Gerusoppa Rani Chennabhairadevi / ಮಲೆನಾಡು ಟುಡೆ / ಶಿವಮೊಗ್ಗ / ಗೇರುಸೊಪ್ಪೆಯ ಜೈನ ರಾಣಿ ಚೆನ್ನಬೈರಾದೇವಿಯ ಇತಿಹಾಸ ಸಿನಿವಾಗುತ್ತಿದೆ. ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನ ಡೈರಕ್ಟ್ ಮಾಡಲಿದ್ದಾರೆ. ಬಿಗ್ ಪ್ರೊಡಕ್ಷನ್ ಹೌಸ್ ಈ ಸಿನಿಮಾವನ್ನು ನಿರ್ಮಿಸಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗೆಡೆಯವರ ಆರ್ಶೀವಾದದೊಂದಿಗೆ ಚಿತ್ರ ತಯಾರಲಾಗಿದೆ. ಆದರೆ ನಮ್ಮಲ್ಲಿಯೇ ಗೇರುಸೊಪ್ಪದ ಚೆನ್ನಾಬೈರಾದೇವಿಯಾರು? ಆಕೆಗೇಕೆ ಕಾಳು ಮೆಣಸಿನ ರಾಣಿ ಎಂದು ಕರೆಯಲಾಗುತ್ತಿತ್ತು. ಆಕೆಯ ಬದುಕಿನ ವಿಶೇಷತೆಗಳೇನು ಎಂಬಿತ್ಯಾದಿ ವಿಚಾರಗಳು ಗೊತ್ತಿಲ್ಲ. ಈ ಬಗ್ಗೆ ನಮ್ಮ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಹಿರಿಯ ಬರಹಗಾರರು ಅರುಣ್ ಪ್ರಸಾದ್ ತಮ್ಮ ಫೇಸ್ಬುಕ್ನಲ್ಲಿ ಜೈನರಾಣಿಯ ಇತಿಹಾಸ ಹಾಗೂ ಆಕೆಯ ಬಗ್ಗೆ ಸಿನಿಮಾವಾಗುತ್ತಿರುವ ವಿಚಾರವನ್ನು ವಿವರಿಸಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.
Gerusoppa Rani Chennabhairadevi / ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಇತಿಹಾಸದಿಂದ ಬೆಳ್ಳಿಪರದೆಗೆ
ಗೇರುಸೊಪ್ಪೆಯ ಜೈನ ರಾಣಿ ಚೆನ್ನಬೈರಾದೇವಿ ಆಡಳಿತಾವಧಿ ಕ್ರಿ.ಶ. 1552 ರಿಂದ 1606. ಗೇರುಸೊಪ್ಪೆ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಕಾಳುಮೆಣಸನ್ನು (Black Pepper) ಬೆಳೆಯಲಾಗುತ್ತಿತ್ತು. ಇದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಾಣಿ ಚೆನ್ನಬೈರಾದೇವಿ ರಫ್ತು ಮಾಡುತ್ತಿದ್ದಾಗ ಆ ಕಾಳು ಮೆಣಸಿನ ವ್ಯಾಪಾರದ ಮೇಲಿನ ಅವರ ಏಕಸ್ವಾಮ್ಯ ಮತ್ತು ನಿಯಂತ್ರಣವನ್ನು ನೋಡಿ ಬ್ರಿಟಿಷರು ಮತ್ತು ಪೋರ್ಚುಗೀಸರು ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿಯವರಿಗೆ (Gerusoppa Rani Chennabhairadevi) ಗೌರವದಿಂದ ರೈನಾ ಡಿ ಪಿಮೆಂಟಾ (Raina de Pimenta) ಅಂದರೆ “ಕಾಳು ಮೆಣಸಿನ ರಾಣಿ” ಎಂದು ಬಿರುದು ನೀಡಿ ಕರೆದರು.
