ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಾದ್ಯಂತ ಪ್ರತ್ಯೇಕ ಘಟನೆಗಳಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಭದ್ರಾವತಿ, ಸಾಗರ ಹಾಗೂ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪ ಈ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ದಿಢೀರ್ ಕುಸಿದು ಬಿದ್ದು ವಿದ್ಯಾರ್ಥಿ ಸಾವು
ಶಿವಮೊಗ್ಗ ತಾಲೂಕಿನ ಆಯನೂರು ಬಳಿಯ ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ವಿನಯ್ ಜೆ ಕೆ ಶಾಲೆಯಲ್ಲಿಯೇ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಸಂಜೆ ಶಾಲೆಯಲ್ಲಿ ತನ್ನ ಸಹಪಾಠಿಗಳು ಚೆಸ್ ಆಟವಾಡುತ್ತಿರುವುದನ್ನು ನೋಡುತ್ತಾ ನಿಂತಿದ್ದ ವಿನಯ್ ಏಕಾಏಕಿ ನೆಲಕ್ಕೆ ಉರುಳಿದ್ದಾನೆ.
ತಕ್ಷಣವೇ ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಆತನ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲು ಶಿಕ್ಷಕರು ಮುಂದಾಗಿದ್ದಾರೆ. ಅಷ್ಟರಲ್ಲಿ ಮಾರ್ಗಮಧ್ಯೆ ವಿನಯ್ ಸಾವನ್ನಪ್ಪಿದ್ದ. ಸದ್ಯ ವಿದ್ಯಾರ್ಥಿಯ ಮೃತದೇಹವನ್ನ ಮೆಗ್ಗಾನ್ ಶವಾಗಾರದಲ್ಲಿ ಇರಿಸಲಾಗಿದೆ. ಮೂಲತಃ ಶಿಕಾರಿಪುರದವನಾದ ವಿನಯ್, ತಮ್ಮಡಿಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿಯೇ ಇದ್ದುಕೊಂಡು ಓದುತ್ತಿದ್ದ.
ವಿದ್ಯಾರ್ಥಿ ಸಾವಿಗೆ ಶರಣು
ಇನ್ನೊಂದೆಡೆ ಸಾಗರ ನಗರದ ಶ್ರೀಧರ ನಗರದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನು ನಗರದ ಸಿದ್ದೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ್. ಕೆಲ ದಿನಗಳ ಹಿಂದೆ ನಲ್ಲಿ ನೀರು ಹಿಡಿಯಲು ಹೋಗಿದ್ದಾಗ ಜಾರಿಬಿದ್ದಿದ್ದ ಆಕಾಶ್ನ ಸೊಂಟಕ್ಕೆ ಹೆಚ್ಚು ಪೆಟ್ಟು ಬಿದ್ದಿತ್ತು. ಅಂದಿನಿಂದ ನರಳಾಡುತ್ತಿದ್ದ ಆತ, ಹೀಗೆ ಮಾಡಿಕೊಂಡಿದ್ದಾನೆ. ಮಂಗಳವಾರದಿಂದ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿದ್ದ ಆಕಾಶ್ ನಿನ್ನೆ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿದ್ಯಾರ್ಥಿನಿ ಸಾವು
ಭದ್ರಾವತಿಯ ಮಾಚೇನಹಳ್ಳಿಯಲ್ಲಿರುವ ಕಿವುಡ ಮತ್ತು ಮೂಗರ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ಅಕ್ಷರ ಎಂಬ ವಿದ್ಯಾರ್ಥಿನಿ ಸಹ ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಶಿಕಾರಿಪುರ ಹಾಗೂ ಆನಂದಪುರ ನಡುವಿನ ಅಣ್ಣಪ್ಪನಹಟ್ಟಿ ಗ್ರಾಮದ ನಿವಾಸಿಯಾಗಿದ್ದ ಈಕೆಯನ್ನು ಕಳೆದ ಶುಕ್ರವಾರವಷ್ಟೇ ವಸತಿ ಶಾಲೆಗೆ ದಾಖಲಿಸಲಾಗಿತ್ತು. ಏಕಾಏಕಿ ತಲೆತಿರುಗಿದಂತಾಗಿ ಕುಸಿದುಬಿದ್ದ ವಿದ್ಯಾರ್ಥಿನಿಗೆ ಶಾಲಾ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
