1-2 ದಿನಗಳಲ್ಲಿ ಶಿಕ್ಷಕರ ನೇಮಕಾತಿ Notification!ಶಿವಮೊಗ್ಗಕ್ಕೆ ಸಿಎಂ! ಮಧು ಬಂಗಾರಪ್ಪ | Shivamogga
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ (Notification) ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸುವವರಿಗೆ ಇತ್ತೀಚಿನ ಪರೀಕ್ಷಾ ಫಲಿತಾಂಶದ ಮೂಲಕ ರಾಜ್ಯದ ವಿದ್ಯಾರ್ಥಿಗಳೇ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಶಿವಮೊಗ್ಗದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ಮಕ್ಕಳು ರಜೆಯ ಮೂಡ್ನಲ್ಲಿದ್ದಾರೆ, ಈ ಸಮಯದಲ್ಲಿ ಕಾರ್ಯಕ್ರಮ ಮಾಡಿದರೆ ಎಲ್ಲರೂ ಬೈಯುತ್ತಾರೆ. ಹೀಗಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ರೂಪಿಸಿ, ಶಿವಮೊಗ್ಗದಿಂದ ಇಡೀ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ರವಾನಿಸುವ ಹೆಮ್ಮೆ ನಮ್ಮದಾಗಲಿದೆ ಎಂದರು.
ಶಿಕ್ಷಕರ ಕೊರತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಇದು ಹಳೆಯ ವಿಚಾರ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಫಲಿತಾಂಶ ಶೇ. 29ರಷ್ಟು ಸುಧಾರಣೆಯಾಗಿದೆ. ಕಲಬುರಗಿ ಕೊನೆಯ ಸ್ಥಾನದಲ್ಲಿದ್ದರೂ ಶೇ. 28ರಷ್ಟು ಏರಿಕೆ ಕಂಡಿದೆ. ಶಿಕ್ಷಕರ ಕೊರತೆ ಇರುವುದು ನಿಜ, ಆದರೆ ಈಗ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇಂದು ಅಥವಾ ನಾಳೆಯೊಳಗೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನೋಟಿಫಿಕೇಶನ್ ಹೊರಡಿಸಲಾಗುವುದು. ಇದು ಪ್ರಕಟವಾದ ತಕ್ಷಣ ರೋಸ್ಟರ್ ಸೇರಿದಂತೆ ಉಳಿದ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಲಿವೆ” ಎಂದು ಭರವಸೆ ನೀಡಿದರು.
ಶಿಕ್ಷಣ ಇಲಾಖೆಯು ಹಿಂದಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವೆಲ್ಲರೂ ನೋಡುತ್ತಿದ್ದೀರಿ. “ಈ ಉತ್ತಮ ರಿಸಲ್ಟ್ ಕೊಟ್ಟಿದ್ದು ನಾನಲ್ಲ, ನಮ್ಮ ಮಕ್ಕಳು ಕೊಟ್ಟಿದ್ದಾರೆ. ಆ ಮಕ್ಕಳಿಗೆ ನನ್ನ ಕಡೆಯಿಂದ ಹ್ಯಾಟ್ಸಾಫ್. ಮಕ್ಕಳ ಭವಿಷ್ಯಕ್ಕಾಗಿ ನನ್ನ ಇಲಾಖೆಯಲ್ಲಿ ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ ಎಂಬುದಕ್ಕೆ, ನನ್ನ ಮೇಲೆ ಟೀಕಾಟಿಪ್ಪಣಿ ಮಾಡುವವರಿಗೆ ಮಕ್ಕಳೇ ತಮ್ಮ ಫಲಿತಾಂಶದ ಮೂಲಕ ನೇರವಾದ ಉತ್ತರವನ್ನು ಕೊಟ್ಟಿದ್ದಾರೆ” ಎಂದು ಮಧು ಬಂಗಾರಪ್ಪ ಹೆಮ್ಮೆಯಿಂದ ನುಡಿದರು.
Madhu Bangarappa, Teacher recruitment Karnataka 2026, GPSTR notification, CM Siddaramaiah Shivamogga visit, Education Minister Karnataka, SSLC results Karnataka, Shivamogga News, Malenadu Today, #MadhuBangarappa #TeacherRecruitment #KarnatakaTeachers #EducationMinister #CMSiddaramaiah #ShivamoggaNews #SSLCResults #KannadaNews #MalenaduToday