ಶರಾವತಿ ನದಿ ದಂಡೆಯ ಜೈನ ರಾಣಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ರಾಜ್ಯವನ್ನ ವರದಾ ನದಿ ದಂಡೆಯ ಕೆಳದಿ ರಾಜ ವೆಂಕಟಪ್ಪನಾಯಕ ವಶಪಡಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ರಾಣಿ ಚೆನ್ನಬೈರಾದೇವಿಯನ್ನು ಆನಂದಪುರಂ ಕೋಟೆಯಲ್ಲಿ ಬಂಧಿಸಿಡುತ್ತಾರೆ. ನಂತರ ಸಾಗರದ ಇಕ್ಕೇರಿ ಕೋಟೆಯಲ್ಲಿ ಬಂಧನ ಮುಂದುವರಿಸುತ್ತಾರೆ. ಆದರೆ ರಾಣಿ ಚೆನ್ನಬೈರಾದೇವಿ ತನ್ನ ಜೈನ ಧರ್ಮದ ಸಲ್ಲೇಖನ ವ್ರತ ಕೈಗೊಂಡು ಜಿನೈಕ್ಯಳಾಗುತ್ತಾರೆ.
ಇವರ ಸಮಾಧಿ ಸಮೀಪದ ಆವಿನಹಳ್ಳಿಯಲ್ಲಿ ಮಾಡಿದ್ದಾರೆ. ಅಲ್ಲಿ ನಿಷಧಿ ಶಾಸ್ತ್ರದ ಪ್ರಕಾರ ಜೈನ ಸಮಾಧಿ ಮಂದಿರವನ್ನು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ಸಮಕಾಲೀನ ರಾಣಿಗೆ ಗೌರವಪೂರ್ವಕವಾಗಿ ನಿರ್ಮಿಸಿದ್ದಾರೆ. ಖ್ಯಾತ ಇತಿಹಾಸಕಾರ ಕರ್ನಲ್ ಕಾಲಿನ್ ಮೆಕೆಂಜಿ 1806 ರಲ್ಲಿ ಅಂದರೆ ರಾಣಿ ಸಮಾಧಿಯಾಗಿ 200 ವರ್ಷದ ನಂತರ ಆವಿನಹಳ್ಳಿಗೆ ಭೇಟಿ ನೀಡಿ ಈ ನಿಷಧಿ ಸಮಾಧಿ ಮಂದಿರ ದಾಖಲಿಸಿದ್ದಾರೆ. ಆ ನಂತರ ಅಂದರೆ 215 ವರ್ಷಗಳ ನಂತರ ಶಿವಮೊಗ್ಗದ ಇತಿಹಾಸ ಸಂಶೋಧಕ ದೀಪಕ್ ನಾಡಿಗ್ ಕರ್ನಲ್ ಕಾಲಿನ್ ಮೆಕೆಂಜಿ ದಾಖಲಿಸಿದ ಮಾರ್ಗದಲ್ಲೇ ಸಂಶೋಧನೆ ಮಾಡಿ ಸಂಚರಿಸಿ ಆವಿನಹಳ್ಳಿಯ ರಾಣಿ ಚೆನ್ನಬೈರಾದೇವಿ ಸಮಾಧಿ ಸ್ಥಳ ತಲುಪಿದ್ದನ್ನ ದಾಖಲಿಸಿದ್ದಾರೆ.
ಕಾಲಾಂತರದಲ್ಲಿ ಸ್ಥಳೀಯರು ಈ ಜೈನ ರಾಣಿ ಸಮಾಧಿ ಸ್ಥಳವನ್ನ ಈಶ್ವರ ದೇವಾಲಯವಾಗಿ ಪರಿವರ್ತಿಸಿಕೊಂಡು ಪೂಜಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕವಾಗಿ ಮಾಡಬೇಕು ಮತ್ತು ಸ್ಥಳೀಯರಿಗೆ ಪ್ರತ್ಯೇಕ ದೇವಾಲಯವನ್ನ ಜೈನ ಧರ್ಮದ ಹೊಂಬುಜ ಮಠ, ಕಾರ್ಕಳದ ಸಾವಿರ ಬಸದಿ ಜೈನ ಮಠ, ಶ್ರವಣಬೆಳಗೋಳದ ಜೈನ ಮಠ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರ್ಮಿಸಿ ಕೊಡಲು ಮುಂದೆ ಬರಬೇಕಾಗಿದೆ.
