಗದು ಎನ್ನುತ್ತಲೇ ಗಜೇಂದ್ರ ಹಾಗೂ ಪುನೀತ್ ಆರೋಪಿಗಳನ್ನ ಬೆನ್ನಟ್ಟಿದ್ದಾರೆ ಸುರಿಸುಮಾರು 2 ಕಿಲೋಮೀಟರ್ ಓಡಿ ಆರೋಪಿಗಳನ್ನ ಹಿಡಿಯಲು ಯತ್ನಿಸಿದ್ದಾರೆ. ಇನ್ನೂ ಇದೇ ವೇಳೇ ಕೆಎಸ್ಐಎಸ್ಎಫ್ ಸಿಬ್ಬಂದಿ ಮರಿದೇವ ಹಾಗೂ ಮೊಹಮ್ಮದ್ ನಾಸೀರ್ ಸಿದ್ದರಗುಡಿಯಿಂದ ಆರೋಪಿಗಳನ್ನ ಅಟ್ಟಿಸಿಕೊಂಡು ಬಂದಿದ್ದಾರೆ. ಅಂತಿಮವಾಗಿ ಆರೋಪಿಗಳನ್ನ ಐವರು ಸಿಬ್ಬಂದಿ ಕವರ್ ಮಾಡಿ ಹಿಡಿದಿದ್ದಾರೆ.
ಇನ್ನೂ ಆರೋಪಿಗಳು ಬಿಸಾಡಿದ್ದ ಪ್ಯಾಕೆಟ್ಗಳನ್ನು ಹುಡುಕಿ ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಹಾಗೂ ಮೊಬೈಲ್ ಪತ್ತೆಯಾಗಿದೆ. ಗಾಂಜಾದ 29 ಪ್ಯಾಕೆಟ್ ಗಳು ಹಾಗೂ ಒಂದು ನೋಕಿಯಾ ಕೀ ಪ್ಯಾಡ್ ಮೊಬೈಲ್ ಫೋನ್, 02 ನೋಕಿಯಾ ಮೊಬೈಲ್ ಚಾರ್ಜರ್, ಒಂದು ಡಾಟಾ ಕೇಬಲ್ ಪತ್ತೆಯಾಗಿದೆ. ಅಕ್ರಮವಾಗಿ ಜೈಲಿನೊಳಗೆ ಇದನ್ನೆಲ್ಲಾ ತಲುಪಿಸಲು ಯೋಜಿಸಿದ್ದ ಇಬ್ಬರು ಆರೋಪಿಗಳು ಅವರು ತಂದಿದ್ದ ಮಾಲಿನ ಸಮೇತ ಜೈಲ್ ಸಿಬ್ಬಂದಿ ಮತ್ತು ಕೆಎಸ್ಐಎಸ್ಎಫ್ ಸಿಬ್ಬಂದಿ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ತುಂಗಾ ನಗರ ಪೊಲೀಸ್ ಸ್ಟೇಷನ್ ಪೊಲೀಸರು NARCOTIC DRUGS & PSYCHOTROPIC SUBSTANCES ACT, 1985 (U/s-20(b)); The Karnataka Prisons (Amendment) Act-2022 (U/s-42) ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.