Shivamogga ಶಿವಮೊಗ್ಗ: ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ರಸ್ತೆಯಲ್ಲೇ ಹುಡುಗ ಮತ್ತು ಹುಡುಗಿ ನಡುವೆ ದೊಡ್ಡ ಮಟ್ಟದ ಜಗಳ ನಡೆದಿದ್ದು, ಸಾರ್ವಜನಿಕರು 112 ಪೊಲೀಸರಿಗೆ ದೂರು ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮದುವೆ ನಿಶ್ಚಯವಾಗಿದ್ದ ಹುಡುಗ ಹಾಗೂ ಹುಡುಗಿ ಇಬ್ಬರೂ ಜೊತೆಯಾಗಿ ಊಟ ತರಲು ಹೊರಗಡೆ ಬಂದಿದ್ದರು. ಆದರೆ, ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ಬೈಕ್ನ ಪೆಟ್ರೋಲ್ ಖಾಲಿಯಾಗಿದೆ. ಈ ಸಣ್ಣ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ಹೋಗಿದೆ.
ರಸ್ತೆಯಲ್ಲೇ ಇಬ್ಬರೂ ಜೋರಾಗಿ ಗಲಾಟೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು, ತಕ್ಷಣವೇ 112 ತುರ್ತು ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಇಆರ್ವಿ (ERV) ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಜಗಳ ನಿಲ್ಲಿಸಿ ವಿಚಾರಣೆ ನಡೆಸಿದಾಗ ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಗಲಾಟೆ ನಡೆದಿರುವುದು ಬೆಳಕಿಗೆ ಬಂದಿದೆ. ತದನಂತರ ಇಬ್ಬರಿಗೂ ಬುದ್ಧಿವಾದ ಹೇಳಿದ ಪೊಲೀಸರು, ಅವರವರ ಮನೆಗೆ ಕಳುಹಿಸಿದ್ದಾರೆ.