sharavati backwater / ಇವತ್ತೇನೋ ಚೂರು ಮಳೆ ಮೋಡ ಆಗಿದೆ. ಅಲ್ಲಲ್ಲಿ ಜೋಳಕ್ಕಾಗುವಷ್ಟು ಮಳೆಯಾಗಿದೆ. ಆದರೆ ಅಂದಾಜಿನ ಮಳೆಯಾಗಿಲ್ಲ. ವಾಡಿಕೆಯ ವರ್ಷಧಾರೆಯ ಸುಳಿವೆ ಇಲ್ಲ. ಇಷ್ಟೊತ್ತಿಗೆ ಒಂದ್ ನಾಲ್ಕ್ ದೊಡ್ಡ ಮಳೆಯಾಗಿ ತುಂಗಾಡ್ಯಾಮ್ ತುಂಬ್ತು ತುಂಬ್ತು ಅಂತಾ ಜನ ಮಾತನಾಡಿಕೊಳ್ಳಬೇಕಿತ್ತು. ಅದ್ಯಾವುದು ಕಾಣುತ್ತಿಲ್ಲ. ಅದರಲ್ಲಿಯು ಶರಾವತಿ ಕೊಳ್ಳದಲ್ಲಿ ಹಿನ್ನೀರು ತಳಕ್ಕೆ ಸರಿದು, ತಲೆಮಾರಿನ ಹಿಂದೆ ಮುಳುಗಿದ್ದ ನಾಡಿನ ಅವಶೇಷಗಳು ಕಾಣ ತೊಡಗಿದೆ.

ನೀರಲ್ಲಿ ಮುಳುಗಿದ್ದ ಮರಗಳು ಇನ್ನೂ ಅಸ್ತಿತ್ವ ಸಾರುತ್ತಿರುವ ರೀತಿಯಲ್ಲಿ ಹೊಳೆ ನೀರಿನಿಂದ ಮೇಲೆದ್ದು ತೋರುತ್ತಿವೆ. ಅಷ್ಟೆ ಏಕೆ, ದೇಶವನ್ನೆ ತನ್ನತ್ತ ಸೆಳೆದುಕೊಂಡ ಶರಾವತಿ ಸಿಗಂದೂರು ಸೇತುವೆಯ ಪಿಲ್ಲರ್ಗಳು ಸಾಪ್ ಸಪಾಟಾಗಿ ಕಣ್ಣಿಗೆ ಬೀಳುತ್ತಿವೆ. ಲಾಂಚ್ನ ಏರಿ, ನದಿಗೆ ಮಧ್ಯಕ್ಕಿಳಿದ ಲಾಂಚು, ಒಡೆದ ಮಣ್ಣಿನ ಹೆಂಟೆ, ಈ ಸಲ ಬರದ ಸೂಚನೆಯನ್ನ ನೀಡುತ್ತಿವೆ. ಸಾಮಾನ್ಯವಾಗಿ ಜೂನ್ ಮೊದಲ ಅಥವಾ ಎರಡನೇ ವಾರದಿಂದಲೇ ಶರಾವತಿ ನದಿಯ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿತ್ತು.

ಅದರಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳಹರಿವು ವೇಗವಾಗಿ ಏರಿಕೆಯಾಗುತ್ತಿತ್ತು. ಆದರೆ ಈ ಸಲ ಹಾಗಾಗಿಲ್ಲ. ಸೆಂಟಿಮೀಟರ್ ಲೆಕ್ಕದಲ್ಲಿ ಆಗುತ್ತಿದ್ದ ಮಳೆ ಮಿಲೀಮೀಟರ್ನ ಲೆಕ್ಕವನ್ನು ಪೂರ್ಣ ಮಾಡುತ್ತಿಲ್ಲ. ಹಾಗಾಗಿ ಹಿನ್ನೀರಿನ ಅನೇಕ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಸಾಮಾನ್ಯವಾಗಿ ನೀರಿನಿಂದ ಆವೃತವಾಗಿರುವ ಭೂಭಾಗಗಳು ಬಯಲಾಗಿವೆ.

