Water Scarcity ಶಿವಮೊಗ್ಗ : ನಗರದ ಕೆಲವು ವಾರ್ಡ್ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಉಂಟಾಗಿರುವ ತೊಂದರೆಯನ್ನು ನಿವಾರಿಸಲು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸಕ್ರಿಯವಾಗಿ ಕಣಕ್ಕಿಳಿದಿದ್ದಾರೆ. ನೀರಿನ ಸಮಸ್ಯೆಯನ್ನು ಅರಿತು, ಅವರು ಇಂದು ನಗರದ ನ್ಯೂ ಮಂಡ್ಲಿ ವಾಟರ್ ಪಂಪ್ ಹೌಸ್ಗೆ ಖುದ್ದಾಗಿ ಭೇಟಿ ನೀಡಿ ತಾಂತ್ರಿಕ ಅಡಚಣೆಗಳ ಪರಿಶೀಲನೆ ನಡೆಸಿದರು.
ಶಿವಮೊಗ್ಗ : ಬ್ಯಾಂಕ್ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಬೆಣಕಿಗಾಹುತಿ
ಪಂಪ್ ಹೌಸ್ನಲ್ಲಿ ಮೊಕ್ಕಾಂ ಹೂಡಿದ್ದ ಜಲಮಂಡಳಿಯ ಮುಖ್ಯ ಇಂಜಿನಿಯರ್ಗಳು ಹಾಗೂ ತಾಂತ್ರಿಕ ಪರಿಣಿತರಿಂದ ಪ್ರಸ್ತುತ ನಡೆಯುತ್ತಿರುವ ಇಂಜಿನ್ ದುರಸ್ತಿ ಕಾರ್ಯದ ಪ್ರಗತಿ ಹಾಗೂ ಮರುಜೋಡಣೆಯ ಸಂಪೂರ್ಣ ಮಾಹಿತಿಯನ್ನು ಶಾಸಕರು ಪಡೆದುಕೊಂಡರು. ನಗರದ ನಾಗರಿಕರು ಕುಡಿಯುವ ನೀರಿಗಾಗಿ ಪರದಾಡದಂತೆ ಮಾಡಲು ಇಲಾಖೆಯು ಹಗಲಿರುಳು ಯುದ್ಧೋಪಾದಿಯಲ್ಲಿ ಶ್ರಮಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದ ಅವರು, ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಮೂಲದಿಂದಲೇ ಕಿತ್ತೊಗೆದು ಎಂದಿನಂತೆ ನಿರಂತರ ಹಾಗೂ ವ್ಯವಸ್ಥಿತವಾಗಿ ನೀರು ಪೂರೈಸಲು ಗಡುವು ವಿಧಿಸಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಚನ್ನಬಸಪ್ಪ ಅವರು, ನಗರದ ಜನತೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಪೈಪ್ಲೈನ್ ದುರಸ್ತಿ ಮುಗಿಯುವವರೆಗೆ ಟ್ಯಾಂಕರ್ ಸೇರಿದಂತೆ ಪರ್ಯಾಯ ತುರ್ತು ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಉಂಟಾಗಿರುವ ಈ ತಾತ್ಕಾಲಿಕ ತೊಂದರೆಯನ್ನು ಜಲಮಂಡಳಿಯು ಶೀಘ್ರದಲ್ಲೇ ಯಶಸ್ವಿಯಾಗಿ ಬಗೆಹರಿಸಲಿದ್ದು, ಅಲ್ಲಿಯವರೆಗೆ ನಾಗರಿಕರು ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕು ಎಂದರು.
ಈ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು, ಜಲ ಮಂಡಳಿಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.