SHIVAMOGGA NEWS / Malenadu today/ Nov 25, 2023 | Malenadutoday.com
SHIVAMOGGA | ರಾಜ್ಯದಲ್ಲಿ ವನ್ಯಜೀವಿಗಳ ಹಾವಳಿಯಿಂದಾಗಿ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.ಅದರಲ್ಲೂ ಕಾಡಾನೆ ದಾಳಿಯಿಂದ ರೈತರ ಬೆಳೆ ಹಾನಿಯಾಗಿತ್ತಿದ್ದು, ಒಂದೆದೆ ಬೆಳೆಹಾನಿ ಮತ್ತೊಂದೆಡೆ ಪ್ರಾಣ ಹಾನಿಯಾಗುತ್ತಿದೆ. ತೋಟಗಳಿಗೆ ಲಗ್ಗೆಯಿಡುವ ಕಾಡಾನೆಗಳನ್ನು ಸೆರೆಹಿಡಿಯಲು ಇಲ್ಲವೇ ಹಿಮ್ಮೆಟ್ಟಿಸಲು ರಾಜ್ಯ ಸರ್ಕಾರ ಜಾರಿಗೆ ತಂದ ಎಲಿಫೆಂಟ್ ಟಾಸ್ಟ್ ಫೋರ್ಸ್ ಗೆ ದಂತವೇ ಇಲ್ಲದಂತಾಗಿದೆ.
ಟಾಸ್ಕ್ ಫೋರ್ಸ್ ನಲ್ಲಿ ಕರ್ತವ್ಯ ನಿರ್ವಹಿಸುವ ಅರೆಕಾಲಿಕ ಗುತ್ತಿಗೆ ಕಾರ್ಮಿಕರಿಗೆ ಪೂರ್ವಭಾವಿಯಾಗಿ ಯಾವುದೇ ತರಬೇತಿ ನೀಡದೆ , ಹಾಗೆಯೇ ಆನೆ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿಬ್ಬಂದಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತ ವರದಿ ಇಲ್ಲಿದೆ.
ರಾಜ್ಯದಲ್ಲಿ ಈಗ ಎಲ್ಲಿ ಕೇಳಿದರೂ ಆನೆಗಳ ಹಾವಳಿಯದ್ದೇ ಸದ್ದು, ಕಾಡಾನೆ ಹೊಲಗದ್ದೆಗಳಿಗೆ ನುಗ್ಗಿತಂತೆ…ಒಬ್ಬನನ್ನು ಕೊಂದಿತಂತೆ ಎಂಬ ಚರ್ಚೆಗಳು ದಿನದಿನಕ್ಕೂ ಹೆಚ್ಚು ಮೈಲೆಜ್ ಪಡೆಯುತ್ತಿದೆ. ಇದು ವನ್ಯಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷ ಹೆಚ್ಚುವಂತೆ ಮಾಡಿದೆ. ಕಾಡಾನೆಗಳು ತೋಟ ಹೊಲ ಗದ್ದೆಗಳಲ್ಲಿ ಘೀಳಿಡುವುದು ಇದೇ ಮೊದಲಲ್ಲ. ಹಿಂದಿನಿಂದಲೂ ಅವುಗಳ ಕಾರಿಡಾರ್ ನಲ್ಲೇ ಚಲಿಸುತ್ತಿರುವುದರಿಂದ ಈ ನೆಲದ ಹಕ್ಕು ನಮ್ಮದೆಂಬ ಹಕ್ಕುದಾರಿಕೆಯನ್ನು ಅವು ಮಂಡಿಸುತ್ತಿದೆ. ಕಾಡು ಕಡಿದು ತೋಟ ಹೊಲಗದ್ದೆಗಳಾದ ನಂತರದಲ್ಲಿ ಇದು ಸಂಘರ್ಷಕ್ಕೆ ನಾಂದಿ ಹಾಡಿದೆ.
