ಶಿವಮೊಗ್ಗ : ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯಲ್ಲಿ 2022ರಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ನ್ಯಾಯಾಲಯವು ಅವರಿಗೆ ಕಠಿಣ ಕಾರಾವಾಸ ವಿಧಿಸಿ ತೀರ್ಪು ನೀಡಿದೆ.
ಮನೆಯೆದುರು ಮಹಿಳೆಗೆ ಉಪಟಳ; ಥಟ್ ಅಂತಾ ಪ್ರತ್ಯಕ್ಷವಾದ ಅಕ್ಕ ಪಡೆ !ಶಿವಮೊಗ್ಗದಲ್ಲಿ ನಡೆದ ಘಟನೆ
ಘಟನೆಯ ಹಿನ್ನೆಲೆ
2022ರ ಮಾರ್ಚ್ 20ರಂದು ರಾತ್ರಿ, ಮಂಜುನಾಥ ಬಡಾವಣೆಯ ಮಹಾನಗರ ಪಾಲಿಕೆಯ ಖಾಲಿ ಜಾಗದಲ್ಲಿ ಬಾಬು ಕಿರಣ್ ಎಂಬುವವರು ತಾವು ಕೆಲಸ ಮಾಡಿದ ಹಣವನ್ನು ಪಡೆದು ಮನೆಗೆ ಮರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದ ಬೆನ್ನಿಗೆ ಚೂರಿಯಿಂದ ಚುಚ್ಚಿ, ಮೈಕೈಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರು. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ನಿವೃತ್ತ ಪಿಎಸ್ಐ ತಿಮ್ಮಪ್ಪ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು, ಆರೋಪಿಗಳಾದ ಸಂತೋಷ್ @ ಸಂತು (27), ಶರತ್ (24) ಮತ್ತು ಪ್ರಶಾಂತ್ ಎಂ (24) ಇವರುಗಳು ಮಾಡಿರುವ ಅಪರಾಧ ದೃಢಪಟ್ಟಿದೆ ಎಂದು ಘೋಷಿಸಿದರು.
ಅಪರಾಧಿಗಳಿಗೆ 5 ವರ್ಷಗಳ ಕಠಿಣ ಕಾರಾವಾಸ ಮತ್ತು ತಲಾ 12,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
Shivamogga Court Sentences 3 Youths to 5 Years Prison


