ಬೆಳಗಿನ ಶಿವಮೊಗ್ಗ ಸುದ್ದಿ ಮಲೆನಾಡು ಶಿವಮೊಗ್ಗದಲ್ಲಿ ನಡೆದ ಘಟನೆಗಳು, ತಿಳಿದುಕೊಳ್ಳಬೇಕಾದ ಮಾಹಿತಿ, ನಡೆದ ಹಾಗೂ ನಡೆಯುವ ಕಾರ್ಯಕ್ರಮಗಳು ಸೇರಿದಂಥೆ ಜಿಲ್ಲೆಯ ವಿವಿಧ ಆಗು ಹೋಗುಗಳನ್ನು ಒಂದೇ ಸುದ್ದಿಯಲ್ಲಿ ಓದುಗನ ವೇಗಕ್ಕೆ ಅನುಗುಣವಾಗಿ ನೀಡುವ ಕಾಲಂ ಇದು.. ಈ ಕ್ಷಣದ ಶಿವಮೊಗ್ಗದ ಅಪ್ಡೇಟ್ಸ್ ನೀವಿಲ್ಲಿ ಓದಬಹುದು!
ಬೆಳಗಿನ ಶಿವಮೊಗ್ಗ ಸುದ್ದಿ : ಮಹಿಳೆಗೆ ಕಿರುಕುಳ ಹಾಗೂ ಜೀವ ಬೆದರಿಕೆ
ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಆಟೋ ಚಾಲಕರೊಬ್ಬರ ಮೇಲೆ ಸ್ಟೇಷನ್ ಒಂದರಲ್ಲಿ ಕಂಪ್ಲೆಂಟ್ ಆಗಿದ್ದು ಎಫ್ಐಆರ್ ಆಗಿದೆ. ಸಂತ್ರಸ್ತೆಗೆ 18 ವರ್ಷದ ಹಿಂದೆಯ ಮದುವೆಯಾಗಿದ್ದು, ಮೊದಲನೇ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ಮಧ್ಯೆ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯಿಂದ ಪರಿಚಿತ ಆಟೋ ಚಾಲಕನೊಬ್ಬ ಮಹಿಳೆಯಿಂದ ಸುಮಾರು 40 ಸಾವಿರ ರೂಪಾಯಿ ಪಡೆದು ವಂಚಿಸಿದ್ದಾನೆ. ಅಲ್ಲದೆ ಮದುವೆಯಾಗು ಎಂದಿದ್ದಕ್ಕೆ ಮಕ್ಕಳನ್ನು ಬಿಟ್ಟು ಬಾ ಎಂದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಮನೆಯ ಬಳಿ ಬಂದು ಹಲ್ಲೆ ಮಾಡಿದ್ದಾಕೆ ಕೇಸ್ನಲ್ಲಿ ಉಲ್ಲೇಖಿಸಲಾಗಿದೆ.
ಬೆಳಗಿನ ಶಿವಮೊಗ್ಗ ಸುದ್ದಿ : ಆನೆ ಜೊತೆ ಕಿರಿಕ್ ಪಾರ್ಟಿ
ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್ಟಿ) ಸಮೀಪದಲ್ಲಿ ಕಾಡಾನೆಯೊಂದನ್ನು ಜೀಪ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ಕೆರಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 50 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ, ತೆರೆದ ಜೀಪಿನಲ್ಲಿರುವ ಚಾಲಕನೊಬ್ಬ ಕಾಡಾನೆಯತ್ತ ಬೆರಳು ತೋರಿಸುತ್ತಾ ವಾಹನವನ್ನು ಅದರ ತೀರಾ ಸಮೀಪಕ್ಕೆ ಕೊಂಡೊಯ್ಯುತ್ತಾನೆ. ಆನೆಯು ವಾಹನದತ್ತ ದಾಳಿ ಮಾಡಲು ಓಡಿಬರುತ್ತಿದ್ದಂತೆ ಚಾಲಕ ವೇಗವಾಗಿ ವಾಹನವನ್ನು ಹಿಂದಕ್ಕೆ (ರಿವರ್ಸ್) ಚಲಾಯಿಸಿಕೊಂಡು ಹೋಗುತ್ತಾನೆ. ಬಳಿಕ ಮತ್ತೆ ವಾಹನವನ್ನು ತಿರುಗಿಸಿ ಅದೇ ಆನೆಯ ಸಮೀಪಕ್ಕೆ ಬರುತ್ತಾನೆ. ಮತ್ತೊಮ್ಮೆ ಆನೆ ಜೀಪ್ ಅನ್ನು ಹಿಮ್ಮೆಟ್ಟಿಸುವ ದೃಶ್ಯ ವಿಡಿಯೋದಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಗಮನಿಸಿದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ತಕ್ಷಣವೇ ವಾಹನ ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ಘಟನೆಯು ಸೋಮವಾರ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪುನೀತ್ ಮೀನಾ ಅವರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿರುವ ವಾಹನ ಚಾಲಕನನ್ನು ಈಗಾಗಲೇ ಗುರುತಿಸಲಾಗಿದೆ . ಈ ವಾಹನವು ಭದ್ರಾ ಸಂರಕ್ಷಿತ ಪ್ರದೇಶದ ಯಾವುದೇ ಅಧಿಕೃತ ಪ್ರವೇಶ ದ್ವಾರದಿಂದ ಅರಣ್ಯದೊಳಗೆ ಪ್ರವೇಶಿಸಿಲ್ಲ . ಘಟನೆಯ ಕುರಿತು ಕೊಪ್ಪ ವಿಭಾಗದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಹೆಚ್ಚಿನ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು
ಪುನೀತ್ ಮೀನಾ , ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್)
ಭದ್ರಾವತಿಯಲ್ಲಿ ಪೋಷಕರಿಂದ ಸಾರ್ಥಕ ಕಾರ್ಯ
ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಇತ್ತ ಭದ್ರಾವತಿಯಲ್ಲಿ 23 ವರ್ಷದ ಯುವತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು, ಅವರ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ ಭಾನುವಾರ ಕೀರ್ತನಾ ಕೆ. ಎಂಬ ಯುವತಿ ಕೊನೆಯುಸಿರೆಳೆದಿದ್ದರು. ಅವರು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಅವರ ದೇಹದ ಅಂಗಾಂಗಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನವಾಗಿ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೇ ವೃತ್ತಿ ಮಾಡುತ್ತಿದ್ದ ಕಾರಣ ಅಂಗಾಂಗ ದಾನದ ಮಹತ್ವವನ್ನು ಅರಿತಿದ್ದ ಯುವತಿಯು, ಈ ಹಿಂದೆಯೇ ತನ್ನ ಇಚ್ಛೆಯನ್ನು ಪೋಷಕರ ಬಳಿ ಹಂಚಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೀರ್ತನಾ ಅವರ ತಂದೆ ಕುಮಾರ್ ವಿ. ಅವರು, ತಮ್ಮ ಮಗಳು, ಸಾವಿನ ನಂತರ ತನ್ನ ಅಂಗಾಂಗಗಳನ್ನು ದಾನ ಮಾಡುವ ಇಂಗಿತವನ್ನು ಆಕೆ ಹಲವು ಬಾರಿ ತಮ್ಮ ಬಳಿ ವ್ಯಕ್ತಪಡಿಸಿದ್ದಳು . ಆಕೆಯ ಆಸೆಯಂತೆಯೇ ಅಂಗಾಂಗ ದಾನ ಮಾಡಿರುವುದಾಗಿ ತಿಳಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