READ :ಮೂರು ಕಾಡಾನೆ ಹಿಡಿದು ರೇಡಿಯೋ ಕಾಲರಿಂಗ್ ಅಳವಡಿಸಲು ಆದೇಶ! ಏನಿದು ವಿಚಾರ
ತೋಟ ಹೊಲ ಗದ್ದೆಗಳ ಬೆಳೆ ಹಾನಿ ಜೀವ ಹಾನಿ ತಪ್ಪಿಸಲು ರಾಜ್ಯ ಸರ್ಕಾರ ಎಲಿಫೆಂಟ್ ಟಾಸ್ಟ್ ಫೋರ್ಸ್ ರಚನೆ ಮಾಡಿದೆ. ಕಾಡಾನೆ ಮಾನವ ಪ್ರದೇಶಕ್ಕೆ ತೋಟ ಹೊಲಗದ್ದೆಗಳಿಗೆ ಘೀಳಿಟ್ಟರೆ, ಪ್ರಾಣಹಾನಿ ಮಾಡಿದರೆ, ಅದನ್ನು ಹಿಮ್ಮೆಟ್ಟಿಸುವ ಇಲ್ಲವೇ ಸೆರೆಹಿಡಿದು ಕಾಡಿಗೆ ಅಥವಾ ಬಿಡಾರಕ್ಕೆ ಬಿಡುವ ಕೆಲಸದ ಜವಬ್ದಾರಿ ಈ ಟಾಸ್ಕ್ ಪೋರ್ಸ್ ಮೇಲಿರುತ್ತದೆ.
ಆದರೆ ಈ ವಿಭಾಗವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ಟಾಸ್ಕ್ ಫೋರ್ಸ್ ಗೆ ಡಿ.ಎಎಫ್.ಓ ಆರ್.ಎಫ್ ಓ ಮಟ್ಟದ ಅಧಿಕಾರಿ ಇರುತ್ತಾರೆ. ಅದನ್ನು ಬಿಟ್ಟರೆ ಸಿಬ್ಬಂದಿಗಳಾಗಿ ಕೆಲಸ ಮಾಡುವವರು ಹೊರಗುತ್ತಿಗೆ ಕಾರ್ಮಿಕರೇ ಆಗಿದ್ದಾರೆ. ಇವರು ಹೊರಗುತ್ತಿಗೆ ಆಧಾರದಲ್ಲಿಯೇ ಕೆಲಸ ಮಾಡುತ್ತಾರೆ. ಇವರಿಗೆ ಆನೆ ಕಾರ್ಯಾಚರಣೆಯ ಯಾವುದೇ ತರಬೇತಿ ನೀಡಿರುವುದಿಲ್ಲ. ಕೈಗೆ ಪಟಾಕಿ ಕೊಟ್ಟು ಸದ್ದು ಮಾಡುತ್ತಾ ಆನೆ ಓಡಿಸುವುದು ಲೇಮನ್ ಕೆಲಸ ಎಂದು ಅಧಿಕಾರಿಗಳು ಭಾವಿಸಿದಂತಿದೆ.
ಈಗಾಗಲೇ ರಾಜ್ಯದಲ್ಲಿ ಹಾಸನ ಚಿಕ್ಕಮಗಳೂರು ಸಿರಿಗೆರೆ ಭಾಗಗಳಲ್ಲಿ ಆನೆಗಳನ್ನು ಹಿಮ್ಮೆಟ್ಸಿಸುವ ಕಾರ್ಯ ನಡೆಯುತ್ತಿದೆ. ಇದರಲ್ಲಿ ಕೆಳ ಹಂತದ ಸಿಬ್ಬಂದಿಗಳು ಹೆಚ್ಚಿನ ಜವಬ್ದಾರಿ ಹೊತ್ತಿರುತ್ತಾರೆ. ಆನೆಗಳನ್ನು ಹಿಮ್ಮೆಟ್ಟಿಸುವಾಗ ಇವರ ಕೈಯಲ್ಲಿ ಒಂದಿಟ್ಟು ಪಟಾಕಿ ಸಿಡಿಸುವ ಮೂಲಕ ಓಡಿಸುತ್ತಾರೆ. ಒಂದೆಡೆ ಆತಂಕಗೊಂಡ ಜನತೆಯಿಂದಲೂ ಪಟಾಕಿ ಡಂಗೂರದ ಸದ್ದಿನಿಂದ ಮೊದಲೇ ಕಾಡಾನೆ ರೊಚ್ಚಿಗೆದ್ದಿರುತ್ತದೆ.
READ : ಭತ್ತದ ಗದ್ದೆಯಲ್ಲಿ ಕಾಡಾನೆಗಳ ಹಿಂಡು! ಶಿವಮೊಗ್ಗ-ಹಾವೇರಿ ಜನರಲ್ಲಿ ಆತಂಕ!
ಆನೆಯ ಬಗ್ಗೆ ಅರಿವಿಲ್ಲದ ತರಬೇತಿ ಹೊಂದಿರದ ಸಿಬ್ಬಂದಿಗಳು ಜೋಷ್ ನಲ್ಲಿ ಕಾಡಾನೆ ಸನಿಹದವರೆಗೂ ಹೋಗಿ ಬಿಡುತ್ತಾರೆ.ಓಡುತ್ತಿದ್ದ ಆನೆ ಒಮ್ಮೆಲೆ ಹಿಂದುರುಗಿ ತನ್ನ ಹಿಂಬಾಲಿಸುತ್ತಿದ್ದವರ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡುತ್ತದೆ. ಇದು ಪ್ರಾಣಿಯೊಂದು ತನ್ನ ಆತ್ಮ ರಕ್ಷಣೆಗಾಗಿ ಮಾಡಿಕೊಳ್ಳುವ ಯುದ್ದವೇ ಆಗಿರುತ್ತದೆ. ಹೀಗಾಗಿ ಇಲ್ಲಿ ಆನೆಗಳನ್ನು ಹಿಮ್ಮೆಟ್ಟಿಸುವ ಸಿಬ್ಬಂದಿಗಳಿಗೆ ಪೂರ್ವಭಾವಿಯಾಗಿ ಖಡಕ್ ತರಬೇತಿಯನ್ನು ನೀಡಬೇಕಾಗುತ್ತದೆ.
ಇನ್ನು ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಮಾವುತ ಕಾವಾಡಿಗಳಿಗೆ ಆನೆ ಬಗ್ಗೆ ಸಮಗ್ರ ಜ್ಞಾನ ಇರುವುದರಿಂದ..ಇವರು ಚಾಣಾಕ್ಷವಾಗಿಯೇ ಕೆಲಸ ಮಾಡುತ್ತಾರೆ. ಇವರು ಆನೆಗಳ ಮೇಲೆ ಕೆಲಸ ಮಾಡುವುದರಿಂದ ಅಪಾಯ ಕಡಿಮೆ. ಆದರೆ ಕಾಲ್ನಡಿಗೆಯಲ್ಲಿ ಸಾಗುತ್ತಾ, ಕಾಡಾನೆ ಹಿಮ್ಮೆಟ್ಟಿಸುವ ಸಿಬ್ಬಂದಿಗಳಿಗೆ ಮಾತ್ರ ಜೀವ ರಕ್ಷಣೆ ಎಂಬುದಿಲ್ಲ. ಕೈಯಲ್ಲಿ ಪಚಾಕಿ ಹೊರತು ಪಡಿಸಿದ್ರೆ ತಮ್ಮನ್ನು ತಾವು ರಕ್ಷಿಸಿಸೊಳ್ಳುವುದಕ್ಕೆ ಬಂದೂಕು ಕೂಡ ಇರುವುದಿಲ್ಲ.
ಈಗಾಗಲೇ ಎಲಿಫೆಂಟ್ ಟಾಸ್ಕ್ ಪೋರ್ಸ್ ನ ಸಿಬ್ಬಂದಿಗಳು ಆನೆ ದಾಳಿಗೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆ ಸೂಕ್ತ ತರಬೇತಿ, ಜೀವವಿಮೆಯಂತ ಪಾಲಿಸಿಯನ್ನು ಸರ್ಕಾರ ಮಾಡಿಸಬೇಕಿದೆ. ಇಲ್ಲವಾದಲ್ಲಿ ಒಂದೆಡೆ ಕಾಡಾನೆಯಿಂದ ಜನರು ಸಾಯುತ್ತಿದ್ದಾರೆ ಇಲಾಖೆಯ ಸಿಬ್ಬಂದಿಗಳು ಸಾಯುತ್ತಿದ್ದಾರೆ. ಇದೊಂದು ರೀತಿಯಲ್ಲಿ ಔಟ್ ರೇಟೆಡ್ ಸೆಚುಯೇಷನ್. ಇದನ್ನು ಫೀಲ್ಡ್ ನಲ್ಲಿ ಕಂಟ್ರೊಲ್ ಮಾಡಲು ಸಾಧ್ಯವಾಗುತ್ತಿಲ್ಲ.
ಎಲಿಫೆಟ್ ಟಾಸ್ಕ್ ಫೋರ್ಸ್ ನಿರ್ವಹಣೆಗೆ ಅಧಿಕಾರಿಗಳೇ ಇಲ್ಲ
ಇದು ಅಚ್ಚರಿಯಾದರೂ ನಿಜಕ್ಕೂ ಬೇಸರದ ಸಂಗತಿ. ಯಾವ ಸದುದ್ದೇಶದಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ ಜಾರಿಗೆ ಬಂತೋ ಅದರ ಆಶೋತ್ತರಗಳೂ ಈವರೆಗೂ ಈಡೇರಿಲ್ಲ. ಈ ವಿಭಾಗದಲ್ಲಿ ಬಹಳಷ್ಟು ಅಧಿಕಾರಿಗಳ ಹುದ್ದೆ ಖಾಲಿ ಖಾಲಿಯಾಗಿದೆ. ಡಿಎಫ್.ಓ, ಎ ಸಿಎಫ್ ಆರ್ ಎಫ್ ಓ, ಹುದ್ದೆಗಳೇ ಅಲ್ಲಲ್ಲಿ ಖಾಲಿ ಇವೆ. ರಾಜ್ಯದಲ್ಲಿ 58 ಡಿ.ಎಪ್.ಓ ಹುದ್ದೆಗಳು ಭರ್ತಿಯಾಗಿಲ್ಲ.
ಡಿಎಫ್.ಓ ಹುದ್ದೆಗಳಿಗೆ ಕೆಳ ಹಂತದ ಅಧಿಕಾರಿಗಳಿಗೆ ಬಡ್ತಿಯನ್ನೇ ನೀಡಿಲ್ಲ. ಎಲಿಫೆಂಟ್ ಟಾಸ್ಕ್ ಫೋರ್ಸ್ ಗೆ ಪ್ರತ್ಯೇಕ ಡಿಎಫ್ ಓ ಇದ್ದಿದ್ದರೆ ಅಂತಹ ಅಧಿಕಾರಿ ಸ್ಥಳದಲ್ಲೇ ಕೂತು ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ. ಈಗಿರುವ ಹಾಲಿ ಡಿ.ಎಪ್.ಓ ಗಳಿಗೆ ಡಬಲ್ ಚಾರ್ಚ್ ಕೊಟ್ಟರೆ..ಆ ಅಧಿಕಾರಿ ಯಾವ ವಿಭಾಗಕ್ಕಂತ ಕೆಲಸ ಮಾಡಲು ಸಾಧ್ಯ.
ಈ ಹಿಂದೆ ಎಲಿಫೆಂಟ್ ಟಾಸ್ಕ್ ಪೋರ್ಸ್ ಆದಾಗ ಡಿಎಫ್ಓ ಹುದ್ದೆಯ ಅಧಿಕಾರಿ ಇದ್ದಾಗ ಅನಾಹುತಗಳು ಕಡಿಮೆಯಾಗಿದ್ದವು. ಚಿಕ್ಕಮಗಳೂರಿನಲ್ಲಿ ಮೊನ್ನೆ ಆನೆ ಕಾರ್ಯಾಚರಣೆಯ ಜವಬ್ದಾರಿಯನ್ನು ರೆಗ್ಯುಲರ್ ಡಿಎಫ್ ಓ ಎಪಿಎಸ್ ಹಾಗು ಆರ್ ಎಫ್ ಓ ಗೆ ನೀಡಲಾಗಿತ್ತು.. ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿ ಮೇಲ್ಪಟ್ಟ ಹುದ್ದೆಗಳಿಗೆ ಮುಂಬಡ್ತಿ ನೀಡುವ ಅವಕಾಶ ಇದ್ದಾಗಲೂ ಸರ್ಕಾರ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಸರ್ಕಾರ ಎಲಿಫೆಂಟ್ ಟಾಸ್ಕ್ ಫೋರ್ಸ್ ಗೆ ಜೀವ ನೀಡಬೇಕಿದೆ. ವನ್ಯಜೀವಿಗಳ ಬಗ್ಗೆ ಕಾಳಜಿ ಇರುವ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಸೂಕ್ತ ತರಬೇತಿಯೊಂದಿಗೆ ಕಾರ್ಯಾಚರಣೆಗಿಳಿಸಬೇಕಿದೆ.