ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಬಿಜೆಪಿ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷನ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಕಳೆದ ಭಾನುವಾರ ನಡೆದಿರುವ ಘಟನೆ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಘಟನೆಯ ಸಂಬಂಧ ಪೊಲೀಸರು ಬಿಜೆಪಿ ಮುಖಂಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮೂಲದ 38 ವರ್ಷದ ಮಂಜುಳಾ ಮೃತಪಟ್ಟವರು. ಪತಿಯ ಕಿರುಕುಳದಿಂದ ಮಂಜುಳಾ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.
ಮಂಜುಳಾ ಸೊರಬ ಪಟ್ಟಣದ ಕಾನುಕೇರಿಯಲ್ಲಿ ವಾಸವಿರುವ, ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿ ಅವರೊಂದಿಗೆ ಕಳೆದ 2024ರಲ್ಲಿ ಮದುವೆಯಾಗಿದ್ದರು. ಪ್ರಭು ಮೇಸ್ತ್ರಿ ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದರು. ಘಟನೆ ಸಂಬಂಧ ಮೃತ ಮಹಿಳೆಯ ತಾಯಿ ನೀಡಿರುವ ದೂರಿನನ್ವಯ, ಪ್ರಭು ಮೇಸ್ತ್ರಿಯವರಿಗೆ ಮಹಿಳೆಯೊಬ್ಬರ ಜೊತೆ ಒಡನಾಟವಿದ್ದು, ಈ ಬಗ್ಗೆ ಸಂಬಂಧಿಕರು ಹಾಗೂ ಹಿರಿಯರು ರಾಜಿ ಪಂಚಾಯ್ತಿ ನಡೆಸಿದ್ದರು ಎನ್ನಲಾಗಿದೆ. ಆದರೆ ಅನ್ಯ ಮಹಿಳೆಯ ಒಡನಾಟ ಬಿಡದ ಪ್ರಭು ಮೇಸ್ತ್ರಿ, ಪತ್ನಿಗೆ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ.
ಇನ್ನೂ ಮಲೆನಾಡು ಟುಡೆ ಈ ಪ್ರಕರಣದ ಸಂಬಂಧ ಎಸ್ಪಿ ನಿಖಿಲ್ ಬಿ ವರನ್ನ ಸಂಪರ್ಕಿಸಿದೆ. ನಮ್ಮೊಂದಿಗೆ ಮಾತನಾಡಿದ ಎಸ್ಪಿ ನಿಖಿಲ್ ಬಿ, ಕಳೆದ ಭಾನುವಾರ ನಡೆದ ಘಟನೆ ಇದಾಗಿದ್ದು, ಮೃತರ ತಾಯಿಯವರು ನೀಡಿದ ದೂರಿನನ್ವಯ ಕೇಸ್ ದಾಖಲಿಸಲಾಗಿದ್ದು, ಪ್ರಭು ಮೇಸ್ತ್ರಿಯವರನ್ನ ಬಂಧಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆಯನ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಕೊಲೆ ಆಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸೊರಬ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿತ ಪ್ರಭುಮೇಸ್ತ್ರಿ ಸೊರಬದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಮುಖಂಡರಾಗಿದ್ದಾರೆ. ಗುತ್ತಿಗೆದಾರರಾಗಿದ್ದ ಇವರು, ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಬದಲಾದಾಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇನ್ನೂ ಪ್ರಭು ಮೇಸ್ತ್ರಿ ಅವರಿಗೆ ಇದು ಎರಡನೆ ವಿವಾಹವಾಗಿತ್ತು. ಇದಕ್ಕೂ ಮೊದಲು ಕೇರಳ ಮೂಲದ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು ಎನ್ನಲಾಗಿದೆ.
Whatsapp : https://chat.whatsapp.com/JrsZ8He4nN600n0r3tJItz