ಬೆಳ್ಳಿಪರದೆಗೆ ‘ರಾಣಿ ಚೆನ್ನಭೈರಾದೇವಿ’: ಬಿಗ್ ಬಜೆಟ್ ಸಿನಿಮಾ ಘೋಷಣೆ
ಈ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಗೊತ್ತಾ? ದೊಡ್ಡ ಬಜೆಟ್ ಸಿನಿಮಾಗೆ ಯಾರು ಯಾರು ಹಣ ಹಾಕಲಿದ್ದಾರೆ? ಖ್ಯಾತ ನಿರ್ದೇಶಕ ಬಂಧನ ಸಿನಿಮಾ ಖ್ಯಾತಿಯ ರಾಜೇಂದ್ರ ಸಿಂಗ್ ಬಾಬು ಅವರು ಈಗ ‘ರಾಣಿ ಚೆನ್ನಭೈರಾದೇವಿ’ ಚಲನಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಎ.ಆರ್. ಪ್ರೊಡಕ್ಷನ್ಸ್ ಬಾಬಾಸ್ ಬ್ಲೆಸ್ಸಿಂಗ್ಸ್ (A R Productions Baba’s Blessing’s) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದೇ ಬ್ಯಾನರಡಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಕರಾವಳಿ ಸಂಸ್ಕೃತಿಯ ಚಿತ್ರವಾದ ವೀರ ಕಂಬಳ ಸಿನಿಮಾ ನಿರ್ದೇಶಿಸಿದ್ದರು. ಈಗ ಮೆಣಸಿನ ರಾಣಿ ಚೆನ್ನಭೈರಾದೇವಿ ಕಥೆಯನ್ನು ಅದ್ದೂರಿ ವೆಚ್ಚದಲ್ಲಿ ದೊಡ್ಡ ಪರದೆಗೆ ತರಲು ಈ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ.
ಈ ಸಿನಿಮಾದ ಚಿತ್ರಕಥೆಯನ್ನು ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ಹಂಪನಾ ನಾಗರಾಜಯ್ಯ ಮತ್ತು ಸಾಗರ ತಾಲೂಕಿನವರೇ ಆದ ಇತಿಹಾಸ ಸಂಶೋಧಕ ಲೋಕರಾಜ್ ಜೈನ್ ಅವರ ಕಥೆಯನ್ನು ಆಧರಿಸಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತಯಾರಿಸಿದ್ದಾರೆ. (ಈ ಮೊದಲು ಈ ಸಿನಿಮಾ ಡಾ. ಗಜಾನನ ಶರ್ಮ ಅವರ ‘ರಾಣಿ ಚೆನ್ನಬೈರಾದೇವಿ’ ಕಾದಂಬರಿ ಆಧಾರಿತ ಎಂದು ಸುದ್ದಿಯಾಗಿತ್ತು. ಆದರೆ ಸ್ವತಃ ಸಾಗರದ ಲೋಕರಾಜ್ ಜೈನ್ ಅವರು ಚಿತ್ರಕಥೆಯ ಪುಸ್ತಕದ ಫೋಟೋವನ್ನು ಒದಗಿಸುವ ಮೂಲಕ ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ). ಈ ಚಿತ್ರಕ್ಕೆ ಹಣ ಹೂಡಲು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಆಸಕ್ತಿ ತೋರಿಸುತ್ತಿದ್ದಾರೆ.
ಚಿತ್ರರಂಗದ ಮೂಲಗಳು ಮತ್ತು ಲಭ್ಯವಿರುವ ಮಾಹಿತಿಯ ಪ್ರಕಾರ ಈ ಚಿತ್ರ ಭಾರಿ ವೆಚ್ಚದ ಐತಿಹಾಸಿಕ ಸಿನಿಮಾ ಆಗಲಿದೆ. ಇದು 16ನೇ ಶತಮಾನದ ಗೇರುಸೊಪ್ಪೆಯ ವೈಭವ, ಪೋರ್ಚುಗೀಸರ ವಿರುದ್ಧದ ನೌಕಾ ಮತ್ತು ಭೂ ಯುದ್ಧಗಳು ಹಾಗೂ ಅರಮನೆಯ ಸೆಟ್ಗಳನ್ನು ಮರುಸೃಷ್ಟಿಸಬೇಕಾದ ಕಥೆಯಾಗಿದೆ. ಹಾಗಾಗಿ ಇದು ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಬಜೆಟ್ನ ಚಿತ್ರಗಳಲ್ಲಿ ಒಂದಾಗಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ಭಾರಿ ಬಂಡವಾಳದ ಅಗತ್ಯವಿರುವುದರಿಂದ ದೊಡ್ಡ ಪ್ರೊಡಕ್ಷನ್ ಹೌಸ್ಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಜಂಟಿಯಾಗಿ ಹಣ ಹೂಡಲು ಮಾತುಕತೆ ನಡೆಸುತ್ತಿವೆ. ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಸಂಪೂರ್ಣವಾಗಿ ಮುಗಿದು, ತಾರಾಗಣ ಮುಖ್ಯವಾಗಿ ರಮ್ಯಾ ಅವರ ಆಯ್ಕೆ ಅಂತಿಮಗೊಂಡು ಚಿತ್ರೀಕರಣದ ಮುಹೂರ್ತ ನಿಗದಿಯಾದಾಗ ನಿರ್ಮಾಪಕರು ಅಧಿಕೃತ ಬಜೆಟ್ ಮೊತ್ತವನ್ನು ಪ್ರಕಟಿಸುವ ಸಾಧ್ಯತೆ ಇದೆ.
ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ‘ರಾಣಿ ಚೆನ್ನಭೈರಾದೇವಿ’ ಅಥವಾ ‘ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ’ ಎಂಬ ಹೆಸರನ್ನು ‘ಎ ಆರ್ ಪ್ರೊಡಕ್ಷನ್ಸ್’ ಸಂಸ್ಥೆಯು ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧಿಕೃತವಾಗಿ ಕಾಯ್ದಿರಿಸಿದೆ ಎಂದು ವರದಿಯಾಗಿದೆ.
ನಿರ್ಮಾಣ ಸಂಸ್ಥೆ ಮತ್ತು
ನಿರ್ಮಾಪಕರ ಹಿನ್ನೆಲೆ
‘ರಾಣಿ ಚೆನ್ನಭೈರಾದೇವಿ’ ಸಿನಿಮಾವನ್ನು ನಿರ್ಮಿಸುತ್ತಿರುವ ಎ ಆರ್ ಪ್ರೊಡಕ್ಷನ್ಸ್ ಬಾಬಾಸ್ ಬ್ಲೆಸ್ಸಿಂಗ್ಸ್ ಸಂಸ್ಥೆಯ ಮುಖ್ಯ ಮಾಲೀಕರು ಮತ್ತು ನಿರ್ಮಾಪಕರು ಅರುಣ್ ರೈ ತೋಡಾರ್ ಮತ್ತು ಡಾ. ವಿನಿತಾ ವಿಜಯಕುಮಾರ್ ರೆಡ್ಡಿ. ಈ ಇಬ್ಬರು ಪ್ರಮುಖ ನಿರ್ಮಾಪಕರು ಈ ಸಂಸ್ಥೆಯ ಅಡಿಯಲ್ಲಿ ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದಾರೆ.
ಇತ್ತೀಚೆಗೆ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲೇ ಕರಾವಳಿಯ ಜಾನಪದ ಕ್ರೀಡೆಯನ್ನು ಆಧಾರವಾಗಿಟ್ಟುಕೊಂಡು ‘ವೀರ ಕಂಬಳ’ ಸಿನಿಮಾವನ್ನು ಕೂಡ ಇದೇ ಸಂಸ್ಥೆ ಅದ್ದೂರಿಯಾಗಿ ನಿರ್ಮಿಸಿದ್ದರು. ಆ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಅದೇ ಉತ್ಸಾಹದಲ್ಲಿ ಈಗ ರಾಣಿ ಚೆನ್ನಭೈರಾದೇವಿ ಅವರ ಐತಿಹಾಸಿಕ ಕಥೆಯನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಈ ಮಾಲೀಕರು ಸಜ್ಜಾಗುತ್ತಿದ್ದಾರೆ.
ರಾಣಿ ಚೆನ್ನಭೈರಾದೇವಿ ಸಿನಿಮಾಗಳನ್ನು ನಿರ್ಮಿಸುತ್ತಿರುವ ‘ಎ ಆರ್ ಪ್ರೊಡಕ್ಷನ್ಸ್’ ಸಂಸ್ಥೆಯ ಮುಖ್ಯ ನಿರ್ಮಾಪಕ ಅರುಣ್ ರೈ ತೋಡಾರ್ ಇವರು ಮೂಲತಃ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ತೋಡಾರ್ ಎನ್ನುವ ಗ್ರಾಮದವರು. ಇವರು ಕರಾವಳಿಯ ಸಂಸ್ಕೃತಿ, ಕಲೆ ಹಾಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದೊಂದಿಗೆ ಆಳವಾದ ಒಡನಾಟ ಹೊಂದಿರುವವರು. ಇದೇ ಕಾರಣಕ್ಕೆ ಇವರು ರಾಜೇಂದ್ರ ಸಿಂಗ್ ಬಾಬು ಅವರ ಜೊತೆಗೂಡಿ ಮೊದಲು ವೀರ ಕಂಬಳ ಸಿನಿಮಾ ನಿರ್ಮಿಸಿದರು. ಈಗ ಕರಾವಳಿಯದ್ದೇ ಇತಿಹಾಸವಾಗಿರುವ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಅವರ ಕಥೆಯನ್ನು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ.
ಡಾ. ವಿನಿತಾ ವಿಜಯಕುಮಾರ್ ರೆಡ್ಡಿ ಇವರು ಮೂಲತಃ ಕರ್ನಾಟಕದ ಗಡಿಭಾಗದ ಹಾಗೂ ನೆರೆರಾಜ್ಯದ ಹಿನ್ನೆಲೆಯುಳ್ಳವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಉದ್ಯಮಿಯಾಗಿ, ಶಿಕ್ಷಣ ತಜ್ಞೆಯಾಗಿ ಗುರುತಿಸಿಕೊಂಡಿರುವ ಇವರು ಕಲೆ ಮತ್ತು ಚಲನಚಿತ್ರ ರಂಗದ ಮೇಲಿನ ಆಸಕ್ತಿಯಿಂದಾಗಿ ಅರುಣ್ ರೈ ಅವರ ಜೊತೆ ಸೇರಿ ಈ ದೊಡ್ಡ ಬಜೆಟ್ನ ಐತಿಹಾಸಿಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ.
ಚಿತ್ರೀಕರಣದ ಸ್ಥಳಗಳು ಮತ್ತು ಭವ್ಯ ಸೆಟ್ಗಳು
ಈ ಹೊಸ ರಾಣಿ ಚೆನ್ನಭೈರಾದೇವಿ ಐತಿಹಾಸಿಕ ಸಿನಿಮಾ ಸದ್ಯ ಪ್ರಿ-ಪ್ರೊಡಕ್ಷನ್ ಚಿತ್ರೀಕರಣದ ಪೂರ್ವ ತಯಾರಿ ಹಂತದಲ್ಲಿದೆ. ಹಾಗಾಗಿ ಅಧಿಕೃತ ಚಿತ್ರೀಕರಣ ಇನ್ನು ಆರಂಭವಾಗದ ಕಾರಣ ನಿರ್ದಿಷ್ಟ ಲೊಕೇಶನ್ಗಳ ಸಂಪೂರ್ಣ ಪಟ್ಟಿಯನ್ನು ಚಿತ್ರತಂಡ ಇನ್ನು ಬಿಟ್ಟುಕೊಟ್ಟಿಲ್ಲ.
ಕಥೆಯ ಹಿನ್ನೆಲೆ ಮತ್ತು ನಿರ್ದೇಶಕರ ಯೋಜನೆಗಳ ಪ್ರಕಾರ ಸಾಧ್ಯವಿರುವ ಪ್ರಮುಖ ಶೂಟಿಂಗ್ ಲೊಕೇಶನ್ಗಳು ರಾಣಿ ಚೆನ್ನಭೈರಾದೇವಿ ಆಳಿದ ಸಾಮ್ರಾಜ್ಯದ ನೈಜ ಚಿತ್ರಣವನ್ನು ನೀಡಲು ಕರಾವಳಿಯ ನೈಜ ತಾಣಗಳಲ್ಲೇ ಶೂಟಿಂಗ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ. ಗೇರುಸೊಪ್ಪೆ ಮತ್ತು ಹೊನ್ನಾವರ ಇದು ರಾಣಿಯ ರಾಜಧಾನಿಯಾಗಿದ್ದರಿಂದ ಇಲ್ಲಿನ ಶರಾವತಿ ನದಿ ತೀರ ಮತ್ತು ಐತಿಹಾಸಿಕ ಜೈನ ಬಸದಿಗಳ ಸುತ್ತಮುತ್ತ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವ ಸಾಧ್ಯತೆ ಇದೆ.
ರಾಣಿ ಚೆನ್ನಭೈರಾದೇವಿ ಭದ್ರಪಡಿಸಿದ ಮತ್ತು ಆಕೆಯ ಆಡಳಿತದ ಪ್ರಮುಖ ಕೇಂದ್ರವಾಗಿದ್ದ ಕುಮಟಾ ಬಳಿಯ ಮಿರ್ಜಾನ್ ಕೋಟೆಯಲ್ಲಿ ಪ್ರಮುಖ ಐತಿಹಾಸಿಕ ದೃಶ್ಯಗಳ ಚಿತ್ರೀಕರಣ ನಡೆಯುವ ಸಾಧ್ಯತೆ ದಟ್ಟವಾಗಿದೆ. ಪೋರ್ಚುಗೀಸರ ವಿರುದ್ಧ ನಡೆದ ಸಮುದ್ರದ ಯುದ್ಧಗಳು ಮತ್ತು ಮೆಣಸಿನ ವ್ಯಾಪಾರದ ಬಂದರುಗಳ ದೃಶ್ಯಗಳಿಗಾಗಿ ಉತ್ತರ ಕನ್ನಡದ ಕಡಲತೀರಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
16ನೇ ಶತಮಾನದ ವೈಭವದ ಗೇರುಸೊಪ್ಪೆ ಅರಮನೆ ಮತ್ತು ಯುದ್ಧದ ಕೋಟೆಗಳನ್ನು ಮರುಸೃಷ್ಟಿಸಲು ಬೆಂಗಳೂರಿನ ಪ್ರಮುಖ ಸ್ಟುಡಿಯೋಗಳಲ್ಲಿ ಕಂಠೀರವ ಸ್ಟುಡಿಯೋ ಅಥವಾ ಇನ್ನಿತರ ದೊಡ್ಡ ಫಿಲ್ಮ್ ಸಿಟಿಗಳಲ್ಲಿ ಭಾರಿ ವೆಚ್ಚದ ಸೆಟ್ಗಳನ್ನು ಹಾಕಲು ನಿರ್ಮಾಣ ಸಂಸ್ಥೆಯಾದ ‘ಎ ಆರ್ ಪ್ರೊಡಕ್ಷನ್ಸ್’ ಉದ್ದೇಶಿಸಿದೆ.
ಬರಹ : ಅರುಣ್ ಪ್ರಸಾದ್, ಹಿರಿಯ ಬರಹಗಾರರು