ವಿಶೇಷವಾಗಿ ಶರಾವತಿ ಹಿನ್ನೀರಿನ ತೀರ ಪ್ರದೇಶಗಳಲ್ಲಿ ಕೆಂಪು ಮಣ್ಣು, ಕಲ್ಲುಬಂಡೆಗಳು ಹಾಗೂ ಹುಲ್ಲುಗಾವಲುಗಳು ಗೋಚರಿಸುತ್ತಿರುವ ದೃಶ್ಯ ಸ್ಥಳೀಯರ ಗಮನ ಸೆಳೆಯುತ್ತಿದೆ. ಬಂದು ಹೋಗುವ ಪ್ರವಾಸಿಗರಿಗೆ ನೀರಿದ್ದರೂ, ಇರದೆ ಇದ್ದರೂ ಇದೊಂದು ಪ್ರಕೃತಿಯ ಚಿತ್ತಾರವೇ ಆದರೂ ಇಲ್ಲಿನ ಮನಸ್ಸುಗಳಿಗೆ ಹಿನ್ನೀರು ಇಳಿದ ಶರಾವತಿಯು ಸಾವಿರಾರು ಕಥೆಗಳನ್ನ ಹೇಳುತ್ತವೆ.

ನಮ್ಮವರು ತಮ್ಮವರು ಎದ್ದು ಬಂದು, ಮನೆ ಮನವ ತಟ್ಟಿ, ಕಣ್ತೇವವಾಗಿಸಿ ಹೋದಂತಹ ಅನುಭವಕ್ಕೆ ಇಲ್ಲಿ ಎಂದಿಗೂ ಬರಗಾಲವಿಲ್ಲ. ಆ ನೆನಪುಗಳು ಬೇಡವೇ ಬೇಡ, ಮಳೆ ಬಂದು ಶರಾವತಿ ಒಡಲು ತುಂಬಿ ಹಳೆಯ ಗಾಯಗಳೆಲ್ಲವೂ ನೀರೋಡಲ ಸೇರಲಿ, ನಾಡು ಸಮೃದ್ಧವಾಗಿದ್ದರೇ ನಮಗಷ್ಟೆ ಸಾಕು ಎನ್ನುತ್ತವೆ ಇಲ್ಲಿನ ಹಿರಿಜೀವಗಳು ಈ ಶರಾವತಿಯನ್ನು ನಂಬಿಕೊಂಡೆ ಲಿಂಗನಮಕ್ಕಿ ಜಲಾಶಯವು ಕೆಲಸ ಮಾಡುತ್ತದೆ.
ಜೋಗ ಜಲಪಾತಕ್ಕೆ ನೀರಿಲ್ಲ/ ಲಿಂಗನಮಕ್ಕಿಯಲ್ಲಿ ಕರೆಂಟ್ ಸಿಗಲ್ಲ!
ಎಷ್ಟೆ ಅಡ್ವಾನ್ಸ್ ಟೆಕ್ನಾಲಿಜಿಯಲ್ಲಿ ಕರೆಂಟ್ ತೆಗೆದರೂ, ಲಿಂಗನಮಕ್ಕಿಯಲ್ಲಿ ಸಿಗುವಷ್ಟು ಸಸ್ತಾ ಹಾಗೂ ಸುಲಭದ ವಿದ್ಯುತ್ ನಾಡಿಗೆಲ್ಲೂ ಸಿಗುವುದಿಲ್ಲ. 1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಈ ಜಲಾಶಯವೇ ಬತ್ತುವ ಹಂತಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬಾರದ ಮಳೆಯಿಂದಾಗಿ ಡ್ಯಾಮ್ ತುಂಬುವುದೇ ಕಷ್ಟ ಎನ್ನುದಾದರೆ, ಈ ಸಲ ಜೋಗಕ್ಕೂ ನೀರಿನ ಅಭಾವ ಗ್ಯಾರಂಟಿ.. ಮುಂಗಾರಿನ ಅಭಿಷೇಕದಲ್ಲಿ ಮಂಜಿನಾವಿಯ ಹೊದ್ದು ಬರ್ ಎನ್ನುವ ಸದ್ದು ಕಾರ್ಗಲ್ಲ ಮೇಲೆ ಹಾರುವ ಶರಾವತಿಯ ಯಕ್ಷ ನರ್ತನಕ್ಕೆ ವರುಣನ ಕೃಪಾಕಟಾಕ್ಷ ಬೇಕಿದೆ. ಏನೋ ಇವತ್ತು ಮಳೆ ಚೂರು ಹೊಯ್ಯುತ್ತಿದೆ. ಆ ನಿರೀಕ್ಷೆಯಲ್ಲಿಯೇ ಶರಾವತಿಯ ಒಡಲು ಸಹ ಇದೆ.

ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
