Shivamogga ಶಿವಮೊಗ್ಗ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಹಾಗೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಗದ್ದೇಲಿ ಹಕ್ಕಿ ಓಡಿಸೋಕೆ ರೈತ ಮಾಡಿದ ಸೂಪರ್ ಪ್ಲಾನ್; ಆದ್ರೆ ಸೀದಾ ಪೊಲೀಸರಿಗೆ ಫೋನ್ ಮಾಡಿದ ಸ್ಥಳೀಯರು! ಏನಿದು ಕಥೆ?
ಎನ್.ಎಸ್.ಯು.ಐ. ಸಂಘಟನೆ ನೇತೃತ್ವದಲ್ಲಿ ನಡೆದ ಈ ಬೃಹತ್ ಜನಜಾಗೃತಿ ಸಭೆಯಲ್ಲಿ ಸಾವಿರಾರು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ವಿವಾದಿತ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ರಾಜ್ಯಗಳಿಗೆ ತಮ್ಮದೇ ಆದ ಸಿಇಟಿ (CET) ಪರೀಕ್ಷೆ ನಡೆಸಿ ವೈದ್ಯಕೀಯ ಪ್ರವೇಶ ನೀಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸೂಕ್ತ ತನಿಖೆ ನಡೆಸಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಹಗರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಾವಿಗೆ ತಕ್ಷಣವೇ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾದ್ಯಕ್ಷ . ಪ್ರಸನ್ನ ಕುಮಾರ್ ಅವರು ಮಾತನಾಡಿ, ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇಲ್ಲಿಯವರೆಗೂ ಅವರು ರಾಜೀನಾಮೆ ನೀಡದೆ ಈ ಗಂಭೀರ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಮತ್ತು ಯಾವುದೇ ಸ್ಪಷ್ಟನೆ ನೀಡಲು ಸಿದ್ಧರಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನಮಗೆ ನೀಟ್ ಪರೀಕ್ಷೆ ಬೇಡವೇ ಬೇಡ, ಸಿಇಟಿ ಮಾದರಿಯಲ್ಲೇ ಪರೀಕ್ಷೆ ನಡೆಸಿ ನಮ್ಮ ರಾಜ್ಯದ ಮಕ್ಕಳಿಗೆ ನಮ್ಮಲ್ಲೇ ಇರುವ ವೈದ್ಯಕೀಯ ಸೀಟುಗಳು ಸಿಗುವಂತಾಗಬೇಕು ಎಂದು ಅವರು ಸ್ಪಷ್ಟಪಡಿಸಿದರು. ಪಿಯುಸಿ ಮುಗಿಸಿ ವೈದ್ಯರಾಗುವ ಕನಸು ಹೊತ್ತು ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಕಾಳಜಿ ವ್ಯಕ್ತಪಡಿಸಿದ ಅವರು, ನೀಟ್ ಪರೀಕ್ಷೆಯನ್ನು ಕೆಲವು ತರಬೇತಿ ಸಂಸ್ಥೆಗಳಿಗೆ ಮಾರಾಟ ಮಾಡುವ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಆ ಸಂಸ್ಥೆಗಳ ಮಕ್ಕಳಿಗೆ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆ ಸಿಗುವುದರಿಂದ ಅವರು ಸುಲಭವಾಗಿ ಪರೀಕ್ಷೆ ಬರೆಯುತ್ತಾರೆ, ಆದರೆ ಹಗಲಿರುಳು ಕಷ್ಟಪಟ್ಟು ಓದಿದ ನಮ್ಮ ಮಕ್ಕಳಿಗೆ ಸೂಕ್ತ ಅಂಕಗಳು ಸಿಗದೆ ಅನ್ಯಾಯವಾಗುತ್ತಿದೆ ಎಂದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಸಹ ಸಿಇಟಿ ಪರೀಕ್ಷೆಯನ್ನೇ ಪ್ರತಿಪಾದಿಸಿದ್ದರು ಎಂಬುದನ್ನು ನೆನಪಿಸಿದ ಅವರು, ನಮ್ಮ ಈ ಹೋರಾಟದ ಕೂಗು ದೆಹಲಿಯವರೆಗೂ ಮುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ನ ಹಲವಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.





