ಜಿ+7 ಮಾದರಿಯಲ್ಲಿ 1200 ಮನೆಗಳ ಅಪಾರ್ಟ್ಮೆಂಟ್! 5 ಕೋಟಿ ವೆಚ್ಚದಲ್ಲಿ ಸಿಟಿ ತುಂಬಾ ಸಿಸಿ ಕ್ಯಾಮರಾ! ಇನ್ನಷ್ಟಿದೆ ಸೂಡಾ ಪ್ಲಾನ್​

SUDA Announces / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ ಸಿಟಿಯನ್ನು ಇನ್ನಷ್ಟು ಸುಂದರವಾಗಿಸುವ ಪ್ಲಾನ್ ಮಾಡಿಕೊಂಡಿದೆ. ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸೂಡಾ ಅ‍ಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಜಿ+7 ಮಾದರಿಯಲ್ಲಿ 1200 ಮನೆಗಳ ಅಪಾರ್ಟ್ಮೆಂಟ್! 5 ಕೋಟಿ ವೆಚ್ಚದಲ್ಲಿ ಸಿಟಿ ತುಂಬಾ ಸಿಸಿ ಕ್ಯಾಮರಾ ಸೇರಿದಂತೆ ಸೂಡಾ ಪ್ಲಾನ್ಗಳನ್ನು ವಿವರಿಸಿರದರು.

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಪ್ರಮುಖಾಂಶ

ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಮಾಹಿತಿ ನೀಡಿ ಮಾತನಾಡಿದ ಹೆಚ್.ಎಸ್.ಸುಂದರೇಶ್‌ ಮುಂದಿನ ಮೂರ್ನಾಲ್ಕು ದಶಕಗಳ ನಗರದ ಜನದಟ್ಟಣೆ, ಸಂಚಾರ, ಜನಸಂಖ್ಯಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ನಗರಗಳನ್ನು ಮಾದರಿಯಾಗಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಶಿವಮೊಗ್ಗ-ಭದ್ರಾವತಿ ನಗರಗಳನ್ನು ಅಭಿವೃಧ್ಧಿಪಡಿಸಬಹುದಾದ ಸಾಧ್ಯತೆಗಳ ಕುರಿತು ಪರಿಣಿತರಿಂದ ಆಕರ್ಷಕ ವಿನ್ಯಾಸಗಳನ್ನು ತಯಾರಿಸಿ, ಸ್ಥಳೀಯ ಜನರಿಗೆ ಅನುಕೂಲವಾಗಬಹುದಾದ ವಿನ್ಯಾಸಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ. ಅವರು ತಿಳಿಸಿರುವ ಪ್ಲಾನ್ ಈ ರೀತಿಯಿದೆ.

  • ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯಕ್ರಮದ ಭಾಗವಾಗಿ ಸೂಡಾದ (SUDA Announces) ವತಿಯಿಂದ ಆರಂಬಿಕವಾಗಿ 1ಕೋಟಿ ರೂ.ಗಳನ್ನು ಅರಣ್ಯ ಇಲಾಖೆಗೆ ನೀಡಲಿದೆ. ಅಲ್ಲದೇ ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಮೂರು ವರ್ಷಗಳ ಅವಧಿಗೆ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಲು ಒಡಂಬಡಿಕೆ ಮಾಡಿಕೊಳ್ಳಲಿದೆ. ಈ ಒಡಂಬಡಿಕೆ ಅನ್ವಯ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟು ಪೋಷಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ
  • ನಗರದೊಳಗಿನ ಹಲವು ಕೆರೆಗಳ ಅಭಿವೃದ್ಧಿಗೆ ಸೂಡಾ ಗಮನಹರಿಸಿದ್ದು, ಈಗಾಗಲೇ 15 ಕೆರೆಗಳನ್ನು ಗುರುತಿಸಲಾಗಿದ್ದು, ಹಲವು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಈ ಕೆರೆಗಳ ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದಲ್ಲಿ ರಕ್ಷಣಾ ಬೇಲಿ ನಿರ್ಮಿಸುವುದರೊಂದಿಗೆ ಕೆರೆಗಳ ನವ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು
  • ನಗರದ ಪ್ರಮುಖ ವರ್ತುಲಗಳಲ್ಲಿ ಸ್ಕೈವಾಕ್‌, ಎಸ್ಕಲೇಟರ್‌ಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ತಂತ್ರಜ್ಞರನ್ನು ಆಹ್ವಾನಿಸಿ, ಅವರ ಸೂಕ್ತ ಸಲಹೆ ಸಹಕಾರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸೂಡಾದಿಂದ 15ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ
  • ನಗರದ ವರ್ತುಲಗಳಲ್ಲಿ ಮಹಾನ್‌ ಆದರ್ಶವಾದಿಗಳ, ದೇಶೋದ್ದಾರಕರ ಪುತ್ಥಳಿಗಳನ್ನು ನಿರ್ಮಿಸಿ, ಸುತ್ತಲೂ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ವರ್ತುಲಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಇರಬಹುದಾದ ಪರ್ಯಾಯ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಿದ್ದು, ಅದಕ್ಕಾಗಿ 08ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.
  • ಜನನಿಬಿಡ ರಸ್ತೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ ಕೊಡುವಂತೆ ಪೊಲೀಸ್‌ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಕ್ಯಾಮರಾಗಳ ಅಳವಡಿಕೆಗಾಗಿ 5.00ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ
  • ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಜಿ+7 ಮಾದರಿಯಲ್ಲಿ 1200ಮನೆಗಳ ವಸತಿ ಸಮುಚ್ಛಯ ನಿರ್ಮಾಣಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಂತರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಗೋಪಿಶೆಟ್ಟಿಕೊಪ್ಪದಲ್ಲಿ 104ಎಕರೆ ಭೂಮಿಯನ್ನು ರೈತರು ಹಸ್ತಾಂತರಿಸಲು ಆಸಕ್ತಿ ತೋರಿದ್ದರು. ಅದರಲ್ಲಿ 32ಎಕರೆ ಜಮೀನಿನ ಮಾಲೀಕರು. ಶೇ.50:50ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಸದರಿ ಬಡಾವಣೆ ನಿರ್ಮಾಣ ಆರಂಭವಾಗಲಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾನಗರಪಾಲಿಕೆ, ಕೃಷಿ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ನಗರದ ಪ್ರಮುಖ ಇಲಾಖೆಗಳ ಜಿಲ್ಲಾ ಮಟ್ದದ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅವರ ಅಮೂಲ್ಯ ಸಲಹೆ-ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ಬಿ.ಆರ್.ಮಂಜುನಾಥ್‌, ಪ್ರವೀಣ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz