ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾನವೀಯ ಕಾರ್ಯವೊಂದಕ್ಕೆ ಸಾಕ್ಷಿಯಾಗಿದ್ದಾರೆ. ನಗರ ಪೊಲೀಸ್ ಸ್ಟೇಷನ್ ಬೀಟ್ ಸಿಬ್ಬಂದಿ ತಮ್ಮ ವ್ಯಾಪ್ತಿಯೊಳಗೆ ಗಸ್ತು ತಿರುಗುತ್ತಿದ್ದಾಗ ಅನಾಥವಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಅವರಿಗೆ ಆಸರೆ ಒದಗಿಸಿದ್ದಾರೆ.
ಮಾಸ್ತಿಕಟ್ಟೆಯಲ್ಲಿ ನಡೆದ ಘಟನೆಯಿದು. ಇಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಅಲೆದಾಡುತ್ತಿರುವುದು ಬೀಟ್ ಸಿಬ್ಬಂದಿ ಗಮನಕ್ಕೆ ಬಂದಿದೆ. ಅಸ್ವಸ್ಥ ಸ್ಥಿತಿಯಲ್ಲಿ ನಿರಾಶ್ರಿತರಾಗಿದ್ದ ಮಹಿಳೆಯನ್ನು ಕಂಡ ಸಿಬ್ಬಂದಿ, ತಕ್ಷಣವೇ ಸ್ಪಂದಿಸಿ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಸಿಕ್ತು ಟರ್ನಿಂಗ್ ಪಾಯಿಂಟ್
ಬಳಿಕ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಸೇರಿ, ಮಹಿಳೆಯ ಪೂರ್ವಾಪರ ಮಾಹಿತಿ ಹಾಗೂ ಆಕೆಯ ಸಂಬಂಧಿಕರ ವಿಷಯವನ್ನು ಕಲೆಹಾಕಿದ್ದಾರೆ. ಹಾಗೂ ಹೀಗೂ ಮಾಡಿ, ಅಸ್ವಸ್ಥ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಮಹಿಳೆಯ ವಿಷಯ ತಿಳಿದು ಸಂತ್ರಸ್ತ ಮಹಿಳೆಯ ಚಿಕ್ಕಮ್ಮ ಆಶ್ರಯ ನೀಡಲು ಮುಂದೆ ಬಂದಿದ್ದರಿಂದ ಅವರೊಂದಿಗೆ ಅಸ್ವಸ್ಥ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಇತ್ತ ಕರ್ತವ್ಯದ ಜೊತೆಗೆ ಸಾಮಾಜಿಕ ಕಳಕಳಿ ಮೆರೆದ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೆಲಸಕ್ಕೆ ಎಸ್ಪಿ ನಿಖಿಲ್ ಬಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
