KARNATAKA NEWS/ ONLINE / Malenadu today/ Jun 17, 2023 SHIVAMOGGA NEWS
ಶಿವಮೊಗ್ಗ ಪೊಲೀಸರ ಹಲ್ಲೆಯಿಂದಾಗಿ ಓರ್ವ ವ್ಯಕ್ತಿ ಜೀವ ಕಳೆದುಕೊಂಡನೇ? ಸದ್ಯ ಈ ಪ್ರಶ್ನೆಯೊಂದನ್ನ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ನಲ್ಲಿ ಸಲ್ಲಿಕೆಯಾಗಿರುವ ದೂರು ಕೇಳುತ್ತಿದೆ. ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿಯೇ ಥಳಿಸಿದ್ದಾರೆ ಎನ್ನಲಾಗಿದೆ. ಅದೇ ಘಟನೆಯಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಈ ಸಂಬಂಧ ಮೃತನ ಪತ್ನಿ ದೂರು ನೀಡಿದ್ದು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಹೋಬಳಿಯ ಒಂದು ಗ್ರಾಮದ ನಿವಾಸಿ ಮಂಜುನಾಥ್. ಅವರು ಮೊನ್ನೆ 15 ನೇ ತಾರೀಖು ಮನೆಯ ಹಾಲ್ನಲ್ಲಿದ್ದ ಅಡಿಕೆ ದಬ್ಬೆಗೆ ಸೀರೆ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತ್ನಿ ದೂರು ನೀಡಿದ್ದು ಪೊಲೀಸ್ ಸಿಬ್ಬಂಧಿ ನಡೆಸಿದೆ ಹಲ್ಲೆ ಕಾರಣಕ್ಕೆ ನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಹಲ್ಲೆ ಪ್ರಕರಣ
ಕಳೆದ 11 ನೇ ತಾರೀಖು ಮಂಜುನಾಥ್ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ನಿಂತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ಮಂಜುನಾಥ್ರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬುದು ಆರೋಪ. ಯಾವ ಕಾರಣಕ್ಕೆ ಥಳಿಸಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ, ಕೈ, ಕಾಲು, ಕಪಾಳ, ಬೆನ್ನಿಗೆ ಥಳಿಸಿದ ಸಿಬ್ಬಂದಿ ಆನಂತರ ಮಂಜುನಾಥ್ನನ್ನ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಸಂಜೆ ಹೊತ್ತಿಗೆ ಆತನನ್ನ ಸಹೋದರ ಬಿಡಿಸಿಕೊಂಡು ಮನೆಗೆ ಬಂದಿದ್ದಾರೆ. ಆದರೆ ಈ ಘಟನೆ ನಂತರ ಮಂಜುನಾಥ್ ಖಿನ್ನತೆಗೆ ಜಾರಿದ್ದ, ಯಾರೊಂದಿಗೂ ಮಾತನಾಡದೇ ಮೌನಿಯಾಗಿದ್ದ ಮಂಜುನಾಥ್ 15 ರ ರಾತ್ರಿ ತನ್ನ ಪತ್ನಿಗೆ ಮನೆಮುಂದಿನ ಕೋಣೆಯಲ್ಲಿ ಮಲಗಲು ತಿಳಿಸಿದ್ದಾನೆ. ಆನಂತರ ಹಾಲ್ನಲ್ಲಿ ನೇಣುಬಿಗಿದುಕೊಂಡಿದ್ದಾನೆ. 16 ರ ಬೆಳಗ್ಗೆ ಪತ್ನಿ ಕೋಣೆಯಿಂದ ಹೊರಬಂದಾಗ ವಿಚಾರ ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ಹೊಳೆಹೊನ್ನೂರು ಇನ್ಸ್ಪೆಕ್ಟರ್ಗೆ ದೂರು ಸಲ್ಲಿಕೆಯಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ

ವಿನೋಬನಗರ ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ! ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?
ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸರು ನಿನ್ನೆ ಬೆಂಗಳೂರು ಮೂಲದ ನಟಿಯೊಬ್ಬರನ್ನ ಅರೆಸ್ಟ್ ಮಾಡಿಕೊಂಡು ಶಿವಮೊಗ್ಗಕ್ಕೆ ಕರೆತಂದಿದ್ದರು. ಮೆಗ್ಗಾನ್ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ, ಶಿವಮೊಗ್ಗದ 3ನೇ ಜೆಎಂಎಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಇಷ್ಟಕ್ಕೂ ನಡೆದಿದ್ದೇನೆ ಎಂಬುದನ್ನ ನೋಡುವುದಾದರೆ, ಬೆಂಗಳೂರು ಮೂಲದ ನಟಿ ಕೋರ್ಟ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದು ಅವರ ಬಂಧನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇಷ್ಟಕ್ಕೂ ಏನಿದು ಪ್ರಕರಣ!
ಉಷಾ ರವಿಶಂಕರ್ ಎಂಬವರ ವಿರುದ್ಧ ಶರವಣನ್ ಎಂಬವರು ನಾಲ್ಕು ತಿಂಗಳ ಹಿಂದೆ ವಂಚನೆ ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಿಸದಿದ್ದಾಗ, ಶರವಣನ್ ಶಿವಮೊಗ್ಗ ಕೋರ್ಟ್ನಲ್ಲಿ ಖಾಸಗಿ ಪಿಸಿಆರ್ ಸಲ್ಲಿಸಿದ್ದರು. ಈ ಪಿಸಿಆರ್ ವಿಚಾರಣೆ ವೇಳೆ ಉಷಾರವರಿಗೆ ಹಲವು ಸಮನ್ಸ್ ನೀಡಲಾಗಿತ್ತು. ವಾಟ್ಸ್ಯಾಪ್ ಮೂಲಕವೂ ಸಮನ್ಸ್ ಕಳುಹಿಸಲಾಗಿತ್ತು.
ಆದರೆ ಉಷಾರವರು ಸಮನ್ಸ್ಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿಯಲ್ಲಿ ಕೋರ್ಟ್ ನಾನ್ ಬೇಲಬಲ್ ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು. ಅಂದರೆ, ಶಿವಮೊಗ್ಗ ವಿನೋಬನಗರ ಪೊಲೀಸರಿಗೆ ಉಷಾರನ್ನ ಕೋರ್ಟ್ ಮುಂದೆ ಕರೆತಂದು ನಿಲ್ಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಿಂದ ಉಷಾರನ್ನ ಅರೆಸ್ಟ್ ಮಾಡಿ ಕರೆತಂದು ಮ್ಯಾಜಿಸ್ಟ್ರೇಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ವಂಚನೆ ಆರೋಪದಲ್ಲಿ ಏನಿದೆ?
ದೂರುದಾರ ಶರವಣನ್ ಸಹ ಸಹನಟರಾಗಿದ್ದು, ಉಷಾರ ಜೊತೆ ಸ್ನೇಹ ಬೆಳಸಿದ್ದರು. ಈ ಮಧ್ಯೆ ಮದುವೆ ಮಾತುಕತೆಗಳು ಇಬ್ಬರ ನಡುವೆ ನಡೆದಿದೆ. ಆನಂತರ, ಉಷಾರವರು, ಶರವಣನ್ರಿಂದ ನಿರ್ದಿಷ್ಟ ಮೊತ್ತದ ಹಣ ಪಡೆದಿದ್ದರಂತೆ. ಅದನ್ನ ವಾಪಸ್ ಕೊಡದೇ ವಂಚನೆ ಮಾಡಿದ್ದಾರೆ ಎಂಬುದು ಶರವಣನ್ ಆರೋಪ. 2022 ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಶರವಣನ್ ಪರ ವಕೀಲರು ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಐಪಿಸಿ 417, 418, 419, 420 ಅಡಿಯಲ್ಲಿ ದಾಖಲಾದ ದೂರಿನಲ್ಲಿ, ಕೋರ್ಟ್ ಉಷಾರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ಉಷಾರಿಗೆ ಜಾಮೀನು
ಇನ್ನು ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ನಟಿಯವರನ್ನ ಹಾಜರುಪಡಿಸಿದ ಬೆನ್ನಲ್ಲೆ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ನಟಿಯನ್ನು ಪೊಲೀಸರು ಬಂಧಿಸಿದ್ದರು. ಆನಂತರ ಕೋರ್ಟ್ ನಟಿಯವರಿಗೆ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದೆ.