ಮೀನು, ಕೋಳಿಫಾರಂ, ಭೂಮಿ , ಮರಳು ಮದ್ಯಂಗಡಿ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ನೀಡಿದ್ರು ಆರು ಸೂಚನೆ! ಡಿಸಿ ಮೀಟಿಂಗ್​ ನಲ್ಲಿ ಆದ ತೀರ್ಮಾನವೇನು?

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡಲು ಅನುಮತಿ ಪಡೆದಿರುವ ಗುತ್ತಿಗೆದಾರ ಸಂಸ್ಥೆಗಳಲ್ಲಿ, ಕೆಲಸಕ್ಕಾಗಿ ನೇಮಕವಾಗುವ ಅಭ್ಯರ್ಥಿಗಳಿಂದ ಭಾರೀ ಪ್ರಮಾಣದ ಹಣ ವಸೂಲು ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.  ಅಲ್ಲದೆ ಅವರಿಗೆ ನೀಡಲಾಗುತ್ತಿರುವ ಸಮವಸ್ತ್ರಗಳ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಮಾಣ ದೂರುಗಳು  ಕೇಳಿಬಂದಿದೆ. ಈ  ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಅಂತಹ ಸಂಸ್ಥೆಗಳನ್ನು ಪರಿಶೀಲಿಸಿ, ತಪ್ಪಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿನ್ನೆ ಡಿಸಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಹತ್ವದ ಸೂಚನೆಗಳನ್ನು ಅವರು ನೀಡಿದರು. 

ಮಾನವ ಸಂಪನ್ಮೂಲವನ್ನು ಸರಬರಾಜು ಸಂಸ್ಥೆಗಳಿಗೆ ವಾರ್ನಿಂಗ್

ಕೆಲವು ಸಂಸ್ಥೆಗಳು ಪ್ರತಿ ವ್ಯಕ್ತಿಯಿಂದ ರೂ.2,000/-, ಸಮವಸ್ತ್ರದ ಬಾಬ್ತು ರೂ.4,000/- ಹಾಗೂ ಸಿಮ್ಸ್‍ನಲ್ಲಿ ನೇಮಕವಾಗುವ ವ್ಯಕ್ತಿ ಲಕ್ಷಾಂತರ ರೂ.ಗಳನ್ನು ಪಡೆದಿರುವ ಬಗ್ಗೆ ದೂರುಗಳಿದ್ದು, ಅವುಗಳಿಗೆ ಸೂಕ್ತ ಕೈಗೊಳ್ಳುವಂತೆ ಸೂಚಿಸಲಾದೆ ಎಂದರು.

ಮರುಳು ಕ್ವಾರಿ ಅಕ್ರಮಕ್ಕೂ ಎಚ್ಚರಿಕೆ 

ಮರಳು ಕ್ವಾರಿಗಳ ನಿರ್ವಾಹಕರು ಪ್ರತಿ ಮಾಹೆ ಕ್ವಾರಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಚಿತ್ರಿತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕಳೆದ ಆರು ತಿಂಗಳುಗಳ ಸಿಸಿ. ಕ್ಯಾಮರಾಗಳ ಚಿತ್ರಿತ ಮಾಹಿತಿ ಒದಗಿಸದಿರುವ ಕ್ವಾರಿಗಳ ಗುತ್ತಿಗೆದಾರರಿಗೆ ನೋಟೀಸ್ ಜಾರಿಗೊಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ ಸೂಚಿಸಿದರು.

ಮೀನಿನ ಮರಿಗಳ ರಕ್ಷಣೆಗೆ ಕ್ರಮ 

ಮಳೆಯ ಕೊರತೆಯಿಂದ ಶರಾವತಿ ಮತ್ತು ಭದ್ರಾ ಜಲಾಶಯಗಳ ಹಿನ್ನೀರಿನಲ್ಲಿ ಮೀನುಮರಿಗಳನ್ನು ಅವ್ಯಾಹತವಾಗಿ ಹಿಡಿಯಲಾಗುತ್ತಿದ್ದು, ಮೀನುಗಳ ಸಂತತಿ ನಾಶಗೊಳ್ಳುವ ಸಂಭವವಿದೆ. ಮೀನುಮರಿಗಳ ಸಂತಾನೋತ್ಪತ್ತಿಯ ಕಾಲ ಇದಾಗಿರುವುದರಿಂದ ಮೀನು ಹಿಡಿಯದಂತೆ ಕ್ರಮ ವಹಿಸಲು ಮೀನುಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

112 ವಾಹನ ಡಿಕ್ಕಿ ಪಾದಚಾರಿ ಸಾವು! ಸಾಗರ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದ್ದೇನು?

ವಿವಿ ಮುಂಭಾಗದಲ್ಲಿ ಮದ್ಯದಂಗಡಿ ತೆರವಿಗೆ ಕ್ರಮ 

ಇನ್ನೂ ಇದೇ ವೇಳೆ  ಕುವೆಂಪು ವಿವಿ ಮುಂಭಾಗದಲ್ಲಿ ಮದ್ಯದಂಗಡಿ ಆರಂಭಗೊಂಡಿರುವ ಬಗ್ಗೆ ಕೇಳಿ ಬಂದ ಕಂಪ್ಲೆಂಟ್​ಗೆ ಪ್ರತಿಕ್ರಿಯಿಸಿದ ಡಿಸಿ ಅಬಕಾರಿ ಇನ್ಸ್‍ಪೆಕ್ಟರ್‍ರವರು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವವನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನೂ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಭೂಮಿ ಕಬಳಿಸಿದವರ ವಿರುದ್ದ ಕ್ರಮ

ನಗರದ ವಿದ್ಯಾನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಜುಲೈ 15ರೊಳಗಾಗಿ ವಾಸ್ತವ ಗಮನಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ಕೋಳಿ ಫಾರಂಗಳ ಬಗ್ಗೆ ವರದಿ ಕೊಡಿ

ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೋಳಿ ಫಾರಂಗಳು ನಿರ್ಮಾಣವಾಗಿದ್ದು, ಇಲ್ಲಿನ ಜನಸಮುದಾಯಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಬಗ್ಗೆ ಆಕ್ಷೇಪವಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೇಗಿದೆ ನೋಡಿದ್ರಾ ಕಿಚ್ಛಾ ಸುದೀಪ್​ ರ ಹೊಸ ಸಿನಿಮಾ ಟೀಸರ್​!

 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಸಮಿತಿ ಸದಸ್ಯರಾದ ನಾಗರಾಜ್, ಹಸೂಡಿ ಜಗದೀಶ್, ರಾಜ್‍ಕುಮಾರ್, ಬಸವರಾಜ ಹಸ್ವಿ, ಏಳುಕೋಟಿ, ರಾಮಚಂದ್ರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


 

 

Leave a Comment