SHIVAMOGGA NEWS TODAY

ಶಿವಮೊಗ್ಗ: ಮಡಿಕೆಯಲ್ಲಿ 3 ಕೆಜಿ ಚಿನ್ನ ಸಿಕ್ಕಿದೆ ಎಂದು ನಂಬಿದ ಮ್ಯಾನೇಜರ್ ಕಳೆದುಕೊಂಡಿದ್ದೆಷ್ಟು?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga ಶಿವಮೊಗ್ಗ : ನಾನು ಹಿಂದೆ ನಿಮ್ಮ ಕಂಪನಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದೆ, ಪ್ರಸ್ತುತ ನನಗೆ ತುರ್ತು ಹಣದ ಅವಶ್ಯಕತೆ ಇದೆ ಎಂದು ನಂಬಿಸಿ, ನಕಲಿ ಚಿನ್ನಾಭರಣಗಳನ್ನು ಕೊಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ?  

Shimoga ಘಟನೆ ವಿವರ

ದೂರುದಾರರು ಶಿವಮೊಗ್ಗದ ಖಾಸಗಿ ಬಸ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಪರಿಚಿತ ಫೋನ್ ಕರೆಯೊಂದು ಬಂದಿದ್ದು, ಕರೆ ಮಾಡಿದ ಆರೋಪಿಯು ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ನಾನು ಹಿಂದೆ ಇದೇ ಟ್ರಾವೆಲ್ಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿ ಮ್ಯಾನೇಜರ್ ಅವರಲ್ಲಿ ನಂಬಿಕೆ ಹುಟ್ಟಿಸಿದ್ದಾನೆ. ನಂತರ ಆತ ತನಗೆ ಮಡಿಕೆಯಲ್ಲಿ ಚಿನ್ನ ಸಿಕ್ಕಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ.

ಆರೋಪಿಯು ತಾನು ಪ್ರಸ್ತುತ ವಿಜಯವಾಡದಲ್ಲಿ ಟೆಲಿಫೋನ್ ಕೇಬಲ್ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಅಲ್ಲಿ ಕೆಲಸದ ನಿಮಿತ್ತ ಗುಂಡಿ ಅಗೆಯುತ್ತಿದ್ದಾಗ ತನಗೆ ಮಡಿಕೆಯೊಂದರಲ್ಲಿ ಸುಮಾರು 3 ಕೆಜಿ ತೂಕದ ಚಿನ್ನದ ಸರಗಳು ಸಿಕ್ಕಿವೆ ಎಂದು ನಂಬಿಸಿದ್ದಾನೆ. ಪ್ರಸ್ತುತ ತನಗೆ ಹಣದ ತುರ್ತು ಇರುವುದರಿಂದ ಆ ಚಿನ್ನವನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡುವುದಾಗಿ ಮ್ಯಾನೇಜರ್‌ಗೆ ಆಮಿಷ ಒಡ್ಡಿದ್ದಾನೆ. ಇದನ್ನು ನಿಜವೆಂದು ನಂಬಿದ ದೂರುದಾರರು ಚಿನ್ನವನ್ನು ನೋಡಲು ಒಪ್ಪಿದ್ದಾರೆ. 

ಇದಾದ ಬಳಿಕ, ಶಿವಮೊಗ್ಗದ ಹಳೇ ಮಂಡ್ಲಿಯ ಖಾಲಿ ಜಾಗವೊಂದರಲ್ಲಿ ಆರೋಪಿಗಳು ಮ್ಯಾನೇಜರ್‌ಗೆ 2 ಗ್ರಾಂ ಚಿನ್ನದ ಮಣಿಗಳನ್ನು ಸ್ಯಾಂಪಲ್ ಆಗಿ ನೀಡಿದ್ದಾರೆ. ಅದನ್ನು ಪರೀಕ್ಷಿಸಿದಾಗ ಅದು ಶೇ. 92 ರಷ್ಟು ಶುದ್ಧ ಇರುವುದು ದೃಢಪಟ್ಟಿದೆ. ನಂತರ ಫಿರ್ಯಾದುದಾರರು ತಮ್ಮ ಬಳಿ ಸದ್ಯಕ್ಕೆ 10 ಲಕ್ಷ ರೂಪಾಯಿ ಮಾತ್ರ ಇರುವುದಾಗಿ ತಿಳಿಸಿದಾಗ, ಅಷ್ಟಕ್ಕೇ 1.5 ಕೆಜಿ ಚಿನ್ನ ಕೊಡುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. 

ಹಣ ಹೊಂದಿಸಲು ಮುಂದಾದ ದೂರುದಾರರು  ಹಾಗೂ ಅವರ ಸ್ನೇಹಿತ ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟು 10 ಲಕ್ಷ ರೂಪಾಯಿ ನಗದು ಹೊಂದಿಸಿಕೊಂಡಿದ್ದಾರೆ. ಹಳೇ ಮಂಡ್ಲಿಯ ಅದೇ ಖಾಲಿ ಜಾಗದಲ್ಲಿ ದೂರುದಾರರು ಮತ್ತು ಅವರ ಸ್ನೇಹಿತರು 10 ಲಕ್ಷ ರೂಪಾಯಿ ಹಣವನ್ನು ಆರೋಪಿ  ಹಾಗೂ ಆತನ ಇಬ್ಬರು ಸಹಚರರಿಗೆ ನೀಡಿದ್ದಾರೆ. ಹಣ ಪಡೆದ ಆರೋಪಿಗಳು, ನೀಲಿ ಬಣ್ಣದ ಚೀಲದಲ್ಲಿದ್ದ ಚಿನ್ನದ ಬಣ್ಣದ ಒಡವೆಗಳನ್ನು ಮ್ಯಾನೇಜರ್ ಕೈಗಿಟ್ಟು, ಇಲ್ಲಿಂದ ತಕ್ಷಣವೇ ಬೇಗ ಹೋಗುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದಾರೆ. ತದನಂತರ ಆ ಒಡವೆಗಳನ್ನು ತಂದು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅವು ನಕಲಿ ಬಂಗಾರ ಎಂಬ ಸತ್ಯ ಬೆಳಕಿಗೆ ಬಂದಿದೆ.

ತಕ್ಷಣವೇ ಎಚ್ಚೆತ್ತ ದೂರುದಾರರು ಆರೋಪಿಯ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದಾಗ ಅವು ಸ್ವಿಚ್ ಆಫ್ ಆಗಿದ್ದವು. ಅಸಲಿ ಬಂಗಾರ ನೀಡುವುದಾಗಿ ನಂಬಿಸಿ 10 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೊಂದ ಮ್ಯಾನೇಜರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Shimoga Manager Duped of 10 Lakh in Gold Scam

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.